ಚಿಕ್ಕಬೆಣಕಲ್ ಗ್ರಾಮದಲ್ಲಿ ಪೂರ್ವಭಾವಿ ಸಭೆ । ರಸ್ತೆ ತಡೆಗೆ ತೀರ್ಮಾನಕನ್ನಡಪ್ರಭ ವಾರ್ತೆ ಗಂಗಾವತಿ
ಗ್ರಾಮ ಪಂಚಾಯಿತಿಯಲ್ಲಿ ಚಿಕ್ಕಬೆಣಕಲ್, ಹಿರೇಬೆಣಕಲ್, ಹಳೇ ಕುಮ್ಮಟ ಸೇರಿದಂತೆ 10 ಗ್ರಾಮಗಳ ಪ್ರಮುಖರು ಹೋರಾಟದ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಮುಖಂಡ ಆನಂದಗೌಡ, ಈಗಾಗಲೇ ಕಳೆದ ಒಂದು ವಾರದಿಂದ ಚಿಕ್ಕಬೆಣಕಲ್- ಹಿರೇಬೆಣಕಲ್ ಸರ್ವೇ ನಂ. 35 ಅರಣ್ಯ ಪ್ರದೇಶದಲ್ಲಿ 1200 ಎಕರೆ ಭೂಮಿಯನ್ನು ಗುರುತಿಸಿ ನಕ್ಷೆ ತಯಾರಿಸಿದ್ದಾರೆ. ಆದರೆ ಗ್ರಾಮಗಳ ಜನರಿಗೆ ತಿಳಿಸದೆ ಗೌಪ್ಯವಾಗಿ ಭೂಮಿಯನ್ನು ಗುರುತಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿರುವುದು ಖಂಡನಾರ್ಹ ಎಂದು ಆಕ್ರೋಶ ವ್ಯಕ್ತ ಪಡಿಸಿದರು.ರಸ್ತೆ ತಡೆ ಪ್ರತಿಭಟನೆ:ಅಣು ವಿದ್ಯುತ್ ಸ್ಥಾವರ ಸ್ಥಾಪನೆ ವಿರೋಧಿಸಿ ಸುಮಾರು 10 ಗ್ರಾಮಗಳ ನಾಗರಿಕರ ನೇತೃತ್ವದಲ್ಲಿ ಚಿಕ್ಕಬೆಣಕಲ್, ಹಿರೇಬೆಣಕಲ್ ಮುಖ್ಯ ಹೆದ್ದಾರಿ ಅಥವಾ ಹೇಮಗುಡ್ಡ ಟೋಲ್ ಗೇಟ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.