ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ಎನ್.ಐ.ಎಂ.ಎ) ಕೊಡಗು ಸಂಘದ ಬೆಳ್ಳಿ ಹಬ್ಬ ಆಚರಣೆ ಅಂಗವಾಗಿ ಕೊಡಗು ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ವೆರಿಕೋಸ್ ವೆಯ್ನ್ಸ್ ಬಗ್ಗೆ ಅರಿವು ಮತ್ತು ಉಚಿತ ತಪಾಸಣಾ ಶಿಬಿರವನ್ನು ಮಡಿಕೇರಿಯ ಮೈತ್ರಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ಎನ್.ಐ.ಎಂ.ಎ) ಕೊಡಗು ಸಂಘದ ಬೆಳ್ಳಿ ಹಬ್ಬ ಆಚರಣೆ ಅಂಗವಾಗಿ ಕೊಡಗು ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ವೆರಿಕೋಸ್ ವೆಯ್ನ್ಸ್ ಬಗ್ಗೆ ಅರಿವು ಮತ್ತು ಉಚಿತ ತಪಾಸಣಾ ಶಿಬಿರವನ್ನು ಮಡಿಕೇರಿಯ ಮೈತ್ರಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪೊಲೀಸ್ ನಿರೀಕ್ಷಕ ಪಿ.ಕೆ ರಾಜು, ಸಾಮಾನ್ಯವಾಗಿ ಪೊಲೀಸರಲ್ಲಿ ಹೆಚ್ಚಾಗಿ ಕಾಣಿಸುವ ವೆರಿಕೋಸ್ ವೆಯ್ನ್ಸ್ ಬಗ್ಗೆ ಇನ್ನು ಹೆಚ್ಚು ಅರಿವು ಮೂಡಬೇಕು. ಪೊಲೀಸರಿಗೆ ವೃತ್ತಿಯಿಂದಲೇ ಈ ಸಮಸ್ಯೆ ಉಂಟಾಗುವುದರಿಂದ ಪ್ರಾರಂಭದಿಂದಲೇ ಮುನ್ನೆಚ್ಚರಿಕೆ ಕ್ರಮವಾಗಿ ಬಾರದಂತೆ ತಡೆಯಬೇಕು ಎಂದು ಹೇಳಿದರು.
ಎನ್ಐಎಂಎ ಕೊಡಗು ಜಿಲ್ಲಾ ಅಧ್ಯಕ್ಷ ಡಾ.ರಾಜಾರಾಮ್ ಮಾತನಾಡಿ, ಜನಸಾಮಾನ್ಯರ ರಕ್ಷಣೆಗೆ ಸದಾ ನಿಲ್ಲುವ ಪೊಲೀಸ್ ಸಿಬ್ಬಂದಿಗೆ ಎನ್ಐಎಂಎ ವೈದ್ಯರಿಂದ ಅವರ ಕ್ಲಿನಿಕ್ಗಳಲ್ಲಿ ಉಚಿತ ಸಮಾಲೋಚನೆ ನೀಡಲಾಗುವುದೆಂದು ಪ್ರಕಟಿಸಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಡಾ. ಶ್ಯಾಮಪ್ರಸಾದ ಪಿ.ಎಸ್., ವೆರಿಕೋಸ್ ವೆಯ್ನ್ಸ್ ಸಮಸ್ಯೆಯ ಕಾರಣ, ತಡೆಗಟ್ಟುವಿಕೆ, ಆಹಾರ-ವಿಹಾರದ ಮಹತ್ವ, ನಿರ್ವಹಣೆ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸಿದರು.
ಸಂಘದ ಮಹಿಳಾ ಘಟಕ ಅಧ್ಯಕ್ಷೆ ಡಾ.ಶೈಲಜಾ ರಾಜೇಂದ್ರ, ಕಾರ್ಯದರ್ಶಿ ಡಾ.ಸೌಮ್ಯ ಉಪಸ್ಥಿತರಿದ್ದರು.
ವೈದ್ಯರಾದ ಡಾ. ರಾಜಶೇಖರ್, ಡಾ. ಸಾವಿತ್ರಿ, ಡಾ. ರಾಜೇಂದ್ರ, ಡಾ. ಜ್ಯೋತಿ ರಾಜಾರಾಮ್, ಡಾ. ಅನುಷಾ, ಡಾ. ಅದಿತಿ, ಸಮಾಲೋಚನೆಗೆ ಲಭ್ಯವಿದ್ದರು. ಮಡಿಕೇರಿಯ ಪೊಲೀಸ್ ಸಿಬ್ಬಂದಿ ಹಾಗೂ ಕುಟುಂಬಸ್ಥರು ಈ ಶಿಬಿರದ ಪ್ರಯೋಜನ ಪಡೆದುಕೊಂಡರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.