ಚಿತ್ರದುರ್ಗ: ಭಾರತದ ಭವಿಷ್ಯದ ನಾಯಕಿ ಪ್ರಿಯಾಂಕಾ ಗಾಂಧಿ ಚಿತ್ರದುರ್ಗ ಜಿಲ್ಲಾ ಕೇಂದ್ರಕ್ಕೆ ಏ.23ರಂದು ಆಗಮಿಸುತ್ತಿದ್ದು, ಅವರ ಭಾಷಣ ಕೇಳುವ ಕುತೂಹಲ ಸಹಜವಾಗಿ ಜನರಲ್ಲಿ ಹೆಚ್ಚು ಇದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ರಾಜ್ಯದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಪಕ್ಷ ಘೋಷಣೆ ಮಾಡಿದಾಗ ಸಾಧ್ಯವೇ ಇಲ್ಲ ಇದು ಸುಳ್ಳು ಎಂದು ವಿರೋಧ ಪಕ್ಷ ಅಪ್ರಚಾರ ನಡೆಸಿದರು. ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬರುತ್ತಿದ್ದಂತೆ ಯೋಜನೆಗಳನ್ನು ಜಾರಿಗೊಳಿಸಿದ ಬಳಿಕ ರಾಜ್ಯ ದಿವಾಳಿ ಆಗಲಿದೆ ಎಂದು ಬಿಜೆಪಿಗರು ಆರೋಪಿಸಿದರು. ಆದರೆ, ಯೋಜನೆಗಳು ಸುಗಮವಾಗಿ ಅನುಷ್ಠಾನಗೊಂಡಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಭರದಿಂದ ಸಾಗುತ್ತಿವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದ ಶೈಲಿಗೆ ಬಿಜೆಪಿಯವರು ಬೆಚ್ಚಿದ್ದಾರೆ. ಆರೋಪ ಮಾಡಲು ಏನೂ ಇಲ್ಲದೆ ಕಾಂಗ್ರೆಸ್ ಅಧಿಕಾರದಲ್ಲಿ ಬರಗಾಲ ಎಂಬ ಅವೈಜ್ಞಾನಿಕ, ಮೂಢನಂಬಿಕೆ ಮಾತುಗಳನ್ನು ಆಡುತ್ತಿದ್ದಾರೆ. ಈ ಹೇಳಿಕೆ ಮಧ್ಯೆಯೇ ರಾಜ್ಯದಲ್ಲಿ ಮಳೆ ಆಗುತ್ತಿದೆ. ವಿಜ್ಞಾನದ ತಿಳಿವಳಿಕೆ ಇಲ್ಲದವರು, ಸಾಮಾನ್ಯ ವ್ಯಕ್ತಿಗೆ ಇರುವಷ್ಟು ಜ್ಞಾನ ಇಲ್ಲದ ಬಿಜೆಪಿಯವರು ಪ್ರಕೃತಿ ಸಹಜ ಮುನಿಸನ್ನು ಕಾಂಗ್ರೆಸ್ ಮೇಲೆ ಆರೋಪಿಸುವ ಮೂಲಕ ನಗೆಪಾಟಿಲು ಆಗುತ್ತಿದ್ದಾರೆ ಎಂದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್ಪೀರ್, ಮುಖಂಡರಾದ ಪ್ರಕಾಶ ರಾಮನಾಯ್ಕ, ಎನ್.ಡಿ.ಕುಮಾರ್, ಓ.ಶಂಕರ್, ಬಿ.ಪಿ.ಪ್ರಕಾಶಮೂರ್ತಿ, ಡಿ.ಎನ್.ಮೈಲಾರಪ್ಪ, ವಕೀಲ ಶರಣಪ್ಪ, ರವಿಕುಮಾರ್ ಇತರರಿದ್ದರು.