ಕೊಪ್ಪಳ: ಕವಿಗಳು ತಮ್ಮ ಕವನಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ ಮಾಡುತ್ತಾರೆ. ಕವನಗಳಲ್ಲಿ ಅಪಾರ ಶಕ್ತಿ ಅಡಗಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಕವಿತೆ ಸಹಕಾರಿಯಾಗುತ್ತವೆ ಎಂದು ನಗರಸಭೆ ಮಾಜಿ ಸದಸ್ಯ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮುಖಂಡ ಮಾನ್ವಿ ಪಾಷಾ ಹೇಳಿದರು.
ಕವಿಗಳು ರಚಿಸುವ ಕವನ ಸಮಾಜದಲ್ಲಿ ಜಾಗೃತಿ ಮೂಡಿಸುವ ಜತೆಗೆ ಉತ್ತಮ ಚಿಂತನೆಗೆ ಪ್ರೇರಣೆ ನೀಡುತ್ತವೆ. ಕವಿತೆಯ ಮೂಲಕ ಸಮಾಜದ ಸಮಸ್ಯೆ, ಮಾನವೀಯ ಮೌಲ್ಯ ಹಾಗೂ ಜೀವನದ ವಿವಿಧ ಆಯಾಮ ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಬಹುದು. ಇಂತಹ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ನಗರ ಆಶ್ರಯ ಸಮಿತಿ ಸದಸ್ಯ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮುಖಂಡ ಹುಸೇನ್ ಪಿರಾ ಮುಜಾವರ್ ಮುಖ್ಯ ಅತಿಥಿಯಾಗಿ ಮಾತನಾಡಿ, ಕವಿಗಳು ರಚಿಸುವ ಪ್ರತಿಯೊಂದು ಸಾಲಿನಲ್ಲಿಯೂ ಉತ್ತಮ ಸಂದೇಶ ಅಡಗಿರುತ್ತದೆ. ಕವಿತೆಯಲ್ಲಿರುವ ಉತ್ತಮ ವಿಚಾರ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಜೀವನ ಸಾರ್ಥಕವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಹಾಗೂ ಉರ್ದು ಸಾಹಿತಿ-ಕವಿ ಅನ್ವರ್ ಹುಸೇನ್, ಹಿರಿಯ ಸಮಾಜ ಸೇವಕ ಹಾಗೂ ಸಾಹಿತಿ ಸಮದ್ ಸಿದ್ದಿಕಿ, ಉರ್ದು ಕವಿ ಎಂ.ವಿಜಾರತ್ ಅಲಿ ಹಾಗೂ ಯುವ ಕವಿ ಅಫ್ಹಾನ್ ಸಿದ್ದಿಕಿ ಉರ್ದು ಕವನ ವಾಚಿಸಿ ಪ್ರೇಕ್ಷಕರ ಗಮನ ಸೆಳೆದರು.
ಎಂ. ಬದಿಯುದ್ದೀನ್ ಅಹಮದ್ ನವೀದ್ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರೂಪಿಸಿ ಕವಿಗೋಷ್ಠಿಗೆ ಮತ್ತಷ್ಟು ಮೆರುಗು ತಂದರು. ಹಿರಿಯ ಪತ್ರಕರ್ತ ಸಾಧಿಕ್ ಅಲಿ ಹಾಗೂ ಖಲೀಫಾ ಸಾಹೇಬ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.