ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಸದೃಢ ಮಾನಸಿಕ ಆರೋಗ್ಯವನ್ನು ಹೊಂದುವುದರಿಂದ ಬದುಕಿನಲ್ಲಿ ಉನ್ನತ ಸಾಧನೆಗಳನ್ನು ಮಾಡಬಹುದು. ಒತ್ತಡಗಳಿಂದ ಮುಕ್ತವಾದಾಗ ಉತ್ತಮ ಚಿಂತನೆಗಳಿಗೆ ಅವಕಾಶವಿರುತ್ತದೆ ಎಂದು ಲಯನ್ಸ್ ಜಿಲ್ಲೆ 317ಎಫ್ನ ಮಾನಸಿಕ ಆರೋಗ್ಯ ಸಂಯೋಜಕರಾದ ಅನುಪಮಾ ಹೇಳಿದರು.ಇಲ್ಲಿನ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್ಟಿಟ್ಯೂಷನ್ಸ್ನ ನೇತೃತ್ವದಲ್ಲಿ ಶ್ರೀ ದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ ಮತ್ತು ಜಾಲಪ್ಪ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾನಸಿಕ ಆರೋಗ್ಯವು ವ್ಯಕ್ತಿಯ ಆಲೋಚನೆಗಳು, ಭಾವನೆಗಳು ಮತ್ತು ನಡವಳಿಕೆಗಳ ಮೇಲೆ ಪರಿಣಾಮ ಬೀರುವ ಅರಿವಿನ, ನಡವಳಿಕೆಯ ಮತ್ತು ಭಾವನಾತ್ಮಕ ಯೋಗಕ್ಷೇಮದ ಸ್ಥಿತಿಯಾಗಿದೆ. ಇದು ನಿಮ್ಮ ಜೀವನದ ಪ್ರಮುಖ ಭಾಗವಾಗಿದೆ ಮತ್ತು ನಿಮ್ಮ ದೈನಂದಿನ ಜೀವನ, ಸಂಬಂಧಗಳು ಮತ್ತು ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಮಾನಸಿಕ ಅಸ್ವಸ್ಥತೆಯ ಲಕ್ಷಣಗಳು ಕಂಡುಬಂದರೆ, ವೃತ್ತಿಪರರ ಸಹಾಯ ಪಡೆಯುವುದು ಮುಖ್ಯ ಎಂದು ತಿಳಿಸಿದರು.ಮಾನಸಿಕ ಆರೋಗ್ಯ ಕಾಳಜಿ ವಹಿಸುವುದರಿಂದ ವ್ಯಕ್ತಿಗತ ಉತ್ಪಾದಕತೆ ಮತ್ತು ಪರಿಣಾಮಕಾರಿತ್ವ ಹೆಚ್ಚುವುದರ ಜೊತೆಗೆ ಸದೃಢ ಸಂಬಂಧಗಳನ್ನು ಉತ್ತೇಜಿಸುತ್ತದೆ. ಜೀವನದಲ್ಲಿನ ಬದಲಾವಣೆಗಳಿಗೆ ಹೊಂದಿಕೊಳ್ಳಲು ಮತ್ತು ಪ್ರತಿಕೂಲತೆಯನ್ನು ಎದುರಿಸಲು ಸಹಾಯವಾಗುತ್ತದೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕ್ಲಬ್ನ ಅಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯ ವತಿಯಿಂದ ಇದೇ ಅಕ್ಟೋಬರ್ 4 ರಿಂದ 12ರವರೆಗೆ ಮೆಂಟಲ್ ಹೆಲ್ತ್ ಆ್ಯಂಡ್ ವೆಲ್ ಬೀಯಿಂಗ್ ಪರಿಕಲ್ಪನೆಯ ಅಡಿಯಲ್ಲಿ ವಿಶ್ವಾದ್ಯಂತ ಮಾನಸಿಕ ಆರೋಗ್ಯ ಜಾಗೃತಿ ನಡೆಯುತ್ತಿದೆ. ಅದರ ಭಾಗವಾಗಿ ನಮ್ಮ ಕ್ಲಬ್ ವತಿಯಿಂದ ನೂರಾರು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ನಿರಂತರ ಕಾರ್ಯಕ್ರಮಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ ಎಂದರು.ಶ್ರೀ ದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಗೌರಪ್ಪ, ಜಾಲಪ್ಪ ಕಾನೂನು ಕಾಲೇಜು ಪ್ರಾಂಶುಪಾಲ ಹನುಮಂತಪ್ಪ ಜಿ.ಟಿ, ಸಂಜೆ ಕಾಲೇಜು ಪ್ರಾಂಶುಪಾಲ ಡಾ.ಚಿಕ್ಕಣ್ಣ, ಲಯನ್ಸ್ ಕ್ಲಬ್ ಆಡಳಿತಾಧಿಕಾರಿ ಡಾ.ಶ್ರೀನಿವಾಸರೆಡ್ಡಿ, ಕಾರ್ಯದರ್ಶಿ ಸುಮ ಎ.ಎಸ್, ಉಪಾಧ್ಯಕ್ಷ ಬಾಬು ಸಾಬಿ, ಲಯನ್ ಲತಾ, ಪ್ರಕಾಶ್, ಎಲ್.ಎನ್.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ಫೋಟೋ-11ಕೆಡಿಬಿಪಿ1- ದೊಡ್ಡಬಳ್ಳಾಪುರದ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್ಟಿಟ್ಯೂಷನ್ಸ್ನಿಂದ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಯಿತು.