ಕನ್ನಡಪ್ರಭ ವಾರ್ತೆ ಬೇಲೂರುಆಶ್ರಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಪಾರದರ್ಶಕವಾಗಿ ನಿವೇಶನ ಹಂಚಿಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಒದಗಿಸುವುದೇ ನಿಜವಾದ ಜನಸೇವೆ ಶಾಸಕ ಎಚ್ ಕೆ ಸುರೇಶ್ ಎಂದು ಹೇಳಿದರು.ಪಟ್ಟಣದ ಜೂನಿಯರ್ ಕಾಲೇಜು ಮೈದಾನದ ಹಿಂಭಾಗದ ಗುಡಿಸಲು ಮನೆಗಳ ಆವರಣದಲ್ಲಿ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿ, ಆಶ್ರಯ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಪಾರದರ್ಶಕವಾಗಿ ನಿವೇಶನ ಹಂಚಿಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು. ಈ ಹಿಂದೆ 54 ಅರ್ಜಿಗಳಿದ್ದು, ಹಳೆಯ ಅರ್ಜಿಗಳನ್ನು ಸೇರಿಸಿ ಒಟ್ಟು 61 ಅರ್ಜಿಗಳನ್ನು ಪರಿಗಣಿಸಲಾಗಿದೆ. ಒಟ್ಟು 192 ಸೈಟ್ಗಳ ಪೈಕಿ ಮೊದಲ ಹಂತದಲ್ಲಿ 64 ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲರಿಗೆ ಆದ್ಯತೆ ನೀಡಲಾಗಿದ್ದು, ಕಳೆದ 15 ದಿನಗಳಿಂದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದರು.ರಾಜೀವ್ ಗಾಂಧಿ ಆಶ್ರಯ ಯೋಜನೆಯಡಿ ಫಲಾನುಭವಿಗಳ ಪಟ್ಟಿಯನ್ನು ಸಮಿತಿಯಲ್ಲಿ ಅನುಮೋದಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು. ಬಂಟೇನಹಳ್ಳಿಯಲ್ಲಿರುವ ಸುಮಾರು 4 ಎಕರೆ ಜಾಗದಲ್ಲಿಯೂ ಮುಂದಿನ ದಿನಗಳಲ್ಲಿ ನಿವೇಶನ ಹಂಚಿಕೆ ಮಾಡಲು ಯೋಜನೆ ರೂಪಿಸಲಾಗಿದೆ. ಅಲ್ಲದೆ ಶಂಕರದೇವರ ಪೇಟೆ, ಹೊಸನಗರ ಹಾಗೂ ಚನ್ನಕೇಶವ ನಗರ ಪ್ರದೇಶಗಳಲ್ಲಿಯೂ ಆಶ್ರಯ ಯೋಜನೆಗಾಗಿ ಸಾಕಷ್ಟು ಜಾಗ ಲಭ್ಯವಿದೆ ಎಂದು ಹೇಳಿದರು. ಆಶ್ರಯ ಸಮಿತಿ ಸದಸ್ಯ ಇಕ್ಬಾಲ್ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಆಶ್ರಯ ಯೋಜನೆಯಡಿ ಮನೆಗಳ ಹಂಚಿಕೆ ನಡೆದು ಸುಮಾರು 25ರಿಂದ 30 ವರ್ಷಗಳಾಗಿವೆ. ಬಡವರಿಗೆ ಮನೆ ಒದಗಿಸುವ ಉದ್ದೇಶದಿಂದ ತಹಸೀಲ್ದಾರ್ ಕಚೇರಿಯಿಂದ 5 ಎಕರೆ ಜಾಗ ಮಂಜೂರಾಗಿದ್ದರೂ, ಅದರಲ್ಲಿ 2.5 ಎಕರೆ ಜಾಗದ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ತಡೆಯಾಜ್ಞೆ ಜಾರಿಯಲ್ಲಿದೆ. ಆದರೂ ತಡೆಯಾಜ್ಞೆ ಇಲ್ಲದ ಉಳಿದ 2.5 ಎಕರೆ ಜಾಗದಲ್ಲಿ ವಿನ್ಯಾಸ ರೂಪಿಸಿ ಸುಮಾರು 100 ನಿವೇಶನಗಳನ್ನು ಸಿದ್ಧಪಡಿಸಲಾಗಿದ್ದು, ಅವುಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸಭೆಯಲ್ಲಿ ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ, ಆಶ್ರಯ ಸಮಿತಿ ಸದಸ್ಯರು, ಪುರಸಭೆ ಮುಖ್ಯಾಧಿಕಾರಿ ಬಸವರಾಜು ಶಿಗ್ಗಾವಿ, ಪುರಸಭೆ ಆರೋಗ್ಯ ಅಧಿಕಾರಿ ಲೋಹಿತ್ ಹಾಗೂ ಫಲಾನುಭವಿಗಳು ಇದ್ದರು.