ಜಿಲ್ಲಾದ್ಯಂತ ಬೂತ್ ಮಟ್ಟದಲ್ಲಿ ಮೂರು ದಿನಗಳ ಕಾಲ ಮನೆ ಮನೆಗೆ ತೆರಳಿ ಲಸಿಕೆ ಹಾಕಲಾಗುತ್ತದೆ.
ಕನ್ನಡಪ್ರಭ ವಾರ್ತೆ ಗುರುಮಠಕಲ್
ಪೋಲಿಯೋ ಒಂದು ಮಾರಕ ರೋಗವಾಗಿದ್ದು, ಅದನ್ನು ತಡೆಗಟ್ಟಲು ನವಜಾತ ಶಿಶುವಿನಿಂದ ಐದು ವರ್ಷದೊಳಗಿನ ಪ್ರತಿ ಮಗುವಿಗೂ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ ರೋಗವನ್ನು ತಡೆಗಟ್ಟಿ ಎಂದು ಪೋಲಿಯೋ ಲಸಿಕೆ ಅಭಿಯಾನದ ಜಿಲ್ಲಾ ಮೇಲ್ವಿಚಾರಕ ಬಾಗಪ್ಪ ಕೋರೆ ಮನವಿ ಮಾಡಿದರು.
ಸೈದಾಪುರ ಪಟ್ಟಣದ ಅಂಗನವಾವಾಡಿ ಕೇಂದ್ರದಲ್ಲಿ ನಡೆದ ಪೋಲಿಯೋ ಅಭಿಯಾನದ ಪ್ರಯುಕ್ತ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಲಸಿಕೆಯನ್ನು ದೇಶದೆಲ್ಲೆಡೆ ಒಂದೇ ದಿನ ಒಂದೇ ಬಾರಿಗೆ ಹಾಕುವುದರಿಂದ ರೋಗಾಣು ನಾಶ ಮಾಡಲು ಸಹಕಾರಿಯಾಗುತ್ತದೆ. ನಮ್ಮ ಜಿಲ್ಲೆಯಲ್ಲಿ 5 ವರ್ಷದೊಳಗಿನ ಯಾವುದೇ ಮಗು ಈ ಕಾರ್ಯಕ್ರಮದಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು.
ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಕಾಳಜಿ ವಹಿಸಿ, ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಲಸಿಕಾ ಕೇಂದ್ರಗಳಿಗೆ ಕರೆದುಕೊಂಡು ಬರತಕ್ಕದ್ದು. ಜಿಲ್ಲಾದ್ಯಂತ ಬೂತ್ ಮಟ್ಟದಲ್ಲಿ ಮೂರು ದಿನಗಳ ಕಾಲ ಮನೆ ಮನೆಗೆ ತೆರಳಿ ಲಸಿಕೆ ಹಾಕಲಾಗುತ್ತದೆ. ಇದಕ್ಕೆ ಸಾರ್ವಜನಿಕರು, ಪಾಲಕರು ಸಹಕರಿಸಬೇಕು. ಪೋಲಿಯೋ ಲಸಿಕೆ ನಿರ್ಲಕ್ಷಿಸಿದರೆ ಮಗುವಿಗೆ ಜೀವನ ಪರ್ಯಂತ ಅಂಗವಿಕಲತೆ ಕಾಡುತ್ತದೆ. ಮಗುವಿನ ತಾಯಂದಿರು ತಪ್ಪದೇ ಲಸಿಕೆ ಹಾಕಿಸಿ ರೋಗ ತಡೆಗಟ್ಟಲು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.
ಗ್ರಾಪಂ ಸದಸ್ಯೆ ಮಾಳಮ್ಮ ಜೇಗರ್, ವಿಶ್ವನಾಥರೆಡ್ಡಿ, ಲಕ್ಷ್ಮಣರೆಡ್ಡಿ ಮುನಗಲ್, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಚಾರಕಿ ಅನಿತಾ ದೊಡ್ಮನಿ, ಆರೋಗ್ಯ ಇಲಾಖೆ ಹಸೇನ್ ಕಡೇಚೂರು, ಮೈಬೂಬ ಚೌದ್ರಿ, ಅಂಗನವಾಡಿ ಕಾರ್ಯಕರ್ತೆ ಭಾಗ್ಯ ವಡವಟಿ, ಆಶಾ ಕಾರ್ಯಕರ್ತೆ ಸೂಗಮ್ಮ, ನರಸಮ್ಮ ಬಸ್ಸು ನಾಯಕ್ ಸೇರಿ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.