ಮಳೆಹಬ್ಬದಲ್ಲಿ ಹೊಂಗಿರಣ ಕವಿಗೋಷ್ಠಿ, ಸನ್ಮಾನ

KannadaprabhaNewsNetwork | Published : Jun 25, 2025 11:48 PM

ರಾಜ್ಯಮಟ್ಟದ ಕವನ ಸ್ಪರ್ಧೆಗೆ ಸೂಕ್ತ ಗುಣ ಮಟ್ಟದ ಕವನಗಳೇ ಬಂದಿರಲಿಲ್ಲ.

ಕಾರವಾರ: ತಾಲೂಕಿನ ಕೈಗಾ ವಸತಿ ಸಂಕೀರ್ಣದಲ್ಲಿ ಸಹ್ಯಾದ್ರಿ ಕನ್ನಡ ಸಂಘ ಏರ್ಪಡಿಸಿದ್ದ ಮೂರು ದಿನಗಳ ಮಳೆಹಬ್ಬದ ಸಮಾರೋಪದಲ್ಲಿ ರಾಜ್ಯಮಟ್ಟದ ಕವನ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ, ಸಾಧಕರಿಗೆ ಸನ್ಮಾನ, ಮನರಂಜನಾ ಕಾರ್ಯಕ್ರಮ ನಡೆಯಿತು.ಕೈಗಾ ವಸತಿ ಸಂಕೀರ್ಣದ ಮಳೆ ಹಬ್ಬದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನೃತ್ಯ ವಿದೂಷಿ ಸ್ಮಿತಾ ಸುನೀಲ, ಸ್ಥಳೀಯವಾಗಿ ಗುರುತಿಸಿ ನನ್ನನ್ನು ಸನ್ಮಾನಿಸಿದ್ದು ನಿಜಕ್ಕೂ ಅರ್ಥಪೂರ್ಣವಾಗಿದೆ. ಎಲ್ಲಿಯೇ ನಾನು ಸಾಧನೆ ಮಾಡಿದರೂ ಮನೆಯ ಅಂಗಳದಲ್ಲಿ ಪ್ರಶಸ್ತಿ ಪಡೆಯುವುದು ನಿಜಕ್ಕೂ ಧನ್ಯ ಭಾವ ಮೂಡಿಸಿದೆ ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕವಿ ಡಾ.ಅಜಿತ್ ಹೆಗಡೆ ಹರೀಶಿ ಮಾತನಾಡಿ, ರಾಜ್ಯಮಟ್ಟದ ಕವನ ಸ್ಪರ್ಧೆಗೆ ಸೂಕ್ತ ಗುಣ ಮಟ್ಟದ ಕವನಗಳೇ ಬಂದಿರಲಿಲ್ಲ. ಕಾರಣ ದಿನಕ್ಕೊಂದು ಕವನ ಮತ್ತು ಅದನ್ನು ಶೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವ ಅರ್ಜೆಂಟ್ ಪ್ರಸಿದ್ಧಿಯ ಹಪಾಹಪಿ ಇವತ್ತು ಕವಿಗಳ ಮತ್ತು ಬರಹಗಾರರ ಗುಣಮಟ್ಟ ಕುಸಿಯುವಂತೆ ಮಾಡಿದೆ ಎಂದರು.

ಸಾಹಿತಿ, ಅಂಕಣಗಾರ ಸಂತೋಷಕುಮಾರ ಮೆಹೆಂದಳೆ ಮಾತನಾಡಿದರು. ಮಳೆಹಬ್ಬದ ಕೊನೆಯ ದಿನದಲ್ಲಿ ತಬಲ ಪಟುಗಳಾದ ಬ್ಯಯ್ಯಣ್ಣ ಮತ್ತು ಪ್ರದೀಪ ಹೆಗಡೆ, ಸಂಗೀತ ಕ್ಷೇತ್ರದ ರಘುಪತಿ ಮತ್ತು ಚನ್ನಕೇಶವ ಹಾಗೂ ಕ್ರೀಡಾ ಕ್ಷೇತ್ರದ ದಿಲೀಪ ಹಣಬರ ಇತರಿಗೆ ಸನ್ಮಾನಿಸಿದರೆ, ಕವನ ಸ್ಪರ್ಧೆಯ ವಿಜೇತರಾದ ಯಶಸ್ವಿನಿ ಮೂರ್ತಿ, ನಾಗೆಂದ್ರ ಹೆಬ್ಬಾರ್ ಮತ್ತು ಅರ್ಚನಾ ಹೆಬ್ಬಾರ ಅವರಿಗೆ ಬಹುಮಾನ ವಿತರಿಸಲಾಯಿತು. ಜಿ.ಪಿ.ಮಾರುತಿ, ಶ್ರೀಕಾಂತ ಸೋಗಿ, ಅಮೃತಾ ಮೆಹೆಂದಳೆ ಹಾಗೂ ಎಸ್.ಆರ್.ಎನ್ ಮೂರ್ತಿ ಕವಿಗೋಷ್ಠಿ ಮಾನದಂಡ ಪ್ರಕಾರ ಆಯ್ಕೆಯಾಗಿ ಪಾಲ್ಗೊಂಡಿದ್ದರು. ಸಮಿತಿ ಮಾನದಂಡ ಮೀರಿದ ಇತರರನ್ನು ವೇದಿಕೆ ಕೈಬಿಟ್ಟಿತ್ತು.

ಪ್ರಧಾನ ಕಾರ್ಯದರ್ಶಿ ಮೆಹೆಂದಳೆ ಸ್ವಾಗತಿಸಿ ಪ್ರಸ್ತಾವನೆ ಭಾಷಣ ಮಾಡಿದರೆ, ಅಧ್ಯಕ್ಷ ಜಿತೇಂದ್ರಕುಮಾರ ವಂದಿಸಿದರು. ಮುಖ್ಯ ಅಭಿಯಂತರುಗಳಾದ ಎಸ್.ಜೆ.ಟಿ ಸ್ವಾಮಿ ಮತ್ತು ವೆಂಕಟೇಶ ವೇದಿಕೆಯಲ್ಲಿದ್ದರು ಎಂದು ಕಾರ್ಯಕ್ರಮ ನಿರೂಪಿಸಿದ ಸಾಂಸ್ಕöÈತಿಕ ಕಾರ್ಯದರ್ಶಿ ಶಿವಕುಮಾರ ತಿಳಿಸಿದ್ದಾರೆ.