)
ಕೆಂದಟ್ಟಿ ಗೊಲ್ಲಹಳ್ಳಿಯಲ್ಲಿ ೪.೧೫ ಎಕರೆ ಜಮೀನು ಕಬ್ಜ । 12 ಜನರ ಮೇಲೆ ಕೇಸು
ತಾಲೂಕಿನ ವಕ್ಕಲೇರಿ ಹೋಬಳಿ ಕೆಂದಟ್ಟಿ ಗೊಲ್ಲಹಳ್ಳಿ ಸರ್ವೇ ಸಂಖ್ಯೆ ೩೧ರಲ್ಲಿನ ೪.೧೫ ಎಕರೆ ಜಮೀನನನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡಿದ ಆರೋಪದ ಮೇಲೆ ೧೨ ಜನರ ಮೇಲೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮ್ಮ ಜಮೀನನ್ನು ಕಬಳಿಸಿ ನಕಲಿ ಕ್ರಯ ಪತ್ರ ಸೃಷ್ಟಿಸಿ ಕೋಲಾರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಲಾಗಿದೆ, ಅದರ ಮೇಲೆ ಬ್ಯಾಂಕ್ ಸಾಲ ಪಡೆಯಲಾಗಿದೆ ಎಂದು ಬೆಂಗಳೂರಿನ ಕಲಾಸಿಪಾಳ್ಯದ ಮೆಹಬೂಬ್ ಪಾಷಾ (೫೫) ದೂರು ನೀಡಿದ್ದರು.ಇದು ತನ್ನ ತಂದೆ ಅನ್ವರ್ ಬಿನ್ ಮಹಮ್ಮದ್ ಗೌಸ್ ಖರೀದಿಸಿದ ಜಮೀನಾಗಿದ್ದು, ಅವರು ೨೦೧೨ರಲ್ಲಿ ಮೃತರಾದರು. ಪೌತಿ ಖಾತೆ ಮಾಡಿಸಲು ಈಚೆಗೆ ಪಹಣಿ ಪರಿಶೀಲಿಸಿದಾಗ ಜಿ.ರಮೇಶ್ರಿಗೆ ಖಾತೆ ಆಗಿರುವುದು ಕಂಡುಬಂದಿದೆ. ಕ್ರಯಪತ್ರದ ದೃಢೀಕೃತ ಪ್ರತಿ ಕೋಲಾರ ಉಪನೋಂದಣಾಧಿಕಾರಿ ಕಚೇರಿಯಿಂದ ಪಡೆದು ಪರಿಶೀಲಿಸಿದಾಗ ಮಾಸ್ತಿ ಗ್ರಾಮದ ನಕಲಿ ಅನ್ವರ್ ಖಾನ್ ಬಿನ್ ಮಹಮ್ಮದ್ ಗೌಸ್ ಸಾಬಿರಿಂದ ಜಿ.ರಮೇಶ್, ಎ.ವಿ.ರವಿ, ಮಹಮ್ಮದ್ ಆರೀಫ್, ಮಂಜುನಾಥ್ ಕೆ., ಮಂಜುನಾಥ್.ಪಿರೊಂದಿಗೆ ಸೇರಿ ಈ ಕೃತ್ಯ ಎಸಗಲಾಗಿದೆ.
ಜಿ. ರಮೇಶ್ ಜಮೀನನ್ನು ಬೆಂಗಳೂರಿನ ಸಂಜಯನಗರದ ಚೌಡೇಗೌಡರ ಪುತ್ರ ಸಿ.ಸೊಣ್ಣೇಗೌಡರಿಗೆ ಕಳೆದ ತಿಂಗಳು ೧೮ ರಂದು ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ನಾನು ಬೆಂಗಳೂರಿನಲ್ಲಿ ಇದ್ದದ್ದನ್ನು ದುರುಪಯೋಗಪಡಿಸಿಕೊಂಡು ಮೋಸ ಮಾಡಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಂಡು ಕೂಡಲೇ ಅವರನ್ನು ಬಂಧಿಸಬೇಕು ಎಂದು ದೂರಿನಲ್ಲಿ ಮೆಹಬೂಬ್ ಪಾಷಾ ಒತ್ತಾಯಿಸಿ ನಮಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.