ಹೊನ್ನಾವರ: ತಾಲೂಕಿನಲ್ಲಿ ಮಳೆಯ ಆರ್ಭಟದ ಹಿನ್ನೆಲೆಯಲ್ಲಿ ಬುಧವಾರ ತಾಲೂಕಿನ ಆಡಳಿತ ಸೌಧದ ಸಭಾಭವನದಲ್ಲಿ ತಹಶೀಲ್ದಾರ ಪ್ರವೀಣ ಕರಾಂಡೆ ಅಧ್ಯಕ್ಷತೆಯಲ್ಲಿ ಮಳೆಗಾಲ ಪೂರ್ವ ನೋಡಲ್ ಅಧಿಕಾರಿಗಳ ಸಭೆ ಜರುಗಿತು.ಸಭೆಯ ಆರಂಭದಲ್ಲಿ ಕಳೆದ ವರ್ಷ ಮಳೆಗಾಲದಲ್ಲಿ ಸಂಭವಿಸಿದ ಘಟನೆಗಳನ್ನು ಉಲ್ಲೇಖಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿ, ಪೂರ್ವ ಸಿದ್ಧತಾ ಕ್ರಮಗಳ ಕುರಿತು ಚರ್ಚೆ ನಡೆಸಿದರು.
ಯಾವುದೇ ಸಮಸ್ಯೆಗಳಿದ್ದರೂ ದಿನವಿಡೀ ಕಂಟ್ರೋಲ್ ರೂಂ ನಂ. 08387-220262 ತೆರೆಯಲಾಗಿದೆ ಎಂದರು.
ಮಳೆಹಾನಿ ಮತ್ತು ನೆರೆಹಾವಳಿ ಸಂದರ್ಭದಲ್ಲಿ ಜನರ ಸಂಕಷ್ಟದಲ್ಲಿ ಎಲ್ಲ ಅಧಿಕಾರಿಗಳು ಸಹಕರಿಸಬೇಕು. ಸಾರ್ವಜನಿಕರಿಂದಾಗಲಿ ಅಥವಾ ಮಾಧ್ಯಮದವರಿಂದಾಗಲಿ ಮಳೆ, ಪ್ರವಾಹ ಅಥವಾ ಇನ್ಯಾವುದೇ ಪ್ರಕೃತಿ ವಿಕೋಪದಿಂದ ಹಾನಿಯಾದ ಮಾಹಿತಿ ಸಿಕ್ಕಲ್ಲಿ ಸ್ಥಳಕ್ಕೆ ತಂಡವಾಗಿ ಭೇಟಿ ನೀಡಿ ಪರೀಶೀಲಿಸಿ ಸ್ಪಂದಿಸುವಂತೆ ಸೂಚಿಸಿದರು. ಸಭೆಗೆ ಆಗಮಿಸಿದ ನೋಡಲ್ ಅಧಿಕಾರಿಗಳಿಗೆ ನೋಟಿಸ್ ನೀಡವಂತೆ ಸೂಚಿಸಿದರು.ಪ್ರತಿಯೊಂದು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಅವಲೋಕಿಸಿ ಮೂಲಭೂತ ಸೌಕರ್ಯಗಳು ಇದೆಯೇ ಎನ್ನುವುದನ್ನು ಪರಿಶೀಲಿಸಿ ಎಂದರು.
ಪ್ರವಾಹ ಪರಿಸ್ಥಿತಿ ಉದ್ಭವಿಸುವ ಸ್ಥಳಗಳನ್ನು ಗುರುತಿಸಿ ಆ ಭಾಗದ ಜನಪ್ರತಿನಿಧಿಗಳು, ಸಂಘ ಸಂಸ್ಥೆಯವರ ಸಹಕಾರದ ಮೇರೆಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಪ್ರಕೃತಿ ವಿಕೋಪ ಉಂಟಾದಾಗ ಸ್ಪಂದನೆ ನಡೆಸಬೇಕು. ಕಾಳಜಿ ಕೇಂದ್ರದಲ್ಲಿ ನೀರು, ವಿದ್ಯುತ್ ಊಟ ವಸತಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಪಾಕೃತಿಕ ವಿಕೋಪದಡಿ ಮೃತಪಟ್ಟ ಕುಟುಂಬಗಳಿಗೆ 48 ಗಂಟೆಯಲ್ಲಿ ಪರಿಹಾರ ನೀಡುವ ಕಾರ್ಯವಾಗಬೇಕು ಎಂದು ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಪಂ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿಗಳು, ನೋಡಲ್ ಅಧಿಕಾರಿಗಳು ಜಂಟಿ ಸರ್ವೆ ನಡೆಸಿ ಹಾನಿ ಸಂಭವಿಸಿದರೆ ಕೂಡಲೇ ಪರಿಹಾರಕ್ಕೆ ಕ್ರಮ ಕೈಗೊಳ್ಳವಂತೆ ಇದೆ ವೇಳೆ ಸೂಚಿಸಿದರು.
ಮುಗ್ವಾ ಗ್ರಾಪಂ ಆವರಣದಲ್ಲಿರುವ ಮಳೆ ಮಾಪನ ಕೆಟ್ಟಿರುವ ಬಗ್ಗೆ ಕಳೆದ ವರ್ಷವೇ ಮಾಹಿತಿ ನೀಡಿದರೂ ದುರಸ್ತಿ ಆಗದೇ ಇರುವ ಬಗ್ಗೆ ಪಿಡಿಒ ಕವಿತಾ ಸಭೆಯ ಗಮನಕ್ಕೆ ತಂದಾಗ, ಕೂಡಲೇ ದುರಸ್ತಿಪಡಿಸುವಂತೆ ಸಂಭದಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಹಳದಿಪುರ ಬಡಗಣಿ ನದಿಯ ನೀರು ರೈತರ ಜಮೀನು ಹಾಗೂ ಮನೆಗಳಿಗೆ ನುಗ್ಗದಂತೆ ಕ್ರಮ ಕೈಗೊಳ್ಳಲು ಹಳದೀಪುರ ಪಿಡಿಒ ಜಿ.ಎಲ್.ನಾಯ್ಕ ತಿಳಿಸಿದಾಗ, ಸಣ್ಣನೀರಾವರಿ ಇಲಾಖೆ ವತಿಯಿಂದ ಮುಂಬರುವ ದಿನದಲ್ಲಿ ಆದ್ಯತೆಯ ಮೇರೆಗೆ ಕಾಮಗಾರಿ ನಡೆಸುವಂತೆ ಸೂಚನೆ ನೀಡಿದರು.
ಗ್ರೇಡ್ ೨ ತಹಶೀಲ್ದಾರ ಉಷಾ ಪಾವಸ್ಕರ್, ಸಿಪಿಐ ಸಿದ್ದರಾಮೇಶ್ವರ, ನೋಡಲ್ ಅಧಿಕಾರಿಗಳು, ತಾಲೂಕಿನ ಪಿಡಿಒಗಳು, ಗ್ರಾಮಲೆಕ್ಕಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.