ಕಸ ಬೇರ್ಪಡಿಸಿದರೆ ಸಮಸ್ಯೆ ಪರಿಹಾರ: ಶಾಸಕ ಜಿ.ಎಚ್‌.ಶ್ರೀನಿವಾಸ್

KannadaprabhaNewsNetwork | Published : May 27, 2025 11:50 PM
ಕಸದ್ದೆ ಬಹಳ ದೊಡ್ಡ ಸಮಸ್ಯೆ, ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸಿ ಕೊಡಿ ಆಗ ಸಮಸ್ಯೆ ಪರಿಹಾರ ಆಗುತ್ತದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಪ್ರತಿ ಮನೆಗೆ ಕಸದ ಬುಟ್ಟಿ ವಿತರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ತರೀಕೆರೆ

ಕಸದ್ದೆ ಬಹಳ ದೊಡ್ಡ ಸಮಸ್ಯೆ, ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸಿ ಕೊಡಿ ಆಗ ಸಮಸ್ಯೆ ಪರಿಹಾರ ಆಗುತ್ತದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಬೆಂಗಳೂರು ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾಡಳಿತ ಚಿಕ್ಕಮಗಳೂರು, ಪುರಸಭೆ ತರೀಕೆರೆಯಿಂದ ಪಟ್ಟಣದ ಶ್ರೀ ರೇವಣಸಿದ್ದೇಶ್ವರ ಸರ್ಕಲ್‌ನಲ್ಲಿ ಸ್ವಚ್ಚ ಭಾರತ (ನಗರ)1.0 ಯೋಜನೆಯಡಿ ಮನೆ ಮನೆ ತ್ಯಾಜ್ಯ ಸಂಗ್ರಹಿಸಲು ಪ್ರತಿ ಮನಗೆ ಕಸದ ಬುಟ್ಟಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಊರು ನಮ್ಮದೇ ಎಂದು ತಿಳಿದು ಕಸವನ್ನು ಚರಂಡಿಗೆ ಹಾಕಬೇಡಿ, ಕಸ ವಿಂಗಡಿಸಿದರೆ ಅರ್ಧ ಕೆಲಸ ಮುಗಿದ ಹಾಗೆ, ಮನೆ ಚರಂಡಿ ಸ್ವಚ್ಛವಾಗಿರುತ್ತದೆ. ಸಂಗ್ರಹಿಸಿದ ಕಸವನ್ನು ಗೊಬ್ಬರವನ್ನಾಗಿ ಮಾರ್ಪಡಿಸಲಾಗುತ್ತಿದೆ. ಜನರು ಸಹಕಾರ ನೀಡಿದರೆ ಅಭಿವೃದ್ಧಿ ಕಾರ್ಯ ಆಗುತ್ತದೆ ಎಂದು ಹೇಳಿದರು.

60 ಕೋಟಿ ರು.ಗಳಲ್ಲಿ ಪಟ್ಟಣದ ಬಿ.ಎಚ್.ರಸ್ತೆ ಅಭಿವೃದ್ಧಿ ಕಾರ್ಯ ನಿರ್ವಹಿಸಲಾಗುತ್ತಿದೆ. ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಪೈಪ್‌ಲೈನ್‌ಗಳನ್ನು ಜೋಡಿಸಲಾಗುತ್ತದೆ. ಪ್ರತಿ ಮನೆಗೂ ಮೀಟರ್‌ಗಳನ್ನು ಅಳವಡಿಸಲಾಗುವುದು, ಇದರಿಂದ ಎಷ್ಟು ನೀರು ಖರ್ಚಾಗುತ್ತದೋ ಅಷ್ಟು ಮಾತ್ರವೇ ನೀರಿನ ಕಂದಾಯ ಬರುತ್ತದೆ. ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಹನಿ ಹನಿ ನೀರು ಕೂಡ ಮುಖ್ಯ, ಆದುದರಿಂದ ನಲ್ಲಿಗಳಿಗೆ ಮೀಟರ್‌ಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಪುರಸಭೆ ಅದ್ಯಕ್ಷ ವಸಂತ ಕುಮಾರ್ ಮಾತನಾಡಿ, ಒಣ ಹಾಗೂ ಹಸಿ ಕಸ ಬೇರ್ಪಡಿಸಿ ಕೊಡಬೇಕು ಎಂದು ಹೇಳಿದರು.

ಪುರಸಭೆ ಪರಿಸರ ಅಭಿಯಂತರ ತಾಹಿರಾ ತಸ್ನೀಮ್ ಮಾತನಾಡಿ, ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಿ ನೀಡಬೇಕು. ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ವಿಂಗಡಿಸಿ ಪುರಸಭೆ ಕಸ ಸಂಗ್ರಹಣ ವಾಹನಗಳಿಗೆ ನೀಡಬೇಕೆಂದು ಮನವಿ ಮಾಡಿದರು.

ಪುರಸಭೆ ಉಪಾಧ್ಯಕ್ಷೆ ಪಾರ್ವತಮ್ಮ, ಪುರಸಭಾ ಸದಸ್ಯರಾದ ಗಿರಿಜಾ ಪ್ರಕಾಶ್ ವರ್ಮ, ದಿವ್ಯ, ಪುರಸಭೆ ನಾಮಿನಿ ಸದಸ್ಯ ಆದಿಲ್ ಪಾಶ ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮತ್ತಿತರರು ಮಾತನಾಡಿದರು. ಪುರಸಭೆ ಸದಸ್ಯರಾದ ಕುಮಾರಪ್ಪ, ರಿಹಾನ ಪರ್ವಿನ್, ಯಶೋದಮ್ಮ ಮತ್ತಿತರರು ಭಾಗವಹಿಸಿದ್ದರು.