ಅಂಚೆ ಕಚೇರಿಗಳು ವಿಶ್ವಾಸಾರ್ಹತೆ ಉಳಿಸಿಕೊಂಡಿವೆ: ಸಂಸದ ಕೋಟಾ

KannadaprabhaNewsNetwork | Published : Feb 19, 2025 12:47 AM

ಸಾರಾಂಶ

ಕೇಂದ್ರ ಸರ್ಕಾರದಡಿ ಕಾರ್ಯನಿರ್ವಹಿಸುವ ಅಂಚೆ ಕಚೇರಿಗಳು ಬಹು ಜನ ಉಪಯೋಗಿ ಕೆಲಸ ನಿರ್ವಹಿಸುವ ಜೊತೆಗೆ, ಜನಸಾಮಾನ್ಯರಲ್ಲಿ ನಂಬಿಕೆ, ವಿಶ್ವಾಸರ್ಹತೆ ಉಳಿಸಿಕೊಂಡಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.

ಕಲ್ಲೇನಹಳ್ಳಿಯಲ್ಲಿ ಅಂಚೆ ಕಚೇರಿ ಆರಂಭ । ಪ್ರತಿ ತಿಂಗಳು ಶಾಖಾ ಕಚೇರಿಗಳಲ್ಲಿ ೯೦ ಕೋಟಿ ರು. ವ್ಯವಹಾರ

ಕನ್ನಡಪ್ರಭ ವಾರ್ತೆ ಅಜ್ಜಂಪುರ

ಕೇಂದ್ರ ಸರ್ಕಾರದಡಿ ಕಾರ್ಯನಿರ್ವಹಿಸುವ ಅಂಚೆ ಕಚೇರಿಗಳು ಬಹು ಜನ ಉಪಯೋಗಿ ಕೆಲಸ ನಿರ್ವಹಿಸುವ ಜೊತೆಗೆ, ಜನಸಾಮಾನ್ಯರಲ್ಲಿ ನಂಬಿಕೆ, ವಿಶ್ವಾಸರ್ಹತೆ ಉಳಿಸಿಕೊಂಡಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.

ತಾಲೂಕಿನ ಶಿವನಿ ಹೋಬಳಿಯ ಕಲ್ಲೇನಹಳ್ಳಿ ಗ್ರಾಮದಲ್ಲಿ ನೂತನ ಶಾಖಾ ಅಂಚೆ ಕಚೇರಿಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಅಂಚೆ ಕಚೇರಿಯ ಸುಕನ್ಯ ಸಮೃದ್ದಿ ಯೋಜನೆಯಿಂದ ಹೆಣ್ಣು ಭ್ರೂಣ ಹತ್ಯೆಗಳು ಇಳಿಕೆಗೊಂಡಿವೆ. ಅಲ್ಲದೇ ಆಟಲ್ ಮಾಶಾಸನ, ಪ್ರಧಾನ ಮಂತ್ರಿ ಜೀವ ಭೀಮಾ, ಗುಂಪು ಅಪಘಾತ ವಿಮೆ ಯೋಜನೆಗಳು ಅಂಚೆ ಇಲಾಖೆಯಲ್ಲಿ ದೊರಕುತ್ತಿರುವ ಹಿನ್ನೆಲೆ ಗ್ರಾಹಕರು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಹಿಂದಿನ ಕಾಲದಲ್ಲಿ ಅಂಚೆ ಇಲಾಖೆ ಬಹುತೇಕ ಕಾಗದ ಪತ್ರಗಳಲ್ಲಿ ಹೆಚ್ಚು ವ್ಯವಹಾರ ಹೊಂದಿತ್ತು. ಇದೀಗ ಆಧುನಿಕತೆ ಬೆಳೆದಂತೆ ಖಾಸಗಿ ಬ್ಯಾಂಕ್‌ಗಳ ಆನ್‌ಲೈನ್ ವಹಿವಾಟಿನಂತೆ, ಅಂಚೆ ಕಚೇರಿಗಳಲ್ಲಿ ಪ್ರತಿಯೊಂದು ಸೇವೆಯನ್ನು ಡಿಜಲಿಟೀಕರಣಗೊಳಿಸಿ ಜನತೆಗೆ ಅನುಕೂಲ ಕಲ್ಪಿಸಿಕೊಡಲಾಗಿದೆ ಎಂದರು.

ಅಂಚೆ ಇಲಾಖೆಯ ಸೌಲಭ್ಯ ಸ್ಥಳೀಯರಿಗೆ ಪೂರೈಸುವ ನಿಟ್ಟಿನಲ್ಲಿ ಪ್ರತಿ ಗ್ರಾಮದಲ್ಲಿ ಶಾಖಾ ಕಚೇರಿ ತೆರೆಯುವ ಉದ್ದೇಶ ಹೊಂದಿದೆ. ಮುಂದಿನ ದಿನಗಳಲ್ಲಿ ಗ್ರಾಮಗಳನ್ನು ಗುರುತಿಸಿ ಶಾಖೆ ತೆರೆಯಲಾಗುವುದು ಎಂದ ಅವರು ಕೇಂದ್ರ ಸರ್ಕಾರದ ಯೋಜನೆಗಳನ್ನು ಸ್ಥಳೀಯವಾಗಿ ಪಡೆದುಕೊಂಡು ಆರ್ಥಿಕ ಸಬಲರಾಗಬೇಕು ಎಂದು ತಿಳಿಸಿದರು.

ಅಂಚೆ ಇಲಾಖೆ ಖಾತೆಯಿಂದ ಖಾಸಗಿ ಬ್ಯಾಂಕ್‌ಗಳ ಖಾತೆಗೆ ನೇರವಾಗಿ ಹಣ ವರ್ಗಾಯಿಸುವ ಅವಕಾಶವಿದೆ. ಇಂಡಿಯಾ ಪೋಸ್ಟ್ ಪೇಮೆಂಟ್‌ನ್ನು ಇಲಾಖೆಯಲ್ಲಿ ಸ್ಥಾಪಿಸಿ ಖಾತೆದಾರರಿಗೆ ವ್ಯವಹಾರ ಸುಲಭಗೊಳಿಸಿದೆ. ಗ್ರಾಹಕರು ಗುಂಪು ಅಪಘಾತ ವಿಮೆಗೆ ನೊಂದಾಯಿಸಿಕೊಂಡಿದ್ದಲ್ಲಿ, ಆಕಸ್ಮಿಕ ಸಾವನ್ನಪ್ಪಿದರೆ ಇಲಾಖೆಯಿಂದ ಆರ್ಥಿಕ ವಿಮೆ ನೀಡಲಾಗುತ್ತದೆ ಎಂದರು.

ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ರಾಜ್ಯ ಸರ್ಕಾರದ ಅನೇಕ ಯೋಜನೆಗಳು ಡಿಬಿಟಿ ಮುಖಾಂತರ ಅಂಚೆ ಕಚೇರಿಯಲ್ಲಿ ವ್ಯವಹರಿಸುತ್ತಿದೆ. ಅಂಚೆ ಇಲಾಖೆ ನೌಕರರು ಹಲವಾರು ವರ್ಷಗಳಿಂದ ಪ್ರಾಮಾಣಿಕ ಸೇವೆ ಸಲ್ಲಿಸಿದ ಕಾರಣ ಇಲಾಖೆಗೆ ಉತ್ತಮ ಹೆಸರು ಬಂದಿದೆ. ಜೊತೆಗೆ ಗಡಿಭಾಗಕ್ಕೆ ಕಚೇರಿ ಸ್ಥಾಪಿತವಾಗಿರುವುದು ಖುಷಿ ತಂದಿದೆ ಎಂದರು.

ಅಂಚೆ ನಿರೀಕ್ಷಕ ಗಿರೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಚೆ ವಿಭಾಗದ ಸುಮಾರು ೩೦೧ ಶಾಖಾ ಕಚೇರಿಗಳಲ್ಲಿ ಪ್ರತಿ ತಿಂಗಳು ೯೦ ಕೋಟಿ ರು. ವ್ಯವಹಾರ ಮಾಡುತ್ತಿದೆ. ಜನಸ್ನೇಹಿ ಯೋಜನೆಗಳಿಂದ ಗ್ರಾಹ ಕರನ್ನು ತನ್ನತ್ತ ಸೆಳೆದುಕೊಂಡು ವ್ಯವಹಾರವನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಚೆ ನಿರೀಕ್ಷಕ ಎನ್.ರಮೇಶ್, ಕಲ್ಲೇನಹಳ್ಳಿ ಗ್ರಾಪಂ ವ್ಯಾಪ್ತಿಯ ಹುಚ್ಚನಹಟ್ಟಿ, ದಾಸರಹಳ್ಳಿ, ಭಕ್ತನಕಟ್ಟೆ ಹಾಗೂ ಕಲ್ಲೇನಹಳ್ಳಿ ಜನತೆಯು ತ್ಯಾಗದಕಟ್ಟೆ ಅಂಚೆ ಕಚೇರಿ ವ್ಯಾಪ್ತಿಯಲ್ಲಿದೆ. ತ್ಯಾಗದಕಟ್ಟೆಗೆ ವಾಹನ ಸೌಕರ್ಯವಿಲ್ಲದೆ ಹತ್ತಾರು ಕಿ.ಮೀ. ಸಂಚರಿಸುವುದನ್ನು ಮನಗಂಡು ಕೇಂದ್ರ ಸರ್ಕಾರ ನೂತನ ಶಾಖೆ ಸ್ಥಾಪಿಸಿದೆ ಎಂದು ಹೇಳಿದರು.

ಇದೇ ವೇಳೆ ಗುಂಪು ಅಪಘಾತ ವಿಮೆಯಡಿ ನೋಂದಾಯಿಸಿದ್ಧ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದ ವ್ಯಕ್ತಿಯೊಬ್ಬರು ಅಪಘಾತದಲ್ಲಿ ಮೃತರಾದ ಹಿನ್ನೆಲೆಯಲ್ಲಿ ಆತನ ತಾಯಿ ನಾರಾಯಣಮ್ಮ ಎಂಬುವವರಿಗೆ ಇಲಾಖೆಯಿಂದ ೧೦ ಲಕ್ಷ ರ.ಗಳ ಚೆಕ್‌ನ್ನು ಸಂಸದರು ವಿತರಿಸಿದರು.

ತಾಪಂ ಇಒ ವಿಜಯ್‌ಕುಮಾರ್, ಮಾಜಿ ಶಾಸಕ ಎಸ್.ಎಂ.ನಾಗರಾಜ್, ಕಲ್ಲೇನ ಹಳ್ಳಿ ಗ್ರಾ.ಪಂ. ಉಪಾಧ್ಯಕ್ಷೆ ಸರೋಜಮ್ಮ, ಪಿಡಿಓ ಕುಮಾರ್, ಮಾಜಿ ಅಧ್ಯಕ್ಷರಾದ ತಿಪ್ಪೇಶಪ್ಪ, ಪುಷ್ಪಾ ಉಪ ಸ್ಥಿತರಿದ್ದರು. ಪ್ರದೀಪ್ ಕಾರ್ಯಕ್ರಮವನ್ನು ನಿರೂಪಿಸಿದರು. ಚಂದ್ರಪ್ರಕಾಶ್ ಸ್ವಾಗತಿಸಿದರು. ಲೀಲಾವತಿ ಪ್ರಾ ರ್ಥಿಸಿದರು. ಬಸವರಾಜಪ್ಪ ವಂದಿಸಿದರು.

Share this article