ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ವತಿಯಿಂದ, ರಾಜ್ಯಾದ್ಯಂತ ನಡೆಯುತ್ತಿರುವ ಪೌರ ಕಾರ್ಮಿಕರ ಅನಿರ್ದಿಷ್ಟ ಅವಧಿ ಮುಷ್ಕರದ ಭಾಗವಾಗಿ, ವಿರಾಜಪೇಟೆಯ ಪೌರ ಸೇವಾ ನೌಕರರು, ವಿರಾಜಪೇಟೆಯ ಪುರಸಭೆ ಆವರಣದಲ್ಲಿ ಮುಷ್ಕರದಲ್ಲಿ ತೊಡಗಿದರು.
ಪೌರ ಸೇವಾ ನೌಕರರ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಈ ಪ್ರತಿಭಟನೆ ನಡೆಯುತ್ತಿದೆ.ವಿರಾಜಪೇಟೆಯಲ್ಲಿ ಪ್ರತಿಭಟನಾ ಸ್ಥಳಕ್ಕೆ ತೆರಳಿದ ಶಾಸಕ ಎ.ಎಸ್. ಪೊನ್ನಣ್ಣ ಪುರಸಭೆ ನೌಕರರನ್ನು ಮಾತನಾಡಿಸಿ ಅವರ ಬೇಡಿಕೆಗಳನ್ನು ಆಲಿಸಿದರು. ಬಳಿಕ ವಿರಾಜಪೇಟೆಯಲ್ಲಿ ತಾವು ಪುರಸಭೆ ನೌಕರರ ಬೇಡಿಕೆಗಳಿಗೆ ಈ ಹಿಂದೆ ಸ್ಪಂದಿಸಿರುವುದನ್ನು ನೆನಪಿಸಿದ ಶಾಸಕರು, ಪ್ರತಿಭಟನೆಯನ್ನು ಕೈ ಬಿಟ್ಟು ಕೆಲಸಕ್ಕೆ ಹಾಜರಾಗುವಂತೆ ಮನವಿ ಮಾಡಿದರು.
ಶಾಸಕರ ಕಾರ್ಯ ವೈಖರಿಯ ಬಗ್ಗೆ ಅಪಾರ ಮೆಚ್ಚುಗೆ ಹಾಗೂ ಭರವಸೆ ಇರುವ ವಿರಾಜಪೇಟೆ ಪುರಸಭೆ ನೌಕರರು, ಕೂಡಲೇ ತಮ್ಮ ಪ್ರತಿಭಟನೆಯನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾದರು.
ಪುರಸಭೆ ದಿನಗೂಲಿ ನೌಕರರ ಮನವೊಲಿಸುವ ಸಂದರ್ಭ ವಿರಾಜಪೇಟೆ ಪುರಸಭೆ ಅಧ್ಯಕ್ಷೆ ದೇಚಮ್ಮ ಹಾಗೂ ಉಪಾಧ್ಯಕ್ಷೆ ಮತ್ತು ಸದಸ್ಯರು, ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಸರಕಾರದ ವಿವಿಧ ನಾಮನಿರ್ದೇಶಕ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.