ತೆಂಗು ಅಭಿವೃದ್ಧಿ ಸಾಲ ಯೋಜನೆ ಜಾರಿಗೆ ಚಿಂತನೆ: ಯರೇಹಳ್ಳಿ ಮಂಜು

KannadaprabhaNewsNetwork |  
Published : Sep 20, 2026, 02:15 AM IST
19ಕೆಆರ್ ಎಂಎನ್ 2.ಜೆಪಿಜಿಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೂಟಗಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶನಿವಾರ ನಡೆದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ಮಾತನಾಡಿದರು. | Kannada Prabha

ಸಾರಾಂಶ

ರೈತರಿಗೆ ಬಿಡಿಸಿಸಿ ಬ್ಯಾಂಕ್ ವತಿಯಿಂದ ಇದೇ ಮೊದಲ ಬಾರಿಗೆ ಶೇ.3ರಷ್ಟು ಬಡ್ಡಿ ದರದಲ್ಲಿ 15 ಲಕ್ಷ ರು.ಗಳವರೆಗೆ ತೆಂಗು ಅಭಿವೃದ್ಧಿ ಸಾಲ ವಿತರಿಸುವ ಯೋಜನೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ಹೇಳಿದರು.

ಕನ್ನಡಪ್ರಭ ವಾರ್ತೆ ರಾಮನಗರ

ರೈತರಿಗೆ ಬಿಡಿಸಿಸಿ ಬ್ಯಾಂಕ್ ವತಿಯಿಂದ ಇದೇ ಮೊದಲ ಬಾರಿಗೆ ಶೇ.3ರಷ್ಟು ಬಡ್ಡಿ ದರದಲ್ಲಿ 15 ಲಕ್ಷ ರು.ಗಳವರೆಗೆ ತೆಂಗು ಅಭಿವೃದ್ಧಿ ಸಾಲ ವಿತರಿಸುವ ಯೋಜನೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ಹೇಳಿದರು.

ಮಾಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೂಟಗಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸಹಕಾರ ಸಂಘಗಳು ಗ್ರಾಮೀಣ ರೈತರ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಕೆಸಿಸಿ ಬೆಳೆ ಸಾಲ, ಆಭರಣ ಸಾಲ ವಿತರಿಸುತ್ತಿದ್ದು, ತೆಂಗು ಬೆಳೆಗಾರರ ಆರ್ಥಿಕ ಸುಧಾರಣೆ ಮತ್ತು ತೋಟಗಳ ಪುನಃಶ್ಚೇತನಕ್ಕಾಗಿ ತೆಂಗು ಅಭಿವೃದ್ಧಿ ವಿಶೇಷ ಸಾಲ ಯೋಜನೆ ಜಾರಿಗೆ ತರಲು ಉದ್ದೇಶಿಸಿದೆ ಎಂದು ಹೇಳಿದರು.

ಗ್ರಾಮ ಮಟ್ಟದಲ್ಲಿ ಸ್ತ್ರೀ ಶಕ್ತಿ ಸಂಘಗಳು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಸಂಘಗಳ ಜೊತೆ ಉತ್ತಮ‌ ವಹಿವಾಟು ನಡೆಸುತ್ತಿವೆ. ಸಂಘಗಳ ಆಡಿಟ್ ವರದಿ ಸುಸ್ಥಿತಿಯಲ್ಲಿದ್ದರೆ ಶೂನ್ಯ ಬಡ್ಡಿ ದರದಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ಸಾಲ ವಿತರಿಸಲಾಗುತ್ತಿದೆ. ರಾಜ್ಯ ಸರ್ಕಾರ ಸಹಕಾರ ಸಂಘಗಳಲ್ಲಿನ ಸಾಲಮನ್ನಾ ಘೋಷಿಸಿದರೆ ಅದರ ಸದುಪಯೋಗವನ್ನು ಮಹಿಳೆಯರು ಹೆಚ್ಚು ಪಡೆದುಕೊಳ್ಳುತ್ತಾರೆ. ಆದ್ದರಿಂದ ಖಾಸಗಿ ಮೈಕ್ರೋ ಫೈನಾನ್ಸ್‌ಗಳತ್ತ ಮುಖ ಮಾಡದೆ ಸಹಕಾರ ಸಂಘಗಳಲ್ಲಿಯೇ ಆರ್ಥಿಕ ವಹಿವಾಟು ನಡೆಸುವಂತೆ ಕಿವಿಮಾತು ಹೇಳಿದರು.

ಕೂಟಗಲ್ ಪಿಎಸಿಎಂಎಸ್ ನಲ್ಲಿ ಸುಸ್ತಿ ಸಾಲ ಹೆಚ್ಚು ಮರುಪಾವತಿ ಆಗಿರುವುದು ವಿಶೇಷವಾಗಿದೆ. ಇದೀಗ ಸಭೆಯಲ್ಲಿ ಸಂಘದಿಂದ ಜನತಾ ಬಜಾರ್ ಮಳಿಗೆ ತೆರೆಯಲು ಪ್ರಸ್ತಾವನೆ ಸಲ್ಲಿಸಿದ್ದು, ಈ ಬಗ್ಗೆ ಡಿಸಿಸಿ ಬ್ಯಾಂಕ್ ಆಡಳಿತ‌ ಮಂಡಳಿಯಲ್ಲಿ ಚರ್ಚಿಸುತ್ತೇನೆ. ಸಂಘದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಯರೇಹಳ್ಳಿ ಮಂಜು ಭರವಸೆ ನೀಡಿದರು.

3.19ಕೋಟಿ ಕೆಸಿಸಿ ಸಾಲ ವಿತರಣೆ:

ಸಂಘದ ಅಧ್ಯಕ್ಷ ಎ.ಬಿ.ಗಂಗಾಧರ್ ಗೌಡ ಮಾತನಾಡಿ, ಸಂಘ 3.9 ಕೋಟಿ ಕೆಸಿಸಿ‌ ಸಾಲ, 23 ಲಕ್ಷ ರು. ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ, ಸಂಘದಲ್ಲಿ 12 ಲಕ್ಷ ರುಪಾಯಿ ಠೇವಣಿ, ಸಂಘದ ಖರ್ಚು ವೆಚ್ಚಗಳನ್ನು ಕಳೆದು ಸಂಘ 28 ಸಾವಿರ ರು. ಲಾಭ ಪಡೆದಿದೆ. ಸಂಘದ ಸದಸ್ಯರು, ನೌಕರರ ವರ್ಗದವರು ಸಮನ್ವಯದಿಂದ ಕೆಲಸ ಮಾಡುತ್ತಿರುವ ಕಾರಣ ಸಂಘ ಉತ್ತಮ ಆರ್ಥಿಕ ವಹಿವಾಟು ನಡೆಸಿ ರೈತರು ಮತ್ತು ವ್ಯಾಪಾರಸ್ಥರಿಗೆ ಅನುಕೂಲ ಮಾಡಿದೆ. ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿಸಿ, ಉತ್ತಮ ವ್ಯವಹಾರ ನಡೆಸುವಂತೆ ಸದಸ್ಯರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸಿ.ರಾಮಯ್ಯ, ನಿರ್ದೇಶಕರಾದ ಲಕ್ಷ್ಮೀನಾರಾಯಣ್, ರಾಜಣ್ಣ, ಕುಮಾರ್, ನಾಗರಾಜು, ಸಾಕಮ್ಮ, ಜಯರಾಮಯ್ಯ, ಚಿಕ್ಕೀರಯ್ಯ, ಪುಟ್ಟಾಚಾರಿ, ಚಿಕ್ಕಮ್ಮಣ್ಣಿ ಸಂಘದ ಸಿಇಒಒ ಕೆ.ಸಿ.ತನುಜಾ, ಆಂತರಿಕ ಲೆಕ್ಕ ಪರಿಶೋಧಕ ರೇಣುಕಪ್ಪ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಡಗಾ ಮಠದ ಶ್ರೀ ಸಿದ್ಧರಾಮೇಶ್ವರ 98ನೇ ಜನ್ಮೋತ್ಸವ
ಮುನ್ನೊಳಿ ಪಂಚಾಯಿತಿಯಲ್ಲಿ ಪ್ರಜಾಸೇವೆಗೆ ಚಾಲನೆ