ಸ್ಲಂ ಜನರ ಮೂಲಭೂತ ಹಕ್ಕುಗಳಿಗೆ ಆದ್ಯತೆ ನೀಡಬೇಕು: ಸಂಕನೂರ

KannadaprabhaNewsNetwork | Published : May 30, 2025 12:11 AM
ರಾಜ್ಯದ ಸ್ಲಂ ಜನರ ಮೂಲಭೂತ ಹಕ್ಕುಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೊದಲು ಆದ್ಯತೆ ನೀಡಬೇಕು ಎಂದು ವಿಪ ಸದಸ್ಯ ಎಸ್‌.ವಿ. ಸಂಕನೂರ ಹೇಳಿದರು.

ಗದಗ: ರಾಜ್ಯದ ಸ್ಲಂ ಜನರ ಮೂಲಭೂತ ಹಕ್ಕುಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೊದಲು ಆದ್ಯತೆ ನೀಡಬೇಕು ಎಂದು ವಿಪ ಸದಸ್ಯ ಎಸ್‌.ವಿ. ಸಂಕನೂರ ಹೇಳಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಸಾವಿತ್ರಿಬಾ ಪುಲೆ ಮಹಿಳಾ ಸಮಿತಿ, ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ನಡೆದ ವಿಭಾಗ ಮಟ್ಟದ ಸ್ಲಂ ಜನರ ಸಮಾವೇಶ ಹಾಗೂ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನ ಅವರು ಕೂಡಾ ಮನುಷ್ಯರು, ಸರ್ಕಾರಗಳು ನಾಗರಿಕ ಸಮಾಜದಲ್ಲಿ ಸ್ಲಂ ನಿವಾಸಿಗಳಿಗೆ ಸಂವಿಧಾನ ಬದ್ಧ ಹಕ್ಕುಗಳನ್ನು ನೀಡುವ ಮೂಲಕ ಸಮಾನವಾದ ಅವಕಾಶಗಳನ್ನು ದೊರಕಿಸಿ ಕೊಡುವ ವಾತಾವರಣ ನಿರ್ಮಾಣ ಮಾಡಬೇಕು. ಸ್ಲಂ ಜನರ ಪರವಾಗಿ ಮುಂಬರುವ ವಿಧಾನ ಪರಿಷತ್ ಅಧಿವೇಶನದಲ್ಲಿ ಹೋರಾಟ ನಡೆಸುತ್ತೇನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ರಾಜ್ಯ ಸಂಚಾಲಕ ಎ.ನರಸಿಹಮೂರ್ತಿ ಮಾತನಾಡಿ, ರಾಜ್ಯ ಸಮಿತಿಯಿಂದ ಸ್ಲಂ ಜನರ ಭೂಮಿ ಹಕ್ಕುಗಾಗಿ ನಿರಂತರ ಹೋರಾಟಗಳನ್ನು ನಡೆಸುತ್ತ ಬಂದಿದ್ದೇವೆ. ನಮ್ಮ ರಾಜ್ಯ ಸಮಿತಿಯ ನಿರಂತರ ಹೋರಾಟದ ಫಲವಾಗಿ ರಾಜ್ಯದ ಲಕ್ಷಾಂತರ ಕೊಳಗೇರಿ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿರುವ ಸಿದ್ದರಾಮಯ್ಯನವರ ಸರ್ಕಾರ ಹೊಸಪೇಟೆಯಲ್ಲಿ ನಡೆದ ತಮ್ಮ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ರಾಜ್ಯದ ಜನರಿಗೆ ಭೂಮಿ ಹಕ್ಕು 6ನೇ ಗ್ಯಾರಂಟಿಯನ್ನು ಘೋಷಣೆ ಮಾಡಿದೆ. ಈ 6ನೇ ಗ್ಯಾರಂಟಿಯ ಮೂಲಕ ನಮ್ಮ ರಾಜ್ಯದ ಸ್ಲಂ ನಿವಾಸಿಗಳಿಗೆ ಭೂಮಿ ಹಕ್ಕುನ್ನು ಖಾತ್ರಿಗೊಳಿಸಲು ಒತ್ತಾಯಿಸಿದರು.

ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್. ಮಾನ್ವಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಕಲಾವಿದರನ್ನು ನಮ್ಮ ವೇದಿಕೆಯ ಮುಖಾಂತರ ಹೊರ ಜಗತ್ತಿಗೆ ಪರಿಚಯಿಸುವ ಕೆಲಸ ಈ ಸ್ಲಂ ಹಬ್ಬ ಕಾರ್ಯಕ್ರಮಗಳ ಮೂಲಕ ಮಾಡಲಾಗುತ್ತಿದೆ. ಕಳೆದ 15 ವರ್ಷಗಳಿಂದ ಗದಗ-ಬೆಟಗೇರಿ ನಗರದಲ್ಲಿ ಸ್ಲಂ ಪ್ರದೇಶದ ಕುಟುಂಬಗಳಿಗೆ ವಸತಿ, ಭೂಮಿ ಹಕ್ಕು ಮತ್ತು ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿ ನಿರಂತರ ಹೋರಾಟಗಳನ್ನು ನಡೆಸುತ್ತ ಬಂದಿದ್ದೇವೆ. ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ಸಹಕಾರದಲ್ಲಿ ವಿಭಾಗ ಮಟ್ಟದಲ್ಲಿ ಬರುವ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೊಳಗೇರಿಗಳ ಸಾಮಾಜಿಕ ನ್ಯಾಯ ಮತ್ತು ಸಮಾನ ಹಕ್ಕುಗಳಿಗೆ ನಿರಂತರ ಹೋರಾಟಗಳನ್ನು ನಡೆಸುವ ಮುಖಾಂತರ ಕೊಳಗೇರಿ ಪ್ರದೇಶದ ಜನರು ಘನತೆಯಿಂದ ಬದುಕು ನಡೆಸಲು ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಈ ವೇಳೆ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕನ್ನಡಪ್ರಭ ಪತ್ರಿಕೆಯ ವರದಿಗಾರ ಶಿವಕುಮಾರ ಕುಷ್ಟಗಿ, ದಲಿತ ಸಂಘರ್ಷ ಸಮಿತಿ ಸಂಚಾಲಕ ವೆಂಕಟೇಶಯ್ಯ, ಪ್ರಗತಿಪರ ಚಿಂತಕ ಪ್ರೊ.ಸತೀಶ ಪಾಸಿ, ಬಸವರಾಜ ಪೂಜಾರ, ಶೋಭಾ ಕಮತರ, ವೆಂಕಮ್ಮ, ಅಶೋಕ ಕುಡತಿನ್ನಿ, ಅಶೋಕ ಕುಸಬಿ, ಪರವೀನಬಾನು ಹವಾಲ್ದಾರ, ಉಮರಫಾರಖ್‌ ಹುಬ್ಬಳ್ಳಿ, ಅನ್ವರ ಶಿರಹಟ್ಟಿ, ಎಂ.ಪಿ.ಮುಳಗುಂದ, ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ಶರಣಪ್ಪ ಸೂಡಿ, ಪುಷ್ಪಾ ಬಿಜಾಪೂರ, ಮೆಹಬೂಬಸಾಬ ಬಳ್ಳಾರಿ, ಮುನ್ನಾ ಅಗಡಿ, ಖಾಜಾಸಾಬ ಇಸ್ಮಾಯಿಲನವರ, ಸಲೀಂ ಹರಿಹರ, ಆಶಾ ಜೂಲಗಡ, ಲಕ್ಷ್ಮಣ ರಾಮನಗರ, ಮೆಹರುನಿಸಾ ಡಂಬಳ, ಮಕ್ತುಮಸಾಬ ಮುಲ್ಲಾನವರ, ಮಹ್ಮದಸಾಬ ಗಡಾದ, ಮಂಜುನಾಥ ಶ್ರೀಗಿರಿ, ಸಕ್ರುಬಾಯಿ ಗೋಸಾವಿ ಹಾಗೂ ಸ್ಲಂ ನಿವಾಸಿಗಳು ಇದ್ದರು. ಎಂ.ಬಿ. ನದಾಫ ನಿರೂಪಿಸಿ, ವಂದಿಸಿದರು.