ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣಅರಸೀಕೆರೆ ಕ್ಷೇತ್ರದ ಶಿವಲಿಂಗೇಗೌಡರಿಗೆ ಸಚಿವ ಸ್ಥಾನವನ್ನು ನೀಡಲೇಬೇಕು ಎಂದು ಮಾಜಿ ಶಾಸಕ ಸಿ ಎಸ್ ಪುಟ್ಟೇಗೌಡ ತಿಳಿಸಿದ್ದಾರೆ. ಪಟ್ಟಣದ ತಾಲೂಕು ಪತ್ರಕರ್ತರ ಸಂಘದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅರಸೀಕೆರೆ ಕ್ಷೇತ್ರದ ಶಿವಲಿಂಗೇಗೌಡರವರಿಗೆ ಕೂಡಲೇ ಸಚಿವ ಸ್ಥಾನವನ್ನು ನೀಡಬೇಕು ಏಕೆಂದರೆ ಜಿಲ್ಲೆಯಲ್ಲಿ ಏಕೈಕ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲವು ಸಾಧಿಸಿರುವ ನಾಯಕರು ಆಗಿದ್ದಾರೆ. ಈಗಾಗಲೇ ಹಾಸನ ಜಿಲ್ಲೆಯು ವಿವಿಧ ಜಿಲ್ಲಾ ಉಸ್ತುವಾರಿ ಸಚಿವರುಗಳು ಬಂದು ಹೋಗಿದ್ದಾರೆ ಆದರೂ ಕೂಡ ಜಿಲ್ಲೆಯಲ್ಲಿ ತಬ್ಬಲಿ ಸ್ಥಾನದಲ್ಲಿದೆ. ಈ ತಬ್ಬಲಿ ಸ್ಥಾನವನ್ನು ನೀಗಿಸುವ ಸಲುವಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲವು ಸಾಧಿಸಿರುವ ಶಿವಲಿಂಗೇಗೌಡರವರಿಗೆ ಸಚಿವ ಸ್ಥಾನವನ್ನು ನೀಡಿ ಜಿಲ್ಲೆಯ ಉಸ್ತುವಾರಿ ಸಚಿವರ ಸ್ಥಾನ ನೀಡಬೇಕು ಎಂದು ಜಿಲ್ಲಾ ಜನತೆಯ ಮತ್ತು ಕಾಂಗ್ರೆಸ್ ನಾಯಕರ ಪರವಾಗಿ ಕೋರುತ್ತಿದ್ದೇನೆ. ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಆದಂತಹ ಸಿದ್ದರಾಮಯ್ಯನವರು ರಾಜ್ಯದಲ್ಲಿ ಅತ್ಯುತ್ತಮ ಆಡಳಿತವನ್ನು ನೀಡಿದ್ದಾರೆ ಮತ್ತು ಜನಪರ ಕೆಲಸವನ್ನು ಕೂಡ ಮಾಡಿದ್ದಾರೆ. ತಾಲೂಕಿಗೆ ಮೂರು ಏತ ನೀರಾವರಿ ಯೋಜನೆಗಳನ್ನು ಸಹ ನೀಡಿದ್ದಾರೆ. ಈ ಏತ ನೀರಾವರಿ ಯೋಜನೆಗಳು ಬಹುದಿನಗಳಿಂದ ಕುಂಠಿತಗೊಂಡಿದ್ದವು. ಆದರೆ ಸಿದ್ದರಾಮಯ್ಯನವರು ಈ ಏತ ನೀರಾವರಿ ಯೋಜನೆಗೆ ಕಾಯಕಲ್ಪವನ್ನು ನೀಡಿದಂತಹ ಮಹಾನ್ ರಾಜಕಾರಣಿಗೆ ಜಿಲ್ಲೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳು ಹಾಗೂ ಈಗ ಹೊಸದಾಗಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿರುವ ಡಿ ಕೆ ಶಿವಕುಮಾರ್ ಅವರಿಗೂ ಕೂಡ ತುಂಬು ಹೃದಯದ ಅಭಿನಂದನೆಗಳು. ಕಾಂಗ್ರೆಸ್ ಇಡೀ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುವಲ್ಲಿ ಯಶಸ್ವಿ ಕಂಡಿದೆ. ಇದಕ್ಕೆ ಮೂಲ ಕೇಂದ್ರದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಇವರ ಪಾತ್ರ ಬಹುಮುಖ್ಯವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಗಿರೀಶ್ ಮುಂತಾದವರು ಹಾಜರಿದ್ದರು