ಹುಬ್ಬಳ್ಳಿ:
ನೇರ ನೇಮಕಾತಿ, ನೇರ ವೇತನ ಪಾವತಿ ಸೇರಿದಂತೆ ಮತ್ತಿತರರ ಬೇಡಿಕೆ ಮುಂದಿಟ್ಟುಕೊಂಡು 10 ದಿನಗಳಿಂದ ನಡೆಸುತ್ತಿದ್ದ ಧರಣಿಯನ್ನು ಶಾಸಕ, ಮೇಯರ್ಗಳ ಭರವಸೆ ಮೇರೆಗೆ ಪೌರಕಾರ್ಮಿಕರು ಹಿಂಪಡೆದಿದ್ದಾರೆ.ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ರಾಮಣ್ಣ ಬಡಿಗೇರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದಕ್ಕೆ ಒಪ್ಪಿ ಪೌರಕಾರ್ಮಿಕರು ಪ್ರತಿಭಟನೆ ಹಿಂಪಡೆದರು.
ನೇರ ವೇತನ ಪಾವತಿಯಡಿ 799 ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ನೇರ ನೇಮಕಾತಿಯಲ್ಲಿ ಖಾಲಿಯಿರುವ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಿಕೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.ಮನವಿ ಸ್ವೀಕರಿಸಿದ ಶಾಸಕ ಟೆಂಗಿನಕಾಯಿ, ನಿಮ್ಮ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸಲು ಸಮಯಾವಕಾಶ ಕೇಳಲಾಗಿತ್ತು. ಆದರೆ ಅವಕಾಶ ಸಿಗಲಿಲ್ಲ. ಈಗ ನೇರ ವೇತನದಡಿ ನೇಮಿಸಿಕೊಳ್ಳಲು ಬೇಕಾದ ಅನುಮೋದನೆ ನೀಡುವಂತೆ ಕೋರಿ ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆಯುತ್ತೇನೆ. ಆ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಇನ್ನು ನೇರ ನೇಮಕಾತಿಯಡಿ ಬಾಕಿಯಿರುವ ಪ್ರಕ್ರಿಯೆ ಪೂರ್ಣಗೊಳಿಸಲು ಮೇಯರ್ ಹಾಗೂ ಆಯುಕ್ತರಿಗೆ ತಿಳಿಸಲಾಗುವುದು. ನಿಮ್ಮೆಲ್ಲ ಬೇಡಿಕೆ ಈಡೇರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೆ ಪೌರಕಾರ್ಮಿಕರು ಒಪ್ಪಿಕೊಂಡರು. ಬಳಿಕ ಶಾಸಕರು ನೀಡಿದ ಎಳನೀರನ್ನು ಸೇವಿಸುವ ಮೂಲಕ ಧರಣಿ ಹಿಂಪಡೆದರು. ಇದಕ್ಕೂ ಮುನ್ನ ಶಾಸಕ ಪ್ರಸಾದ ಅಬ್ಬಯ್ಯ ಅವರೇ ಪೌರಕಾರ್ಮಿಕರ ಸಮಸ್ಯೆಗೆ ಕಾರಣ ಎಂದು ಆರೋಪಿ ಪ್ರತಿಕೃತಿ ದಹಿಸಿದರು.ಈ ವೇಳೆ ಪಾಲಿಕೆ ಉಪಮೇಯರ್ ದುರ್ಗಮ್ಮ ಬಿಜವಾಡ, ಮಾಜಿ ಮೇಯರ್ ವೀಣಾ ಬರದ್ವಾಡ, ಪಾಲಿಕೆ ಸಭಾನಾಯಕ ವೀರಣ್ಣ ಸವಡಿ, ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ರಾಜಣ್ಣ ಕೊರವಿ, ಬೀರಪ್ಪ ಖಂಡೇಕರ್, ಸಂತೋಷ ಚವ್ಹಾಣ, ರೂಪಾ ಶೆಟ್ಟಿ, ಮಹಾದೇವಪ್ಪ ನರಗುಂದ, ಸಂಘದ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ, ಹೊನ್ನಪ್ಪ ದೇವಗೇರಿ, ನಿಂಗಪ್ಪ ಮೊರಬದ, ಬಸಪ್ಪ ಮಾದರ, ಗಾಳೆಪ್ಪ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ಸೋಮು ಮೊರಬದ, ಶರಣಪ್ಪ ಅಮರಾವತಿ ಸೇರಿದಂತೆ ಹಲವರಿದ್ದರು.