ಸವಣೂರು: ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ತಾಲೂಕಿನ ಕಳಲಕೊಂಡ ಗ್ರಾಮದ ಹೊರ ವಲಯದಲ್ಲಿ ನಿರ್ಮಾಣಕ್ಕೆ ಮುಂದಾಗಿರುವ ಕೊಳಚೆ ನೀರು ಸಂಸ್ಕರಣಾ ಘಟಕಕ್ಕೆ ಕೇಂದ್ರ ಸರ್ಕಾರ 4.43 ಕೋಟಿ, 2.92 ಕೋಟಿ ಹಾಗೂ 1.51 ಕೋಟಿ ಅನುದಾನ ಮೀಸಲು ಇರಿಸಲಾಗಿರುವ ಯೋಜನೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಆಹ್ವಾನ ನೀಡದೇ ಕೇಂದ್ರ ಸರ್ಕಾರದ ಅನುದಾನವನ್ನು ತಮ್ಮ ಅನುದಾನ ಎಂಬಂತೆ ಬಿಂಬಿಸಿ ಯೋಜನೆಗೆ ಚಾಲನೆ ನೀಡುತ್ತಿರುವುದನ್ನು ಬಿಜೆಪಿ ಕಾರ್ಯಕರ್ತರು ವಿರೋಧಿಸಿ ಪ್ರತಿಭಟನೆ ಕೈಗೊಂಡರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಮಂಡಳ ಅಧ್ಯಕ್ಷ ಶಿವಪುತ್ರಪ್ಪ ಕಲಕೋಟಿ, ಗಂಗಾಧರ ಬಾಣದ, ಪದಾಧಿಕಾರಿಗಳಾದ ನಿಂಗಪ್ಪ ಡವಗಿ, ಪ್ರವೀಣ ಬಾಲೇಹೊಸೂರ, ಬಸನಗೌಡ ಪಾಟೀಲ, ಸಮ್ಮೀತ ಕೆಮ್ಮಣಕೇರಿ, ಮಹೇಶ ಮುದಗಲ್, ಸುಮಂತ ಕಣವಿ, ಗಜಾನನ ರಾಶಿನಕರ, ಮಹೇಶ ಜಡಿ, ದುರ್ಗಪ್ಪ ಗಡೆದ, ಶ್ರೀಕಾಂತ ಲಕ್ಷ್ಮೇಶ್ವರ, ಸೋಮನಗೌಡ ಪಾಟೀಲ, ಹನುಮಂತಪ್ಪ ದೊಡ್ಡಮನಿ, ವಿನಾಯಕ ಕುಲಕರ್ಣಿ, ಮಹೇಶ ತಳ್ಳಿಹಳ್ಳಿ ಸೇರಿದಂತೆ ಸುಮಾರು 30ಕ್ಕೂ ಹೆಚ್ಚಿನ ಕಾರ್ಯಕರ್ತರನ್ನು ಬಂಧಿಸಿ, ಶಿಗ್ಗಾಂವಿಗೆ ಕರೆದೊಯ್ದು ಬಿಡುಗಡೆಗೊಳಿಸಲಾಯಿತು.
ಕಳಲಕೊಂಡ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಶನಿವಾರ ಕೊಳಚೆ ನೀರು ಸಂಸ್ಕರಣ ಘಟಕ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ಕಾರ್ಯಕ್ರಮ ಜರುಗಿದ್ದು, ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಆಹ್ವಾನಿಸದೆ ಕಾರ್ಯಕ್ರಮ ಮಾಡುತ್ತಿರುವುದು ಶಿಷ್ಟಾಚಾರ ಉಲ್ಲಂಘನೆ ಎಂದು ಬಿಜೆಪಿ ಕಾರ್ಯಕರ್ತರು ಶಾಂತಿಯುತ ಪ್ರತಿಭಟನೆಗೆ ಕರೆ ಕೊಟ್ಟಿದ್ದರು.ಭೂಮಿಪೂಜೆ: ಇದನ್ನು ಸಹಿಸದ ಶಿಗ್ಗಾಂವಿ- ಸವಣೂರಿನ ಶಾಸಕರು ಪೊಲೀಸರನ್ನು ಹಾಗೂ ಅಧಿಕಾರಿಗಳನ್ನು ಬಳಸಿಕೊಂಡು ಶಾಂತಯುತವಾಗಿ ಪ್ರತಿಭಟನೆ ಮಾಡುತ್ತಿದ್ದವರನ್ನು ಏಕಾ ಏಕಿ ಬಂಧಿಸಿ ಶಿಗ್ಗಾಂವಿ ಪಟ್ಟಣದ ಪೊಲೀಸ್ ಠಾಣೆಗೆ ಕರೆ ತಂದಿರುವುದು ಅಧಿಕಾರದ ದುರ್ಬಳಕೆಯಾಗಿದೆ. ಶಾಸಕರೇ ಅಧಿಕಾರದಲ್ಲಿ ಶಾಶ್ವತವಾಗಿ ಇರುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ.ಶಾಸಕರ ಹಾಗೂ ಅಧಿಕಾರಿಗಳ ಈ ಅನ್ಯಾಯದ ಕ್ರಮದ ವಿರುದ್ಧ ಬಿಜೆಪಿ ಸದಾ ಹೋರಾಡುತ್ತದೆ. ಇಂತಹ ಬೆದರಿಕೆಗಳಿಗೆ ಬಿಜೆಪಿ ಕಾರ್ಯಕರ್ತರು ಬಗ್ಗುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟ ಪಡಿಸುತ್ತಿದ್ದೇನೆ ಎಂದು ಬಿಜೆಪಿ ಮುಖಂಡ ಭರತ್ ಬಸವರಾಜ ಬೊಮ್ಮಾಯಿ ಹೇಳಿದರು.