ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ತಾಯಿ, ಮಕ್ಕಳ ಅಪೌಷ್ಟಿಕ ನಿವಾರಣೆಗೆ ಪೋಷಣ್‌ ಸಹಾಯಕ

KannadaprabhaNewsNetwork | Published : Oct 8, 2024 1:09 AM

ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆ ಕೊರತೆ ನೀಗಿಸಲು ಸರ್ಕಾರವು ತಾಯಿ ಮತ್ತು ಮಕ್ಕಳ ಆರೈಕೆಗಾಗಿ ಪೋಷಣ್ ಮಾಹೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಇವರಿಬ್ಬರಲ್ಲೂ ಅಪೌಷ್ಟಿಕ ನಿವಾರಣೆಗೆ ಇದು ಸಹಾಯಕ ಎಂದು ಪಪಂ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆ ಕೊರತೆ ನೀಗಿಸಲು ಸರ್ಕಾರವು ತಾಯಿ ಮತ್ತು ಮಕ್ಕಳ ಆರೈಕೆಗಾಗಿ ಪೋಷಣ್ ಮಾಹೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಇವರಿಬ್ಬರಲ್ಲೂ ಅಪೌಷ್ಟಿಕ ನಿವಾರಣೆಗೆ ಇದು ಸಹಾಯಕ ಎಂದು ಪಪಂ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ ಹೇಳಿದರು.

ಸಮೀಪದ ವೆಂಕಟಾಪುರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ ರಾಷ್ಟ್ರೀಯ ಪೋಷಣಾ ಅಭಿಯಾನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗರ್ಭಿಣಿಯರ ಹಾಗೂ ಮಕ್ಕಳ ಅಪೌಷ್ಟಿಕತೆ ನಿವಾರಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಮಾಡಿದ್ದರೂ ಅದರ ಸದುಪಯೋಗವನ್ನು ಫಲಾನುಭವಿಗಳು ಪಡೆದುಕೊಳ್ಳಲು ಪೋಷಣಾ ಅಭಿಯಾನ ಅನುಕೂಲವಾಗಿದೆ. ಹಾಗೆಯೇ ಇಂತಹ ಕಾರ್ಯಕ್ರಮ ಯಶಸ್ವಿಗೊಳಿಸಲು ಅಂಗನವಾಗಿ ಕಾರ್ಯಕರ್ತೆಯರ ಕಾರ್ಯವೈಖರಿ ಶ್ಲಾಘನೀಯ ಎಂದು ಮೆಚ್ಚಿಕೊಂಡರು.

ಪೋಷಣಾ ಅಭಿಯಾನ ತಾಲೂಕು ಸಂಯೋಜಕ ರಾಹುಲ್‌ ಗುಡೂರ ಮಾತನಾಡಿ, ಸತ್ಪ್ರಜೆಗಳನ್ನು ರೂಪಿಸಲು ಗರ್ಭಾವ್ಯವಸ್ಥೆಯಿಂದಲೇ ಮಹಿಳೆಯರಿಗೆ ಸತ್ವಯುತ ಆಹಾರ ನೀಡುವುದು, ಸ್ವಚ್ಛ ನೀರು ಹಾಗೂ ಪೌಷ್ಟಿಕ ಆಹಾರದ ಬಗ್ಗೆ ಅರಿವು ಮೂಡಿಸುವುದೇ ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.

ಮುಖ್ಯ ಶಿಕ್ಷಕ ವಿಷ್ಣು ವರ್ಚಗಲ್ ಮಾತನಾಡಿ, ಗರ್ಭಿಣಿಯರು, ಬಾಣಂತಿಯರು ಊಟಕ್ಕೆ ಹಸಿರು ಸೊಪ್ಪು ಮೊಳಕೆ ಕಾಳುಗಳು ಹಣ್ಣುಗಳು, ಹಳದಿ ಬಣ್ಣದ ಹಣ್ಣುಗಳು, ಹಾಲು, ಮೊಟ್ಟೆ ಸೇವನೆ ಮಾಡಬೇಕು. ಇದರಿಂದ ಗರ್ಭಿಣಿಯರಲ್ಲಿ ರಕ್ತಹೀನತೆ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುನೀಲ ಬೆನ್ನೂರ ಮಾತನಾಡಿ, ಹೆಚ್ಚಾಗಿ ಹಣ್ಣು ತರಕಾರಿ ಮೊಳಕೆ ಬರಿಸಿದ ಕಾಳುಗಳು, ಪೌಷ್ಟಿಕ ಯುಕ್ತ ಸೊಪ್ಪುಗಳು ತರಕಾರಿಗಳನ್ನು ನಾವು ಬೆಳೆಸಿ ಉಪಯೋಗಿಸಬೇಕು. ಪೋಷಣ ಅಭಿಯಾನದಿಂದ ಮಹಿಳೆಯರು ಮತ್ತು ಮಕ್ಕಳು ಸದೃಢರಾಗಲು ಒಂದು ಅವಕಾಶ ಸಿಕ್ಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಕ್ಕಳ ಪಾಲಕರು, ಸ್ತ್ರೀ ಶಕ್ತಿ ಸಂಘದ ಸದಸ್ಯರು, ವಿವಿಧ ಬಗೆಯ ತಿಂಡಿ ತಿನಸುಗಳನ್ನು ತಯಾರಿಸಿದ್ದರು. ಅಭಿಯಾನದಲ್ಲಿ ಎಚ್.ಎಸ್.ದಾಸರ, ಪಪಂ ಅರೋಗ್ಯ ನಿರೀಕ್ಷಕ ಭಾಗ್ಯಶ್ರೀ ಪಾಟೀಲ, ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿ ಬಿ.ಜೆ.ನಧಾಪ, ಎಂ.ಐ.ಕಂಬಾರ, ಶ್ರೇಯಾ ಹೊಸಕೊಟಿ, ಪರಶುರಾಮ ದಾನಿ, ಎಂ.ಎ.ಕುಳ್ಳೋಳ್ಳಿ, ಎಸ್.ಎಂ.ಕಬ್ಬೂರ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಮತ್ತು ವೆಂಕಟಾಪುರ ಗ್ರಾಮಸ್ಥರು ಇದ್ದರು.