ಹಿರಿಯೂರು: ತಾಲೂಕಿನ ಕಲ್ಲುವಳ್ಳಿ ಭಾಗಕ್ಕೆ ಶಾಶ್ವತ ನೀರಾವರಿ ಸೌಲಭ್ಯಕ್ಕೆ ಮೊದಲ ಆದ್ಯತೆ ಕಲ್ಪಿಸುವ ಮೂಲಕ ಈ ಭಾಗದ ಜನರ ನೀರಿನ ಬವಣೆಯನ್ನು ನೀಗಿಸಲಾಗುವುದು ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ ಭರವಸೆ ನೀಡಿದರು.
ಮುಧೋಳ ಕ್ಷೇತ್ರಕ್ಕೆ ನೀಡಿದ ಆದ್ಯತೆಯನ್ನು ಕಾರಜೋಳ ಜಿಲ್ಲೆಗೂ ನೀಡಲಿದ್ದು, ಸಮಗ್ರ ನೀರಾವರಿ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುವ ಕನಸು ಹೊಂದಿದ್ದಾರೆ. ಏ.26ರಂದು ನಡೆಯಲಿರುವ ಮತದಾನದಲ್ಲಿ ಕಾರಜೋಳ ಅವರಿಗೆ ನೀಡಿ ಅತ್ಯಧಿಕ ಮತಗಳಿಂದ ಜಯಶೀಲರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.
ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಸಚಿವರಾಗಿ ಕರ್ತವ್ಯ ನಿರ್ವಹಿಸುವ ಸಾಧ್ಯತೆ ಇದೆ. ಜೊತೆಗೆ ಜಿಲ್ಲೆಯ ಅಭಿವೃದ್ಧಿಗೆ ಸಾಕ್ಷಿಯಾಗಲಿದ್ದಾರೆ. ಸಮಯದ ಕೊರತೆಯಿಂದ ಗೋವಿಂದ ಕಾರಜೋಳ ಎಲ್ಲಾ ಹಳ್ಳಿಗಳಿಗೂ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ನಾನು ಭೇಟಿ ನೀಡಿದ ಎಲ್ಲ ಹಳ್ಳಿಗಳಲ್ಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕ್ಷೇತ್ರದ ಮತದಾರರು ಹೆಚ್ಚಿನ ಮತ ನೀಡಿ ನನ್ನ ತಂದೆಗೆ ಆಶೀರ್ವಾದ ಮಾಡಬೇಕು.ದಿಂಡಾವರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಇಲ್ಲಿನ ಸಚಿವರು ವಿಫಲವಾಗಿದ್ದಾರೆ. ತವರು ಕ್ಷೇತ್ರದಲ್ಲಿ ಸಚಿವರ ಕಾರಿಗೆ ಮುತ್ತಿಗೆ ಹಾಕಿ ಘೇರಾವ್ ಹಾಕಿಸಿಕೊಳ್ಳುವುದು ಎಂದರೆ ಏನರ್ಥ. ಮೊದಲು ಮತದಾರರ ಮನಸ್ಸು ಗೆಲ್ಲಬೇಕು ಎಂಬುದನ್ನು ಅವರು ಅರಿಯಬೇಕಿದೆ ಎಂದರು.
ಸುರೇಶ್, ಶಿವು, ಕರಿಯಣ್ಣ, ಕೃಷ್ಣಪ್ಪ, ಶಶಿ, ವಿನೋದ್ ಕುಮಾರ್, ಆದರ್ಶ ಯಾದವ್ ಸೇರಿದಂತೆ ಹಲವರು ಹಾಜರಿದ್ದರು.