ರೋಣ: ದೇಶ ತೀವ್ರಗತಿಯಲ್ಲಿ ಪ್ರಗತಿ ಹೊಂದಬೇಕು, ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಸಮಗ್ರ ಪ್ರಗತಿ ಹೊಂದಬೇಕು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಕನಸು ನನಸಾಗಬೇಕಿದೆ ಎಂದು ಬಾಗಲಕೋಟೆ ಲೋಕಸಭೆ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡ್ರ ಹೇಳಿದರು.
ದೇಶದ ಅಭಿವೃದ್ಧಿಗೆ, ಜನರ ಕಲ್ಯಾಣಕ್ಕಾಗಿ ಪ್ರಧಾನಿ ಮೋದಿಯವರು ಅನೇಕ ಯೋಜನೆ ಜಾರಿಗೆ ತಂದು ಯಶಸ್ವಿಯಾಗಿದ್ದಾರೆ. ಪ್ರತಿಯೊಬ್ಬರಿಗೂ ಕೇಂದ್ರ ಸರ್ಕಾರದ ಯೋಜನೆ ತಲುಪಿಸಿದ್ದಾರೆ. ದೇಶದ ಭದ್ರತೆಯಲ್ಲಿ ಪ್ರಧಾನಿ ಮೋದಿ ನಿರ್ಧಾರ ಮೆಚ್ಚುವಂತದಾಗಿದೆ. ದೇಶದ ಆರ್ಥಿಕ ಪರಿಸ್ಥಿತಿಯು 11 ರಿಂದ 3 ನೇ ಸ್ಥಾನಕ್ಕೆ ತರುವಲ್ಲಿ ಮೋದಿಯವರು ದೂರದೃಷ್ಟಿ ಹೊಂದಿದ್ದಾರೆ. ಕೊರೋನಾ ಸಂದರ್ಭದಲ್ಲಿ ಪ್ರಧಾನಮಂತ್ರಿ ಸ್ವನಿಧಿಯಿಂದ ₹20 ಸಾವಿರವರೆಗೆ ಸಹಾಯಧನ ಮಾಡಿದ್ದಾರೆ. ಕಮ್ಮಾರ, ಕುಂಬಾರ ಸೇರಿದಂತೆ ಕುಶಲಕರ್ಮಿಗಳಿಗೆ ಸಹಾಯಧನ ಒದಗಿಸಿದ್ದಾರೆ. ಹಣಕಾಸಿನ ನೆರವು ಇಲ್ಲದೇ ಯಾರು ಮುಂದೆ ಬರಲು ಸಾಧ್ಯವಿಲ್ಲ ಎಂಬ ದೃಷ್ಡಿಕೋನದಿಂದ ಉದ್ಯೋಗಸ್ಥರಿಗ ಬ್ಯಾಂಕ್ ಮೂಲಕ ಆರ್ಥಿಕ ನೆರವು ಕಲ್ಪಿಸಿದ್ದಾರೆ. ರಸ್ತೆ, ವಿಮಾನ ನಿಲ್ದಾಣ, ರೇಲ್ವೆ ನಿಲ್ದಾಣ, ರೈಲು ಸಂಪರ್ಕ ಸೇರಿದಂತೆ ಅನೇಕ ಸಾರಿಗೆ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ದೇಶ ತೀವ್ರಗತಿಯಲ್ಲಿ ಪ್ರಗತಿ ಹೊಂದಬೇಕು ಎಂಬ ಕನಸನ್ನು ಮೋದಿಯವರು ಹೊಂದಿದ್ದು, ಅವರ ಕನಸಿ ನೆನಸಾಗಬೇಕಿದೆ. ಈ ದಿಶೆಯಲ್ಲಿ ಜನರ ಆಶೀರ್ವಾದ ಅತೀ ಮುಖ್ಯವಾಗಿದೆ. ಮೋದಿಯವರು ಮೂರನೇ ಬಾರಿ ಪ್ರಧಾನಿಯನ್ನಾಗಿಸಲು ಬಿಜೆಪಿ ಅಭ್ಯರ್ಥಿಯಾದ ನನಗೆ ಎಲ್ಲರ ಆಶೀರ್ವಾದ ಬೇಕಿದೆ ಎಂದರು.
ಯುವ ಮುಖಂಡ ಉಮೇಶಗೌಡ. ಸಿ. ಪಾಟೀಲ ಮಾತನಾಡಿ, ಘೋಷಣೆ ಮಾಡಿದಂತೆ ಯೋಜನೆ ಅನುಷ್ಠಾನ ಮಾಡುವಲ್ಲಿ, ದೇಶಕ್ಕೆ ಬೇಕಾದ ಮೂಲ ಸೌಕರ್ಯ ಒದಗಿಸುವಲ್ಲಿ ಮೋದಿ ಶ್ರಮಿಸಿದ್ದಾರೆ. ರೈತರಿಗೆ ಕಿಸಾನ ಸಮ್ಮಾನ, ಜನಧನ ಯೋಜನೆ, ಆಯುಷ್ಮಾನ ಭಾರತ, 140 ಕೋಟಿ ಜನರಿಗೆ ಉಚಿತ ವ್ಯಾಕ್ಸಿನ್ ವಿತರಣೆ, ಗರೀಬ್ ಕಲ್ಯಾಣ ಅನ್ನ ಯೋಜನೆ, ಶಿಕ್ಷಣ, ಸಾರಿಗೆ ಸೇರಿದಂತೆ ಯೋಜನೆ ಜಾರಿಗೆ ತಂದಿದ್ದಾರೆ. ದೇಶದ ಭದ್ರತೆ, ಸುರಕ್ಷತೆ ದೃಷ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಪಾರ ಶ್ರಮಿಸಿದ್ದಾರೆ.ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡಿದ್ದಾರೆ. ಸಾರ್ವಜನಿಕರಿಗೆ ಜೀವನ ಸುಸ್ಥಿತಿಯಲ್ಲಿ ನಡೆಯಬೇಕಾದಲ್ಲಿ ನರೇಂದ್ರ ಮೋದಿಯವರಿಗೆ ಶಕ್ತಿ ತುಂಬಬೇಕಿದೆ ಎಂದರು.ತಾಲೂಕಿನ ಬೆಳವಣಕಿ, ಕೌಜಗೇರಿ, ಯಾವಗಲ್ಲ, ಅಸೂಟಿ, ಯಾ.ಸ. ಹಡಗಲಿ, ಮಲ್ಲಾಪೂರ, ಸಂದಿಗವಾಡ, ಹುಲ್ಲೂರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಜರುಗಿತು.