ಪ್ರೌಢಶಾಲಾ ಮುಖ್ಯ ಗುರುಗಳ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕಿಂತ ಹೆಚ್ಚಿನ ಫಲಿತಾಂಶ ಬರಲು ಆರಂಭದಿಂದಲೇ ಯೋಜನೆ ರೂಪಿಸಿ ಜಾರಿಗೆ ತರಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ. ಪೂಜಾರ ಹೇಳಿದರು.
ಪಟ್ಟಣದ ಜಿಪಿಜಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಪ್ರೌಢಶಾಲಾ ಮುಖ್ಯ ಗುರುಗಳ ಸಭೆಯಲ್ಲಿ ಮಾತನಾಡಿ, ಜ್ಞಾನಸಿರಿ ಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಲಕ್ಷ್ಮಿ ಬಿದರಹಳ್ಳಿ625ಕ್ಕೆ 625 ಅಂಕ ಪಡೆದು ತಾಲೂಕಿನ ಹಿರಿಮೆ ಹೆಚ್ಚಿಸಿದ್ದಾರೆ ಎಂದರು.
ಮೂಲಭೂತ ಸಾಕ್ಷರತೆ, ಸರಳ ಓದು-ಬರಹ, ಸರಳ ಲೆಕ್ಕ ಬಿಡಿಸುವ, ಜ್ಞಾನ ಹೆಚ್ಚಿಸುವ ಕೆಲಸ ನಿರಂತರವಾಗಿ ಆಗಬೇಕಿದೆ. ಸೇತುಬಂಧ ಪರೀಕ್ಷೆಗಳನ್ನು ನಡೆಸಿ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪಟ್ಟಿ ಮಾಡಿ ಮೂಲಭೂತ ಕಲಿಕಾ ಕೌಶಲ್ಯ ವೃದ್ಧಿಸಲು ಕ್ರಮ ಕೈಗೊಳ್ಳಬೇಕೆಂದು ಹೇಳಿದರು.ಕಲ್ಯಾಣ ಕರ್ನಾಟಕದಲ್ಲಿಯೇ ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶ ಲಭಿಸಿದೆ. ಕಳೆದ ಬಾರಿಯ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರುವ ಮೂಲಕ ಕಾರ್ಯನಿರ್ವಹಿಸಿ ಎಂದ ಅವರು, ಪ್ರತಿದಿನ ಪ್ರತಿ ಅವಧಿಯಲ್ಲಿ ತರಗತಿ ನಿರ್ವಹಣೆ ಇತರೆ ಶೈಕ್ಷಣಿಕ ಚಟುವಟಿಕೆಗಳನ್ನು ಶಿಕ್ಷಕರು, ಡೈರಿಯಲ್ಲಿ ದಾಖಲು ಮಾಡಲು ಮಾಹಿತಿ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎ.ಕೋಟೆಪ್ಪ ಮಾತನಾಡಿ, ವಿದ್ಯಾರ್ಥಿ ಸಾಧನೆ ತಂತ್ರಾಂಶ ದಾಖಲಾತಿ ಹಾಜರಾತಿ ಪಠ್ಯ ಪುಸ್ತಕ ವಿವಿಧ ಯೋಜನೆಗಳನ್ನು, ಎಸ್ಎಟಿಎಸ್ನಲ್ಲಿ ಭರ್ತಿ ಮಾಡುವ ಕುರಿತು ಮಾಹಿತಿ ನೀಡಿದರು.ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ.ಹನುಮಂತಪ್ಪ ಮಾತನಾಡಿ, ಬಿಸಿಯೂಟ ಮೊಟ್ಟೆ ಅಥವಾ ಬಾಳೆಹಣ್ಣು ವಿತರಿಸಿದ ವಿವರಗಳನ್ನು ತಂತ್ರಾಂಶದಲ್ಲಿ ದಿನವಹಿ ತುಂಬಲು ತಿಳಿಸಿದರು.
ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಜಿ.ಎಂ. ಕಾಂತೇಶ್, ಪ್ರಭಾರಿ ಉಪ ಪ್ರಾಚಾರ್ಯ ಜಿ.ಕವಿತಾ, ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಎಚ್.ಮಲ್ಲಿಕಾರ್ಜುನ ಉಪಸ್ಥಿತರಿದ್ದರು. ತಾಲೂಕಿನ ಸರ್ಕಾರಿ ಅನುದಾನಿತ, ಅನುದಾನ ರಹಿತ, ಮೊರಾರ್ಜಿ ವಸತಿ ಪ್ರೌಢಶಾಲೆಗಳ ಮುಖ್ಯ ಗುರುಗಳು ಭಾಗವಹಿಸಿದ್ದರು.