ವಿಕಲಚೇತನ ಮಕ್ಕಳ ಸಬಲೀಕರಣಕ್ಕೆ ಆದ್ಯತೆ ನೀಡಿ

KannadaprabhaNewsNetwork |  
Published : Sep 02, 2025, 01:00 AM IST
ಕ್ಯಾಪ್ಶನ್ | Kannada Prabha

ಸಾರಾಂಶ

ವಿಕಲಚೇತನ ಮಕ್ಕಳ ಸಬಲೀಕರಣ ಕೇವಲ ಜವಾಬ್ದಾರಿಯಲ್ಲ. ಅದು ನಮ್ಮ ಸಮಾಜದ ನೈತಿಕ ಕರ್ತವ್ಯ. ಪುನರ್ವಸತಿ ಕಾರ್ಯಕರ್ತರು ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ವಿಕಲಚೇತನ ಮಕ್ಕಳ ಸಬಲೀಕರಣ ಕೇವಲ ಜವಾಬ್ದಾರಿಯಲ್ಲ. ಅದು ನಮ್ಮ ಸಮಾಜದ ನೈತಿಕ ಕರ್ತವ್ಯ. ಪುನರ್ವಸತಿ ಕಾರ್ಯಕರ್ತರು ಈ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ವಿಕಲಚೇತನ ಮಕ್ಕಳ ಸವಾಲುಗಳು ಮತ್ತು ಅವರ ಅವಕಾಶಗಳ ನಡುವಿನ ಸೇತುವೆಯಾಗಿ, ವಿಕಲಚೇತನ ಮಕ್ಕಳಿಗೆ ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುವ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಭರವಸೆಯನ್ನು ತುಂಬುವ ಪ್ರೇರಕರಾಗಿ ಕೆಲಸಮಾಡಬೇಕಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಹೇಳಿದರು.

ಅವರು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮೊಬಿಲಿಟಿ ಇಂಡಿಯಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ಶಿರಾ ತಾಲೂಕಿನ ಗ್ರಾಮೀಣ ಮತ್ತು ನಗರ ಪುನರ್ವಸತಿ ಕಾರ್ಯಕರ್ತರಿಗೆ ಮಕ್ಕಳ ಹಕ್ಕುಗಳ ಬಗ್ಗೆ ಏರ್ಪಡಿಸಿದ್ದ ತರಬೇತಿ ಉದ್ಘಾಟಿಸಿ ಮಾತನಾಡಿದರು.

ವಿಕಲಚೇತನ ಮಕ್ಕಳಿಗೆ ಪರಿಕರಗಳನ್ನು ವಿತರಿಸುವುದರ ಮೂಲಕ ಕಾರ‍್ಯಕ್ರಮ ಉದ್ಘಾಟಿಸಿದ ಅವರು ಕುಟುಂಬಗಳಿಗೆ ಮಾರ್ಗದರ್ಶನ ನೀಡುವುದು, ವಿಕಲಚೇತನ ಮಕ್ಕಳನ್ನು ಶೈಕ್ಷಣಿಕ ಮತ್ತು ಸಾಮಾಜಿಕ ಬೆಂಬಲ ವ್ಯವಸ್ಥೆಗಳಿಗೆ ಸಂಪರ್ಕಿಸುವ ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಮೂಲಕ, ಪುನರ್ಸಸತಿ ಕಾರ್ಯಕರ್ತರು ಪ್ರತಿ ಮಗುವೂ ಘನತೆಯಿಂದ ಭಾಗವಹಿಸಲು ಅವಕಾಶ ಮಾಡಿಕೊಡಬೇಕೆಂದರು.

ಈ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವೂ ಈ ವರ್ಷರಾಜ್ಯದ ಎಲ್ಲಾ ಜಿಲ್ಲೆಗಳ ಪುನರ್ವಸತಿ ಕಾರ್ಯಕರ್ತರಿಗೂ ತರಬೇತಿ ನೀಡಲಿದೆ. ಅದರ ಆರಂಭವನ್ನು ಶಿರಾ ತಾಲೂಕಿನಿಂದ ಮಾಡಲಾಗಿದೆ ಎಂದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರ ಮಾತನಾಡಿ, ಸಂಕಷ್ಟದಲ್ಲಿನ ಮಕ್ಕಳ ಪುನರ್ವಸತಿ ಹಾಗೂ ಅವರ ರಕ್ಷಣೆಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಾಡುತ್ತದೆ. ಇಂತಹ ಮಕ್ಕಳನ್ನು ಗುರುತಿಸುವ ಅವರನ್ನು ತಲುಪುವ ಕೆಲಸ ಪುನರ್ವಸತಿ ಕಾರ್ಯಕರ್ತರು ಮಾಡುತ್ತಿದ್ದು ಮಕ್ಕಳ ರಕ್ಷಣಾ ಘಟಕದ ಬೆಂಬಲ ಪಡೆಯಬಹುದಾಗಿದೆ ಎಂದರು.

ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿ ಚಿದಾನಂದ್ ಮಾತನಾಡಿ, ಪುನರ್ವಸತಿ ಕಾರ್ಯಕರ್ತರು ಇಲಾಖೆ ಹಾಗೂ ವಿಕಲಚೇತನರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸೌಲಭ್ಯಗಳು ತಳಮಟ್ಟಕ್ಕೆ ತಲುಪಲು ಗಣನೀಯ ಕೊಡುಗೆ ನೀಡುತ್ತಾರೆ. ಅದರಲ್ಲೂ ಶಿರಾ ತಾಲೂಕಿನಲ್ಲಿ ಒಳ್ಳೆಯ ಸಂಘಟನೆ ಇದ್ದು ಮತ್ತಷ್ಟು ಕ್ರಿಯಾಶೀಲವಾಗಿ ಹಾಗೂ ಸಮುದಾಯವನ್ನು ಒಳಗೊಂಡು ತೊಡಗಿಸಿಕೊಂಡರೆ ಇತರೆ ಜಿಲ್ಲೆಗಳಿಗೆ ಮಾದರಿಯಾಗಲಿದೆ ಎಂದರು.

ಮೊಬಿಲಿಟಿ ಇಂಡಿಯಾ ಸಂಸ್ಥೆಯ ಆನಂದ್ ರವರು ತುಮಕೂರು ಜಿಲ್ಲೆಯಲ್ಲಿ ವಿಕಲಚೇತನರ ಏಳಿಗೆಗಾಗಿ ಸಂಸ್ಥೆ ಮಾಡುತ್ತಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು. ವಿಕಲಚೇತನರ ಗುರುತಿನ ಚೀಟಿ, ಅವರಿಗೆ ಇಲಾಖೆಗಳಿಂದ ಸೌಲಭ್ಯಗಳ ವಿತರಣೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಆಯೋಗ ಗಮನಿಸಬೇಕೆಂದರು.

ಕಾರ‍್ಯಕ್ರಮದಲ್ಲಿ ಶಿರಾ ತಾಲೂಕಿನ ಎಂ.ಆರ್.ಡಬ್ಲು ಚಿತ್ತಯ್ಯ, ಶಿಕ್ಷಣ ಇಲಾಖೆಯ ಸಮನ್ವಯ ಶಿಕ್ಷಣಾಧಿಕಾರಿ ದೊಡ್ಡಯ್ಯ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

PREV

Recommended Stories

ದಕ್ಷಿಣ ಭಾರತದ ಮೊದಲ ಆ್ಯಪಲ್ ಸ್ಟೋರ್ ಬೆಂಗಳೂರಲ್ಲಿ ಆರಂಭ
ಜೈಲಲ್ಲಿರುವ ಸಿಎಂ, ಸಚಿವರ ಆಗಬೇಕು. ಏಕೆ ಗೊತ್ತಾ?