ಕನ್ನಡಪ್ರಭ ವಾರ್ತೆ ಯಾದಗಿರಿ
ಪಿಎಂ ವಿಶ್ವಕರ್ಮ ಯೋಜನೆಯು ಕೇಂದ್ರ ಸರ್ಕಾರದ ಬಹು ಮುಖ್ಯ ಯೋಜನೆಯಾಗಿದ್ದು ಸಾಲ ಸೌಲಭ್ಯಕ್ಕಾಗಿ ಅರ್ಜಿ ಸ್ವೀಕಾರದಲ್ಲಿ ಯಾದಗಿರಿ ಜಿಲ್ಲೆ ರಾಜ್ಯದಲ್ಲಿಯೇ 5ನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ಹೇಳಿದರು.ನಗರದ ಎಸ್ಡಿಎನ್ ಹೋಟೆಲ್ನಲ್ಲಿ ಗ್ರಾಪಂ ಅಧ್ಯಕ್ಷರಿಗೆ ಪಿಎಂ ವಿಶ್ವಕರ್ಮ ಯೋಜನೆಯ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪಿಎಂ ವಿಶ್ವಕರ್ಮ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಇದರಡಿ 18 ವಿವಿಧ ವೃತ್ತಿಗಳ ಕುಶಲಕರ್ಮಿಗಳು ಅರ್ಜಿಸಲ್ಲಿಸಬಹುದಾಗಿದ್ದು, ಇಲ್ಲಿಯವರೆಗೆ 30000 ಅರ್ಜಿಗಳು ಸ್ವೀಕರಿಸಲಾಗಿದ್ದು, 2ನೇ ಹಂತದಲ್ಲಿ ಸುಮಾರು 18000 ಅರ್ಜಿ ವಿಲೇವಾರಿ ಮಾಡಲಾಗಿದೆ. ಅದರಂತೆ 3ನೇ ಹಂತದಲ್ಲಿ 6700 ಅರ್ಜಿಗಳು ಕೇಂದ್ರದಿಂದ ಪರಿಶೀಲಿಸಲಾಗಿದೆ. ನಮ್ಮ ಜಿಲ್ಲೆಯು ರಾಜ್ಯದಲ್ಲಿಯೇ 5ನೇ ಸ್ಥಾನದಲ್ಲಿದೆ ಎಂದರು.ಈ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಕುಶಲಕರ್ಮಿ ಉಪಕರಣವನ್ನು ಪಡೆಯಲು ಸಹಾಯಧನ ಮುಂದುವರೆಸಿ ಒಂದರಿಂದ ಮೂರು ಲಕ್ಷದವರೆಗೆ ಸಾಲವನ್ನು ಕೇವಲ ಶೇ.5ರಷ್ಟು ಬಡ್ಡಿಯೊಂದಿಗೆ ಸಾಲ ಸೌಲಭ್ಯ ಪಡೆಯಬಹುದಾಗಿದೆ ಎಂದು ಹೇಳಿದರು.
ಕೈಗಾರಿಕೆ ಇಲಾಖೆ ಸಹಾಯಕ ಜಂಟಿ ನಿರ್ದೇಶಕಿ ರೇಖಾ. ಎನ್. ಮ್ಯಾಗೇರಿ ಮಾತನಾಡಿ, ಈ ಯೋಜನೆಯು ಕುಶಲಕರ್ಮಿಗಳಿಗೆ ಬಹು ಉಪಯುಕ್ತವಾಗಿದ್ದು, ಈ ಯೋಜನೆಯಡಿ ತರಬೇತಿ, ಸುಧಾರಿತ ಉಪಕರಣ ಪಡೆಯಲು ₹15000 ಹಾಗೂ ಸ್ವಯಂ ಉದ್ಯೋಗ ಆರಂಭಿಸಲು ₹1 ಲಕ್ಷ ವರೆಗೆ ಸಾಲ ಪಡೆಯಬಹುದಾಗಿದೆ ಎಂದು ತಿಳಿಸಿದರು.ಸಹಾಯಕ ನಿರ್ದೆಶಕರಾದ ಎಂ. ಸಲೀಮ್ ಕಾರ್ಯಕ್ರಮ ನಿರ್ವಹಿಸಿದರು. ಎಂ.ಎಸ್.ಎಂ. ಸಹಾಯಕ ನಿರ್ದೇಶಕ ಬಿ.ಎಸ್. ಜವಳಗಿ, ಸಿಡಾಕ್ ಜಂಟಿ ನಿರ್ದೇಶಕ ಜಿ.ಯು. ಹುಡೇದ್, ಜಿಲ್ಲಾ ವ್ಯವಸ್ಥಾಪಕ ಸಿ.ಎಸ್.ಸಿ ಕೇಂದ್ರ ಸಿದ್ದು ಪಾಟೀಲ್ ಹಾಗೂ ಕಾರ್ಯಗಾರದಲ್ಲಿ ಸುಮಾರು 150ಕ್ಕೂ ಹೆಚ್ಚು ಜನ ಗ್ರಾಪಂ ಅಧ್ಯಕ್ಷರು, ಫಲಾನುಭವಿಗಳು ಇದ್ದರು.