ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪಟ್ಟಣದಲ್ಲಿ ವರಮಹಾಲಕ್ಷ್ಮೀ ಹಬ್ಬದ ಮುನ್ನಾ ದಿನವಾದ ಗುರುವಾರ ಪಟ್ಟಣದ ಪೇಟೆ ಬೀದಿ, ವಾಣಿಜ್ಯ ಸಂಕೀರ್ಣಗಳು ಹಾಗೂ ತರಕಾರಿ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಅಂಗಡಿಗಳಲ್ಲಿ ಬಲು ಜೋರಾಗಿತ್ತು ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರ ವಹಿವಾಟು ಭರ್ಜರಿಯಾಗಿ ಜರುಗುತ್ತಿತ್ತು.
ತೆಂಗಿನಕಾಯಿ ಒಂದಕ್ಕೆ ೪೦ ರು.ನಿಂದ ೬೦ ರು. ತನಕವಿತ್ತು, ಒಂದು ಮಾರು(೨ ಮೀಟರ್ನಷ್ಟು) ಕನಕಾಂಬರ ೧೫೦ ರು., ಶೇವಂತಿಗೆ ೮೦ರಿಂದ ೧೨೦ ರು., ಮಲ್ಲಿಗೆ ಹೂ ೨೦೦ ರು., ತಾವರೆ ಹೂ ಒಂದಕ್ಕೆ ೫೦ ರು, ಹೂವಿನ ಹಾರಗಳು ೧೫೦ ರು.ನಿಂದ ೨೫೦ ರು, ಬಾಳೇಹಣ್ಣು ೧೦೦ ರು, ಸೇಬು ೨೦೦ ರು. ಇತರೆ ಹಣ್ಣುಗಳು ಧಾರಣೆ ೧೦೦ ರು. ಹೆಚ್ಚು ಧಾರಣೆ ಇತ್ತು. ಪೂಜಾ ಸಾಮಗ್ರಿಗಳಾದ ಅರಿಶಿಣ, ಕುಂಕುಮ, ಗಂಧದಕಟ್ಟಿ, ಕರ್ಪೂರ, ದೀಪದ ಬತ್ತಿ, ಎಣ್ಣೆ, ರಂಗೋಲಿ ಬಣ್ಣದ ಪುಡಿ, ಬಾಳೆಕಂದು, ಮಾವಿನಸೊಪ್ಪು ಹಾಗೂ ಗೃಹೋಪಯೋಗಿ ವಸ್ತುಗಳು ಅಂಗಡಿಗಳಿಗೆ ಜನರು ಮುಗಿಬಿದ್ದಿದ್ದರು. ಆದರೆ ಬಸ್ ದರವಿಲ್ಲದ ಕಾರಣ ಮಹಿಳೆಯರು ಸೀರೆ, ಡ್ರೆಸ್ ಹಾಗೂ ಮಕ್ಕಳ ಬಟ್ಟೆ ಖರೀದಿಗೆ ಜಿಲ್ಲಾ ಕೇಂದ್ರಕ್ಕೆ ತೆರಳಿದ ಕಾರಣ ಬಟ್ಟೆ ಅಂಗಡಿಗಳಲ್ಲಿ ವಹಿವಾಟು ಕಡಿಮೆಯಾಗಿತ್ತು. ಕೋಟೆ ಪ್ರವೇಶದ್ವಾರದಿಂದ ಕೋಟೆ ಶ್ರೀ ಮಾರಮ್ಮಗುಡಿ ವೃತ್ತದ ತನಕ ರಸ್ತೆಯ ಇಕ್ಕೆಲಗಳಲ್ಲಿ ಬೆಳಿಗ್ಗೆಯಿಂದಲೇ ವ್ಯಾಪಾರ ವಹಿವಾಟು ಆರಂಭಗೊಂಡಿತ್ತು. ಸಂಜೆಯ ಹೊತ್ತಿಗಾಗಲೇ ಮಾರುಕಟ್ಟೆ ಪ್ರದೇಶಗಳಲ್ಲಿ ಜನದಟ್ಟಣೆ ಹೆಚ್ಚಾಗಿ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿತ್ತು. ಹಬ್ಬದ ವಹಿವಾಟು ರಾತ್ರಿಯ ತನಕವೂ ಮುಂದುವರಿದಿತ್ತು.ಪೇಟೆಯ ಕಿರಿದಾದ ಮುಖ್ಯ ರಸ್ತೆಯಲ್ಲಿ ತಳ್ಳುಗಾಡಿಗಳಲ್ಲಿ ಹಣ್ಣು, ತರಕಾರಿ ಮಾರಾಟ ಮಾಡುವ ವರ್ತಕರಿಂದಾಗಿ ಅಂಗಡಿ ಮುಂಗಟ್ಟುಗಳಿಗೆ ತೆರಳಲು ಜನರು ಮತ್ತು ತಿರುಗಾಡಲು ದ್ವಿಚಕ್ರ ಹಾಗೂ ಆಟೋ ರಿಕ್ಷಾ ಚಾಲಕರು ಸುಗಮ ಸಂಚಾರದ ತೊಂದರೆಯಿಂದಾಗಿ ವ್ಯಾಪಾರ ಕುಂಠಿತಗೊಂಡಿದೆ ಎಂದು ವರ್ತಕರು ಬೇಸರ ವ್ಯಕ್ತಪಡಿಸಿದರು.
ಕವರ್ಡೆಕ್ ಮೇಲಿನ ಹೂವಿನ ಮಾರುಕಟ್ಟೆಯಿಂದ ಎಪಿಎಂಸಿ ಮಾರುಕಟ್ಟೆಗೆ ತೆರಳುವ ರಸ್ತೆಯ ರಸ್ತೆಬದಿ ವ್ಯಾಪಾರಕ್ಕೆ ಉತ್ತಮ ಸ್ಥಳವಾಕಾಶವಿದ್ದು, ಪೇಟೆ ಹಾಗೂ ಕೋಟೆ ಮುಖ್ಯ ರಸ್ತೆಬದಿಯ ವ್ಯಾಪಾರಿಗಳನ್ನು ಹೂವಿನ ಮಾರುಕಟ್ಟೆಯಿಂದ ಎಪಿಎಂಸಿ ಮಾರುಕಟ್ಟೆಗೆ ತೆರಳುವ ರಸ್ತೆಗೆ ಸ್ಥಳಾಂತರಿಸಿದರೆ ವಾಹನ ದಟ್ಟಣೆ ಕಡಿಮೆಯಾಗಿ ಸುಗಮ ಸಂಚಾರಕ್ಕೆ ಅವಕಾಶವಾಗಲಿದೆ.