ಹಾವೇರಿ: ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರಿಲ್ಲ. ಕಾಂಗ್ರೆಸಿಗರು ಮೊದಲು ಬಜೆಟ್ ಪೂರ್ಣ ಪಾಠ ಓದಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದ ಬಜೆಟ್ನಲ್ಲಿ ಯಾವ ಇಲಾಖೆಗೆ ಎಷ್ಟು ದುಡ್ಡು ಬಂದಿದೆ ಎಂದು ಕಾಂಗ್ರೆಸ್ಸಿನವರು ಮೊದಲು ಪೂರ್ಣ ಬಜೆಟ್ ಓದಲಿ. ಅದೇ ಅಕೌಂಟ್ಗೆ ಹಿಂದೆ ಯುಪಿಎ ಸರ್ಕಾರ ಇದ್ದಾಗ ಎಷ್ಟು ಹಣ ಬಂದಿತ್ತು ಎಂಬುದನ್ನೂ ನೋಡಲಿ. ರಾಜ್ಯಕ್ಕೆ ಕೇಂದ್ರದಿಂದ ಅನುದಾನವೇ ಬಂದಿಲ್ಲ ಎಂದು ಕಾಂಗ್ರೆಸ್ಸಿನವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಎಂದರು ಕಿಡಿಕಾರಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ₹ 5000 ಕೋಟಿ ಕೊಡಬೇಕಿದೆ. ಕೇಂದ್ರ ಸಚಿವರನ್ನು ಭೇಟಿ ಮಾಡಿ ಅದನ್ನು ಕೇಳಿದ್ದೇವೆ. ಅವರು ಹಣಕಾಸು ಇಲಾಖೆ ಅನುಮತಿ ಪಡೆದು ನೀಡುವುದಾಗಿ ತಿಳಿಸಿದ್ದಾರೆ. ಪ್ರಯತ್ನ ಮಾಡಿದರೆ ಕೇಂದ್ರದಿಂದ ಹಣ ಬರುತ್ತದೆ. ಆದರೆ, ಕಾಂಗ್ರೆಸ್ಸಿನವರು ಅಪಾದನೆ ಮಾಡಿಕೊಂಡು ಕೂತಿದ್ದಾರೆ ಎಂದರು.ಬಿಜೆಪಿಯವರು ಮನೆ ಮುರುಕರು ಎಂಬ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಅವರು, ಒಂದೂವರೆ ವರ್ಷದಲ್ಲಿ ಮನೆ ಮುರುಕರು ಯಾರು? ಎಂದು ಜನಕ್ಕೆ ಗೊತ್ತಾಗಿದೆ. ಮನೆಮುರುಕರು ಯಾರು ಅಂತ ಜನ ತೀರ್ಮಾನ ಮಾಡುತ್ತಾರೆ. ಜನ ಸರ್ಟಿಫಿಕೆಟ್ ಕೊಡುತ್ತಾರೆ ಎಂದು ಹೇಳಿದರು.