ಅರಸೀಕೆರೆ: ಡೆಂಘೀ ಚಿಕಿತ್ಸೆಗಾಗಿ ಯಾವುದೇ ನಿರ್ದಿಷ್ಟ ಔಷಧಿ ಲಭ್ಯವಿಲ್ಲ. ಈ ರೋಗದ ವಿರುದ್ಧ ಹೋರಾಡಲು ಮುನ್ನೆಚ್ಚರಿಕೆ ಹಾಗೂ ಜಾಗೃತಿಯೇ ಅತ್ಯಂತ ಪರಿಣಾಮಕಾರಿ ಮಾರ್ಗ ಎಂದು ಬಾಣಾವರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ನಿವೇದಿತಾ ತಿಳಿಸಿದರು.
ಶಿಬಿರದ ಸಂದರ್ಭದಲ್ಲಿ ಡಾ. ನಿವೇದಿತಾ ಅವರು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದರು.
ಆರೋಗ್ಯ ನಿರೀಕ್ಷಕ ಶ್ರೀ ಪ್ರಸನ್ನ ಅವರು ಸೊಳ್ಳೆಗಳ ನಿಯಂತ್ರಣ ಮತ್ತು ಪರಿಸರ ಸ್ವಚ್ಛತೆ ಮೂಲಕ ಡೆಂಘೀ ಹಾಗೂ ಮಲೇರಿಯಾ ತಡೆಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.ಮತ್ತೊಬ್ಬ ಆರೋಗ್ಯ ನಿರೀಕ್ಷಕ ನಿಜಲಿಂಗಪ್ಪ ಅವರು ವೈಯಕ್ತಿಕ ಮಟ್ಟದಲ್ಲಿ ಪಾಲಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗೀತಾ ಮಾತನಾಡಿ, ಡೆಂಘೀ ರೋಗದ ಪರಿಣಾಮಗಳು ಅಪಾಯಕಾರಿಯಾಗಿದ್ದು, ವಿದ್ಯಾರ್ಥಿಗಳು ಹಾಗೂ ಎಲ್ಲಾ ಸಾರ್ವಜನಿಕರು ಇದರ ಬಗ್ಗೆ ಜಾಗೃತರಾಗಬೇಕು. ಶುದ್ಧತೆಯ ಪಾಲನೆ ಮತ್ತು ಸರಿಯಾದ ಮಾಹಿತಿ ಸ್ವೀಕರಣದಿಂದ ಡೆಂಘೀ ತಡೆಗಟ್ಟುವಿಕೆ ಸಾಧ್ಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಡಾ. ಸುನಿಲ್ ಕುಮಾರ್ ಎಂ.ಎನ್, ಆರೋಗ್ಯ ನಿರೀಕ್ಷಕಿ ಶ್ರೀಮತಿ ಜವರಮ್ಮ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್. ನಾರಾಯಣ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.