ತಾಪಂ ಸಭಾಂಗಣದಲ್ಲಿ ವಾಜಗದ್ದೆಯಲ್ಲಿ ತಾಲೂಕಾ ೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕ ಪತ್ರ ಮಂಡನೆ ಹಾಗೂ ಕೃತಜ್ಞತಾ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ತಾಪಂ ಸಭಾಂಗಣದಲ್ಲಿ ವಾಜಗದ್ದೆಯಲ್ಲಿ ತಾಲೂಕಾ ೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕ ಪತ್ರ ಮಂಡನೆ ಹಾಗೂ ಕೃತಜ್ಞತಾ ಸಭೆ ನಡೆಯಿತು.
ಕಾರ್ಯಕ್ರಮದಲ್ಲಿ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಜಿ. ನಾಗರಾಜ ಮಾತನಾಡಿ, ಕನ್ನಡದ ಕುರಿತಾಗಿ ಎಲ್ಲ ಮನಸ್ಸುಗಳು ಒಟ್ಟಾಗಿದ್ದರೆ ಯಶಸ್ಸು ಸಾಧ್ಯ ಎನ್ನುವುದನ್ನು ಈ ಸಮ್ಮೇಳನ ನಿರೂಪಿಸಿದೆ. ಇದಕ್ಕೆ ವಾಜಗದ್ದೆಯ ದೇವಾಲಯ ಸಮಿತಿ, ಅಲ್ಲಿನ ಯುವಕ ಸಂಘ ಹಾಗೂ ಸುತ್ತಲಿನ ಸಾರ್ವಜನಿಕರ ಸಹಕಾರ ಹೆಚ್ಚಿನದು. ಸಾಹಿತ್ಯ ಸಮ್ಮೇಳನಗಳನ್ನು ಸಣ್ಣ ಊರು ಎಂದು ಭಾವಿಸದೇ ಕಟ್ಟಕಡೆಯ ಗ್ರಾಮೀಣ ಪ್ರದೇಶದಲ್ಲಿ ನಡೆಸಿದರೆ ಅರ್ಥಪೂರ್ಣವಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಸಮ್ಮೇಳನಗಳಿಗೆ ಸೀಮಿತವಾಗದೇ ಮರೆಯಲ್ಲಿರುವ ಬರೆಹಗಾರರನ್ನು ಪ್ರೋತ್ಸಾಹಿಸಲು ಮುಂದಾಗಬೇಕು. ಪ್ರತಿಭಾವಂತ ಬರೆಹಗಾರರ ಕೃತಿಗಳ ಪ್ರಕಾಶನಕ್ಕೆ ಬೆಂಬಲಿಸುವಂತಾಗಬೇಕು ಎಂದರು.
ಸಮ್ಮೇಳನದ ಯಶಸ್ಸಿಗೆ ಕಾರಣರಾದ ಕೆ.ಜಿ. ನಾಗರಾಜ, ಎಂ.ಆರ್. ಕುಲಕರ್ಣಿ, ತಾಪಂ ಇಒ ದೇವರಾಜ ಹಿತ್ತಲಕೊಪ್ಪ, ವಾಜಗದ್ದೆ ಶ್ರೀ ದುರ್ಗಾವಿನಾ ಯಕ ದೇವಸ್ಥಾನದ ಅಧ್ಯಕ್ಷ ಎಸ್.ಎಂ. ಹೆಗಡೆ ಅವರನ್ನು ತಾಲೂಕು ಕಸಾಪದಿಂದ ಅಭಿನಂದಿಸಲಾಯಿತು.
ಕಸಾಪ ಗೌರವ ಕೋಶಾಧ್ಯಕ್ಷ ಪಿ.ಬಿ. ಹೊಸೂರು ಲೆಕ್ಕಪತ್ರ ಮಂಡಿಸಿ ಸಮ್ಮೇಳನಕ್ಕೆ ₹೨,೫೪,೯೦೨ ಆರ್ಥಿಕ ಸಹಾಯ ದೊರಕಿದ್ದು, ₹೧,೬೮,೭೫೩ ಖರ್ಚಾಗಿದೆ. ₹೮೬,೧೪೯ ಉಳಿದಿದೆ ಎಂದು ವಿವರ ನೀಡಿದರು.
ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ ನಾಯ್ಕ ಕುಂಬ್ರಿಗದ್ದೆ, ಸಮ್ಮೇಳನದ ಸರ್ವಾಧ್ಯಕ್ಷ ತಮ್ಮಣ್ಣ ಬೀಗಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎಂ.ಕೆ. ನಾಯ್ಕ ಹೊಸಳ್ಳಿ, ಸಾಹಿತಿ ಗಂಗಾಧರ ಕೊಳಗಿ, ಪತ್ರಕರ್ತ ಕನ್ನೇಶ ಕೋಲಸಿರ್ಸಿ, ಹಿರಿಯ ಸಾಹಿತಿ ಜಿ.ಜಿ .ಹೆಗಡೆ ಬಾಳಗೋಡು, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಗೌಡರ್, ಕಸಾಪ ನಿಕಟಪೂರ್ವ ಅಧ್ಯಕ್ಷ ಗೋಪಾಲ ಭಾಶಿ, ಪದಾಧಿಕಾರಿಗಳಾದ ರತ್ನಾಕರ ನಾಯ್ಕ, ಟಿಕೆ ಎಂ ಆಜಾದ್, ರಾಘವೇಂದ್ರ ಕಾವಂಚೂರು, ಲಕ್ಷ್ಮಣ ನಾಯ್ಕ ಬೇಡ್ಕಣಿ, ಸದಾಶಿವ ಹರಗಿ ಮತ್ತಿತರರು ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ಶಿರಳಗಿ ಸ್ವಾಗತಿಸಿ, ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.