ಪಪಂ ಚುನಾವಣೆ: ಸ್ಪರ್ಧಿಸುವರ ಸಂಖ್ಯೆ ಹೆಚ್ಚಳ

KannadaprabhaNewsNetwork |  
Published : May 14, 2026, 01:15 AM IST
ಪಟ್ಟಣ ಪಂಚಾಯತ | Kannada Prabha

ಸಾರಾಂಶ

ರಾಜ್ಯ ಸರ್ಕಾರ ಈಗಾಗಲೇ ಸ್ಥಳೀಯ ಸಂಸ್ಥೆ ಚುನಾವಣೆಗೆ ಮೀಸಲಾತಿ ಪ್ರಕಟಿಸಿದ್ದು, ಇನ್ನೇನು ಚುನಾವಣೆಗೆ ದಿನಾಂಕ ನಿಗದಿಯಾಗುವುದು ಮಾತ್ರ ಬಾಕಿ ಇದ್ದು, ಇಲ್ಲಿಯ ಪಪಂ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಸಾಗಿದೆ.

ಟಿಕೆಟ್‌ಗಾಗಿ ಪಕ್ಷದ ಹಿರಿಯ ನಾಯಕರ ಮನೆ ಬಾಗಿಲು ತಟ್ಟುತ್ತಿರುವ ಆಕಾಂಕ್ಷಿಗಳು

ಸಂತೋಷ ದೈವಜ್ಞ

ಕನ್ನಡ ಪ್ರಭ ವಾರ್ತೆ ಮುಂಡಗೋಡ

ರಾಜ್ಯ ಸರ್ಕಾರ ಈಗಾಗಲೇ ಸ್ಥಳೀಯ ಸಂಸ್ಥೆ ಚುನಾವಣೆಗೆ ಮೀಸಲಾತಿ ಪ್ರಕಟಿಸಿದ್ದು, ಇನ್ನೇನು ಚುನಾವಣೆಗೆ ದಿನಾಂಕ ನಿಗದಿಯಾಗುವುದು ಮಾತ್ರ ಬಾಕಿ ಇದ್ದು, ಇಲ್ಲಿಯ ಪಪಂ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಸಾಗಿದ್ದು, ಚುನಾವಣೆಗೆ ಸ್ಪರ್ಧಿಸಲು ಹಲವರು ಮುಗಿಬಿಳುತ್ತಿದ್ದಾರೆ. ತಮಗೇ ಟಿಕೆಟ್ ನೀಡುವಂತೆ ಪಕ್ಷದ ಹಿರಿಯ ನಾಯಕರ ಮನೆ ಬಾಗಿಲು ತಟ್ಟುವವರ ಸಂಖ್ಯೆ ಹೆಚ್ಚಿದೆ.

೧೯ ಸದಸ್ಯ ಬಲ ಹೊಂದಿರುವ ಇಲ್ಲಿಯ ಪಟ್ಟಣ ಪಂಚಾಯಿತಿಗೆ ಕಳೆದ ಅವಧಿಯಲ್ಲಿ ಬಿಜೆಪಿ ೧೦ ಮತ್ತು ಕಾಂಗ್ರೆಸ್ ನಿಂದ ೯ ಜನ ಆಯ್ಕೆಯಾಗಿದ್ದರು. ಮೊದಲ ಅವಧಿಗೆ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಆಡಳಿತ ನಡೆಸಿದರೆ, ಶಾಸಕ ಶಿವರಾಮ ಹೆಬ್ಬಾರ ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿ ಬಳಿಕ ಈಗ ಮತ್ತೆ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಳ್ಳುವ ಮೂಲಕ ಅವರ ಪ್ರಭಾವದಿಂದ ಕೆಲ ಬಿಜೆಪಿ ಸದಸ್ಯರೇ ಕಾಂಗ್ರೆಸ್ ಬೆಂಬಲಿತ ಸದಸ್ಯರ ಬೆಂಬಲದಿಂದ ಅಧಿಕಾರ ಅನುಭವಿಸಿದರು.

ಅಭಿವೃದ್ಧಿ ಕುಂಠಿತ:

ಕಳೆದ ಅವಧಿಯಲ್ಲಿ ಪಟ್ಟಣದಲ್ಲಿ ಹೇಳಿಕೊಳ್ಳುವಂತಹ ಯಾವುದೇ ರೀತಿ ಅಭಿವೃದ್ಧಿ ಏನೂ ಕಂಡಿಲ್ಲ. ಬಿನ್ನಮತ ಚಟುವಟಿಕೆಯಲ್ಲಿಯೇ ಹೆಚ್ಚು ಕಾಲಹರಣವಾಗಿರುವುದರಿಂದ ಅಭಿವೃದ್ದಿ ಕುಂಠಿತವಾಗಲು ಕಾರಣ ಎಂದರೂ ತಪ್ಪಾಗಲಿಕ್ಕಿಲ್ಲ. ಅವ್ಯವಹಾರ, ಅಧಿಕಾರ ಆಸೆ ಹಾಗೂ ಒಳ ಜಗಳದಿಂದಾಗಿ ಸದಸ್ಯರು ಉತ್ತಮ ಹೆಸರು ಪಡೆಯುವಲ್ಲಿ ವಿಫಲರಾಗಿದ್ದಾರೆ. ಹೋರಾಟ ಮನೋಭಾವನೆ ತೋರಿಸುತ್ತಿದ್ದ ಹೊಸ ಮುಖಗಳು ಪಪಂ ಪ್ರವೇಶಿಸಿ ಏನೋ ಬದಲಾವಣೆ ಮಾಡುತ್ತಾರೆ ಎಂದು ಆಯ್ಕೆ ಮಾಡಿ ಕಳುಹಿಸಿದ ಜನತೆಯ ನಿರೀಕ್ಷೆ ಹುಸಿಯಾಗಿದ್ದಂತೂ ಸತ್ಯ.

ಸರ್ವೋಚ್ಚ ನ್ಯಾಯಾಲಯ ಚುನಾವಣೆ ನಡೆಸುವಂತೆ ಆದೇಶಿಸಿದ್ದು, ಎಲ್ಲ ವಾರ್ಡ್‌ಗಳ ಮೀಸಲಾತಿ ಬದಲಾಗಿರುವುದರಿಂದ ಅಧಿಕಾರದ ರುಚಿ ಉಂಡಿರುವ ಸದಸ್ಯರು ತಮ್ಮ ವಾರ್ಡ್‌ ಮೀಸಲಾತಿ ಬದಲಾದ ಕಾರಣ ಈ ಬಾರಿಯೂ ಮತ್ತೆ ತಮಗೆ ಅನುಕೂಲವಿರುವ ಬೇರೆ ಬೇರೆ ವಾರ್ಡ್‌ಗಳಿಂದ ಸ್ಪರ್ಧಿಸಲು ಕಸರತ್ತು ನಡೆಸುತ್ತಿದ್ದಾರೆ. ಪಕ್ಷದ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ತಮಗೆ ಪಕ್ಷದಿಂದ ಟಿಕೆಟ್ ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.

ಆದರೆ ಪಕ್ಷಗಳು ಮಾತ್ರ ಹೊಸಬರಿಗೆ ಅವಕಾಶ ನೀಡಲು ಚಿಂತನೆ ನಡೆಸಿವೆ. ಬಹುತೇಕವಾಗಿ ಹಿಂದಿನವರಿಗೆ ಟಿಕೆಟ್ ಸಿಗುವ ಸಾಧ್ಯತೆ ತೀವ್ರ ಕಡಿಮೆ. ಯಾರು ಉತ್ತಮ ಕೆಲಸ ಮಾಡಿ ಜನರ ಮನ ಗೆದ್ದಿದ್ದಾರೆ ಎಂಬುವುದನ್ನು ಗಮನಿಸುತ್ತಿದ್ದು, ಅಭ್ಯರ್ಥಿಯ ಗೆಲುವು ಮುಖ್ಯ ಎನ್ನುವ ಮಂತ್ರ ಜಪಿಸುತ್ತಿರುವ ಪಕ್ಷಗಳು ಸ್ಥಳೀಯವಾಗಿ ಅಭಿಪ್ರಾಯ ಸಂಗ್ರಹಣೆ ಮಾಡುತ್ತಿದ್ದು, ಹಿತವರನ್ನು ಗುರುತಿಸುವಲ್ಲಿ ಯಾವುದೇ ರೀತಿ ಹಿಂದೆ ಬಿದ್ದಿಲ್ಲ.

ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಆದರೆ ಜೆಡಿಎಸ್‌ನಿಂದ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆ ತೀವ್ರ ಕಡಿಮೆ ಇದ್ದು, ಹೇಳಿಕೊಳ್ಳುವಂತಹ ಬಿರುಸು ಕಾಣಿಸಿಕೊಳ್ಳುತ್ತಿಲ್ಲ. ಒಟ್ಟಾರೆ ಜನತೆ ತೀವ್ರ ಜಾಗೃತಿಯಿಂದ ಚುನಾವಣೆಯನ್ನು ಎದುರು ನೋಡುತ್ತಿದ್ದು, ವಿವಿದ ಪಕ್ಷಗಳು ಯೋಗ್ಯರನ್ನು ಗುರುತಿಸಿ ಬಿ ಫಾರ್ಮ ನೀಡಬೇಕು ಎಂಬುವುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.

ಆಕಾಂಕ್ಷಿಗಳು ಸಾಕಷ್ಟು ಜನರಿದ್ದಾರೆ. ಪಕ್ಷ ನಿಷ್ಠೆ ಹಾಗೂ ಪಕ್ಷಕ್ಕಾಗಿ ದುಡಿದ ಪ್ರಾಮಾಣಿಕ ಕಾರ್ಯಕರ್ತರು ಸ್ಥಳೀಯರ ಕುಂದು ಕೊರತೆ ಸಮಸ್ಯೆಗಳಿಗೆ ಸ್ವಂದಿಸುವ ವ್ಯಕಿಗಳನ್ನು ಗುರುತಿಸಿ ಪಕ್ಷದಿಂದ ಟಿಕೆಟ್ ನೀಡಲಾಗುವುದು ಎಂದು ಬಿಜೆಪಿ ತಾಲೂಕಾಧ್ಯಕ್ಷ ಮಂಜುನಾಥ ಪಾಟೀಲ ತಿಳಿಸಿದ್ದಾರೆ.

ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ ಗೆಲ್ಲುವಂತಹ ಅಭ್ಯರ್ಥಿಗಳನ್ನು ಗುರುತಿಸಿ ಪಕ್ಷದ ಹಿರಿಯರು ಸೇರಿಕೊಂಡು ಟಿಕೆಟ್ ನೀಡುವ ಕ್ರಮ ಕೈಗೊಳ್ಳುತ್ತೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆ ಮುಚ್ಚುವ ಹುನ್ನಾರ: ಗಡ್ಡಿ- ಬಂಡ್ರಾಳ್ ಗ್ರಾಮಸ್ಥರ ಪ್ರತಿಭಟನೆ
ಕಾಳನದಿ ದಡದಲ್ಲಿ ಮರಿ ಕಾವಲು ಕಾಯುತ್ತಿರುವ ಮೊಸಳೆಯಮ್ಮ