ಶಿವಮೊಗ್ಗ: ಆಟೋ ಪ್ರಯಾಣಿಕರಿಗೆ ಆಗುತ್ತಿರುವ ಕಿರಿಕಿರಿಯಿಂದ ಮುಕ್ತಿಗೊಳಿಸಿ, ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಹತ್ವದ ನಿರ್ಣಯ ಕೈಗೊಂಡಿದ್ದು, ಸೆ.1ರಿಂದಲೇ ಅನ್ವಯವಾಗುವಂತೆ ಆರಂಭದ ಹಂತವಾಗಿ ನಗರದ ರೈಲ್ವೇ ನಿಲ್ದಾಣದಿಂದ ಪ್ರೀಪೇಯ್ಡ್ ಆಟೋ ಕೌಂಟರ್ಗಳನ್ನು ಪ್ರಾಯೋಗಿಕವಾಗಿ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರೀಪೇಯ್ಡ್ ಆಟೋ ಕೌಂಟರ್ಗಳನ್ನು ಆರಂಭಿಸುವ ಕುರಿತಂತೆ ಏರ್ಪಡಿಸಿದ್ದ ಇಲಾಖಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.ಪೊಲೀಸ್, ಸಾರಿಗೆ, ಮಹಾನಗರಪಾಲಿಕೆ ಇವರ ಸಹಯೋಗದೊಂದಿಗೆ ಪ್ರೀಪೇಯ್ಡ್ ವಸ್ಥೆಯನ್ನು ಅನುಷ್ಠಾನಕ್ಕೆ ತರಲಾಗುವುದು. ಅದಕ್ಕೂ ಮುನ್ನ ಆಟೋ ಚಾಲಕರು ಮತ್ತು ಮಾಲೀಕರ ಅಭಿಪ್ರಾಯವನ್ನೂ ಪಡೆದು, ಸಾರ್ವಜನಿಕರು ಹಾಗೂ ಆಟೋ ಚಾಲಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಆರಂಭಿಕ ಹಂತದಲ್ಲಿ ರೈಲ್ವೇ ನಿಲ್ದಾಣದಲ್ಲಿ ಆಯ್ದ ಮೂರು ಸ್ಥಳಗಳಲ್ಲಿ ಪ್ರೀಪೇಯ್ಡ್ ಆಟೋ ಕೌಂಟರ್ಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಅದಕ್ಕಾಗಿ ನಗರ ಸ್ಥಳೀಯ ಸ್ವಯಂಸೇವಾ ಸಂಸ್ಥೆ ಚೈತನ್ಯ ರೂರಲ್ಡೆವಲಪ್ಮೆಂಟ್ಸೊಸೈಟಿಯ ವ್ಯವಸ್ಥಾಪಕರು ಆಸಕ್ತಿ ವಹಿಸಿದ್ದು, ಈಗಾಗಲೇ ಅದರ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳ ಅಭಿಪ್ರಾಯ ಹಾಗೂ ಸಹಕಾರವನ್ನು ಪಡೆದು ಕ್ರಮ ವಹಿಸಲಾಗುವುದು ಎಂದು ಹೇಳಿದರು.ಈ ಪ್ರೀಪೇಯ್ಡ್ ಆಟೋ ಕೌಂಟರ್ಗಳ ಆರಂಭದಿಂದ ನಗರದಲ್ಲಿನ ಸಾರ್ವಜನಿಕರು ಹಾಗೂ ನೆರೆಯ ಜಿಲ್ಲೆ, ತಾಲೂಕುಗಳಿಂದ ನಗರಕ್ಕೆ ವಿವಿಧ ಉದ್ದೇಶಗಳಿಗಾಗಿ ಆಗಮಿಸುವವರಿಗೆ ಅನುಕೂಲವಾಗಲಿದೆ. ಸುಗಮ ಸಂಚಾರ ವ್ಯವಸ್ಥೆಯಿಂದಾಗಿ ಶಿಸ್ತು ಮೂಡಲಿದೆ. ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿರುವ ಈ ವ್ಯವಸ್ಥೆ ಯಶಸ್ವಿಯಾದಲ್ಲಿ ನಗರದ ಎಲ್ಲಾ ಪ್ರಮುಖ ವರ್ತುಲಗಳು, ಜನನಿಬಿಡ ಸ್ಥಳಗಳಿಗೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದರು.ಈ ಕೌಂಟರ್ಗಳ ಆರಂಭದಿಂದಾಗಿ ನಗರದಲ್ಲಿನ ಆಟೋ ಚಾಲಕರಲ್ಲಿ ಸ್ಪರ್ಧೆ ಅಥವಾ ಚರ್ಚೆಗೆ ಅವಕಾಶಗೊಳ್ಳದಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಸಮಾಲೋಚನೆ ನಡೆಸಬೇಕು. ಅದಕ್ಕೆ ಚಾಲಕರು ಸಹಕಾರ ನೀಡಬೇಕು. ಚಾಲಕರು ನಿಯಮಾನುಸಾರ ಸರತಿ ಸಾಲಿನಲ್ಲಿ ನಿಂತು ಸಾರ್ವಜನಿಕ ಸೇವೆಗೆ ಸಿದ್ಧರಾಗಬೇಕು. ಪ್ರೀಪೇಯ್ಡ್ ಸೇವೆ ನೀಡುವ ಪ್ರತಿ ಆಟೋಗಳ ಚಾಲಕರು ನಿಯಮಾನುಸಾರ ವಾಹನ ಚಾಲನ ಪರವಾನಿಗಿ, ನೋಂದಣಿ ಪ್ರಮಾಣಪತ್ರ ಹೊಂದಿರಬೇಕು. ದಿನನಿತ್ಯ ರೈಲ್ವೇ ಸ್ಟೇಷನ್ನ ಸ್ಟ್ಯಾಂಡ್ನಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಮೊದಲ ಆದ್ಯತೆಯಾಗಿ ಪರಿಗಣಿಸುವ ಬಗ್ಗೆಯೂ ಚರ್ಚಿಸಲಾಗಿದೆ ಎಂದರು. ಈಗಿರುವ ಕನಿಷ್ಠ ದರವನ್ನೇ ನಿಗದಿಪಡಿಸಿಕೊಂಡು ಯಾವುದೇ ಬದಲಾವಣೆಗಳಿಲ್ಲದೆ ಆಟೋ ನಡೆಸಲು ಚಾಲಕರು ಸಹಕರಿಸಬೇಕು. ಉಳಿದಂತೆ ಆಟೋ ಚಾಲಕರ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಆದ್ಯತೆಯ ಮೇಲೆ ಗಮನಹರಿಸಲಾಗುವುದು ಎಂದು ತಿಳಿಸಿದರು.ಸಭೆಯಲ್ಲಿ ಉಪಸ್ಥಿತರಿದ್ದ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಮಾತನಾಡಿ, ಹೊಸದಾಗಿ ಪ್ರವೇಶಿಸುತ್ತಿರುವ ಆಟೋಗಳಿಗೆ ನೀಡಲಾಗುತ್ತಿರುವ ಪರವಾನಿಗೆಯನ್ನು ತಾತ್ಕಾಲಿಕ ಅವಧಿಗೆ ಸ್ಥಗಿತಗೊಳಿಸಬೇಕು. ಮಹಾವೀರ ವೃತ್ತ ಸೇರಿದಂತೆ ನಗರದ ಪ್ರಮುಖ ವರ್ತುಗಳಲ್ಲಿ ಭಿಕ್ಷೆ ಯಾಚಿಸುವವರು, ವಸ್ತುಗಳ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಆಕಸ್ಮಿಕ ಅಪಘಾತಗಳು ಸಂಭವಿಸುತ್ತಿವೆ. ಅದರ ನಿಯಂತ್ರಣಕ್ಕೆ ಜಿಲ್ಲಾಡಳಿತ ಗಮನಹರಿಸಬೇಕು ಎಂದು ಒತ್ತಾಯಿಸಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನಾಗೇಂದ್ರ ಬಾಬು, ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಶಿರೋಳಕರ್, ಅಧೀಕ್ಷಕ ಶಶಿಧರ್, ಮಲ್ಲೇಶಪ್ಪ, ಕೆಎಸ್ಆರ್ಟಿಸಿ ನಿಯಂತ್ರಣಾಧಿಕಾರಿ ದಿನೇಶ್ ಕುಮಾರ್, ರೈಲ್ವೇ ಇಲಾಖೆಯ ಅಧಿಕಾರಿ ಬಿಶ್ವಾಸ್, ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.