ಭಾನುವಾರ ಸಂಜೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅನ್ವೇಷಣೆ ಪ್ರಕಾಶನ ಗದಗ ಇವರ ಸಹಯೋಗದಲ್ಲಿ ಡಿ.ಜಿ.ಎಂ. ಆಯುರ್ವೇದ ಮಹಾವಿದ್ಯಾಲಯದಲ್ಲಿ ಸಂತೋಷ ಅಂಗಡಿ ಅವರು ಬರೆದ ಭವದ ಅಗುಳಿ ಕವನ ಸಂಕಲನ ಕವಿ, ಕತೆಗಾರ ಜಯಂತ ಕಾಯ್ಕಿಣಿ ಬಿಡುಗಡೆ ಮಾಡಿದರು.
ಸಂತೋಷ ಅಂಗಡಿ ಬರೆದ ಭವದ ಅಗುಳಿ ಕವನ ಸಂಕಲನ ಬಿಡುಗಡೆ
ಗದಗ: ಜೀವನಾನುಭವಗಳನ್ನು ಎರಕ ಹೊಯ್ದ ಕಾವ್ಯ ಬಹುಕಾಲ ಬಾಳುತ್ತದೆ. ಕವಿಯಾದವನು ಸುತ್ತಲಿನ ಜಗತ್ತನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಅನೇಕ ಸಂಗತಿಗಳು ಗೋಚರಿಸುತ್ತವೆ. ಅವುಗಳನ್ನೇ ವಸ್ತುವಾಗಿಸಿಕೊಂಡಾಗ ಸಾಮಾಜಿಕ ಸಂಬಂಧದೊಂದಿಗೆ ಕವಿತೆ ಹೊಸೆಯಲ್ಪಡುತ್ತದೆ. ಇಂತಹ ಕವಿತೆಗಳು ಮಾನವೀಯ ಅಂತ:ಕರಣದ ಒರತೆಗಳಾಗಿ ಗೋಚರಿಸುತ್ತವೆ ಎಂದು ಕವಿ, ಕತೆಗಾರ ಜಯಂತ ಕಾಯ್ಕಿಣಿ ಹೇಳಿದರು. ಅವರು ಭಾನುವಾರ ಸಂಜೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅನ್ವೇಷಣೆ ಪ್ರಕಾಶನ ಗದಗ ಇವರ ಸಹಯೋಗದಲ್ಲಿ ಡಿ.ಜಿ.ಎಂ. ಆಯುರ್ವೇದ ಮಹಾವಿದ್ಯಾಲಯದಲ್ಲಿ ಸಂತೋಷ ಅಂಗಡಿ ಅವರು ಬರೆದ ಭವದ ಅಗುಳಿ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಅಂತರಂಗದ ನುಡಿಗಳಿಗೆ ಅಕ್ಷರ ತೋರಣ ಕಟ್ಟುವ ಕಾರ್ಯ ಯುವ ಬರಹಗಾರರಿಂದ ಜರುಗಬೇಕು. ಭವದ ಅಗುಳಿ ಕವಿತಾ ಸಂಕಲನದ ಮೂಲಕ ಸಂತೋಷ ಅಂಗಡಿಯವರು ಭರವಸೆಯ ಕವಿಯಾಗಿ ಹೊರಹೊಮ್ಮಿದ್ದಾರೆ ಎಂದು ತಿಳಿಸಿದರು. ಗಂಗಾಧರ ಚಿತ್ತಾಲ, ಸು.ರಂ.ಎಕ್ಕುಂಡಿ ಮತ್ತು ವಿ.ಜಿ.ಭಟ್ಟರ ಅವರ ಕವಿತೆಗಳನ್ನು ಜನ್ಮಶತಮಾನೋತ್ಸವದ ಅಂಗವಾಗಿ ಮೆಲಕು ಹಾಕುವ ಕಾರ್ಯ ನಡೆಯಬೇಕಿದೆ ಎಂದರು. ವಿಮರ್ಶಕ ಜಿ.ಪಿ.ಬಸವರಾಜು ಮಾತನಾಡಿ, ಕಾವ್ಯ ಸಂಕ್ಷಿಪ್ತತೆ, ನಿಖರತೆ ಮತ್ತು ರೂಪಕಗಳನ್ನು ಹೊಂದಿ ಭಾಷಾ ಸೊಗಡಿನಿಂದ ಕೂಡಿರಬೇಕು. ಜೀವಪರ ಕಾಳಜಿ ಕವಿಯ ಧ್ಯೇಯವಾಗಿರಬೇಕು. ಭವದ ಅಗುಳಿಯ ಕವಿತೆಗಳು ಕಾವ್ಯದ ಜೊತೆಗೆ ಮುಖಾಮುಖಿಯಾಗುವ ಸಂದರ್ಭವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿವೆ ಎಂದರು. ಅನ್ವೇಷಣೆ ಪ್ರಕಾಶನದ ಆರ್.ಜಿ. ಹಳ್ಳಿ ನಾಗರಾಜ ಮಾತನಾಡಿ, ಸಾಹಿತ್ಯ ಪತ್ರಿಕೆಗಳ ಸಂಖ್ಯೆ ಕಡಿಮೆಯಾಗಿವೆ. ಅನ್ವೇಷಣೆ ಸಾಹಿತ್ಯ ಪತ್ರಿಕೆ ಓದುಗರಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳೆಸಿ ಚಿಂತನೆಗೆ ಹಚ್ಚುವಲ್ಲಿ ಕಾರ್ಯ ಮಾಡುತ್ತಿದೆ. ಯುವಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ, ಕೃತಿ ಪ್ರಕಟಿಸುವ ಕಾರ್ಯ ಮಾಡುತ್ತಿದೆ. ಭರವಸೆಯ ಬರಹಗಾರರು ಕನ್ನಡ ಸಾಹಿತ್ಯವನ್ನು ಹೊಸದಿಕ್ಕಿನತ್ತ ಕೊಂಡೊಯ್ಯುವ ಕಾರ್ಯ ಮಾಡಬೇಕು ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಚಂದ್ರಶೇಖರ ವಸ್ತ್ರದ, ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಡಿ.ಜಿ.ಎಂ. ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಂತೋಷ ಬೆಳವಡಿ, ಕವಿ ಸಂತೋಷ ಅಂಗಡಿ, ರವಿ ದೇವರಡ್ಡಿ ಮಾತನಾಡಿದರು. ನಿರ್ಮಲಾ ಶೆಟ್ಟರ ನಿರೂಪಿಸಿದರು. ಡಾ. ಚಿದಾನಂದ ಕಮ್ಮಾರ ಪರಿಚಯಿಸಿದರು. ಭಾಗ್ಯ ಪತ್ತಾರ ಹಾಡಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಶಿವಾನಂದ ಗಿಡ್ನಂದಿ ವಂದಿಸಿದರು.
ಕಾರ್ಯಕ್ರಮದಲ್ಲಿ ಕೆ.ಎಚ್.ಬೇಲೂರ, ಡಾ. ದತ್ತಪ್ರಸನ್ನ ಪಾಟೀಲ, ಡಾ. ಜಿ. ಬಿ. ಪಾಟೀಲ, ಡಾ. ಎಚ್.ಬಿ. ಪೂಜಾರ, ರತ್ನಕ್ಕ ಪಾಟೀಲ, ಎಂ.ಜಿ. ಗಚ್ಚಣ್ಣವರ, ಆರ್. ಎಲ್. ಪೋಲಿಸಪಾಟೀಲ, ಬಿ.ಎ.ಕೆಂಚರಡ್ಡಿ, ಪುಂಡಲೀಕ ಕಲ್ಲಿಗನೂರ, ಟಿ.ಎಸ್. ಗೊರವರ, ಡಾ. ನಿಂಗು ಸೊಲಗಿ, ಮಂಜುಳಾ ವೆಂಕಟೇಶಯ್ಯ, ಶಿಲ್ಪಾ ಮ್ಯಾಗೇರಿ, ಪದ್ಮಾ ಕಬಾಡಿ, ಬಸವರಾಜ ಗಣಪ್ಪನವರ, ಅಂದಾನಪ್ಪ ವಿಭೂತಿ, ವಿ.ವಿ. ನಡುವಿನಮನಿ, ಶಂಕರ ಕುಕನೂರ, ಡಾ. ಕೆ.ವಿ.ಸಂಕನಗೌಡರ, ಶಶಿಕಾಂತ ಕೊರ್ಲಹಳ್ಳಿ, ಶಾರದಾ ಬಾಣದ, ಮರುಳಸಿದ್ಧಪ್ಪ ದೊಡ್ಡಮನಿ, ಡಿ.ಎಸ್. ಬಾಪುರಿ, ಚಂದ್ರಪ್ಪ ಬಾರಂಗಿ, ಪಿ.ಟಿ.ಬೈಲಪ್ಪನವರ, ಎಸ್.ಎಂ.ಕಾತರಕಿ, ಜಯಶ್ರೀ ಶ್ರೀಗಿರಿ, ಎಸ್.ಎಂ.ಕಿತ್ತೂರ, ಡಾ. ರಶ್ಮಿ ಅಂಗಡಿ, ಚಂದ್ರಕಲಾ ಇಟಗಿಮಠ, ಬಸವರಾಜ ನೆಲಜೇರಿ, ನೀಲಮ್ಮ ಅಂಗಡಿ, ಪ್ರಕಾಶ ಕಡಮೆ, ಭಾಗ್ಯಜ್ಯೋತಿ ಹಿರೇಮಠ, ವೀಣಾ ನಿರಂಜನ, ಡಾ. ಲಕ್ಷ್ಮಣ ಬಿ.ಎ., ಅಣ್ಣಿಗೇರಿ, ಎಸ್.ಎಂ.ಗೌಡರ, ಮೊದಲಾದವರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.