ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿ ದಿಸೆಯಲ್ಲಿಯೇ ಸಿದ್ಧತೆ ಮಾಡಿಕೊಂಡರೆ ಭವಿಷ್ಯದಲ್ಲಿ ಯಶಸ್ಸು ಸಾಧಿಸಬಹುದು ಎಂದು ತಹಸೀಲ್ದಾರ್ ಜಿ.ಎಸ್. ಶಂಕರಪ್ಪ ಹೇಳಿದರು.ಪಟ್ಟಣದ ನವೋದಯ ಪಿಯು ಕಾಲೇಜು, ನವೋದಯ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವ್ಯಾಸಂಗದ ಜತೆ ಪ್ರಸಕ್ತ ವಿದ್ಯಮಾನವನ್ನು ತಿಳಿದುಕೊಳ್ಳಬೇಕು. ದಿನಪತ್ರಿಕೆಗಳನ್ನು ಓದಬೇಕು. ಯೋಜನಾಬದ್ಧವಾಗಿ ಓದಿದರೆ ನಾಗರಿಕ ಸೇವೆ ಸೇರಲು ಅನುಕೂಲವಾಗುತ್ತದೆ. ಸಾಧನೆಗೆ ಬಡತನ ಅಡ್ಡಿಯಾಗಬಾರದು. ಕಷ್ಟಪಟ್ಟು ಓದಿದರೆ ಗುರಿ ಮುಟ್ಟಬಹುದು ಎಂದು ಸಲಹೆ ನೀಡಿದರು.
ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಪಠ್ಯದ ಜತೆ ಸಂಗೀತ, ಸಾಹಿತ್ಯ ಮತ್ತು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ನಾಯಕತ್ವದ ಗುಣ ಮೈಗೂಡಿಸಿಕೊಳ್ಳಬಹುದು. ನವೋದಯ ವಿದ್ಯಾಸಂಸ್ಥೆಯ ಪ್ರಗತಿಗೆ ಸಹಕಾರ ನೀಡಲಾಗುವುದು ಎಂದು ತಿಳಿಸಿದರು. ನವೋದಯ ವಿದ್ಯಾಸಂಘದ ಅಧ್ಯಕ್ಷ ಸಿ.ಜೆ. ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳು ಇಷ್ಟಪಟ್ಟು ಓದಬೇಕು. ಶಿಸ್ತುಬದ್ಧ ಜೀವನ ಭವಿಷ್ಯದ ಜೀವನಕ್ಕೆ ಸೋಪಾನ ಎಂದು ತಿಳಿಸಿದರು. ನವೋದಯ ವಿದ್ಯಾಸಂಘದ ಕಾರ್ಯದರ್ಶಿ ಕೆ. ಪಿ. ಶರತ್, ಒ.ಆರ್. ರಂಗೇಗೌಡ, ನಿರ್ದೇಶಕರಾದ ಆನಂದ್ ಕಾಳೇನಹಳ್ಳಿ ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ವಿದ್ಯಾಸಂಘದ ಗೌರವಾಧ್ಯಕ್ಷ ಸಿ.ಎಸ್. ಶೇಷಶಯನ, ಖಜಾಂಚಿ ಜಲೇಂದ್ರ ಕುಮಾರ್, ನಿರ್ದೇಶಕರಾದ ಗೋವಿಂದರಾಜು, ಜೆ.ಕೆ. ರಾಘವೇಂದ್ರ, ನವೋದಯ ಪಿಯು ಕಾಲೇಜು ಪ್ರಾಂಶುಪಾಲ ಎ.ಟಿ. ಸಂಜಯಕುಮಾರ್, ದೊಡ್ಡಕುಂಚೆ ಪಿಯು ಕಾಲೇಜು ಪ್ರಾಂಶುಪಾಲ ಆರ್. ಹನುಮಂತಪ್ಪ, ನವೋದಯ ಪಿಯು ಕಾಲೇಜು ಉಪಪ್ರಾಂಶುಪಾಲ ಎಸ್. ಸಿ. ಸುರೇಶ್, ದೊಡ್ಡಕುಂಚೆ ಶಾಲೆಯ ಮುಖ್ಯಶಿಕ್ಷಕ ಮಂಜಪ್ಪ, ಬಾಲಿಕಾ ಶಾಲೆಯ ಮುಖ್ಯಶಿಕ್ಷಕ ಸೀತರಾಮ್ ನಾಯಕ್, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ್ ಇದ್ದರು.