ಪರಿಸರ ಕಾಪಾಡಿ, ಸೇವೆ ಮಾಡಿ: ಪ್ರೊ.ಎಸ್. ಶಿವರಾಜಪ್ಪ ಕರೆ

KannadaprabhaNewsNetwork | Published : Jun 27, 2025 12:54 AM

ಎನ್ಎಸ್ಎಸ್‌ನಲ್ಲಿ ಜಾತಿ, ವರ್ಗ, ವರ್ಣ, ಸ್ತ್ರೀ, ಪುರುಷ ಎಂಬ ತಾರತಮ್ಯ ಇಲ್ಲ. ಯುವಜನತೆ ತಿಳಿದುಕೊಂಡು ಬೆಳೆಯಬೇಕು. ಸಾಧಕರಿಂದ ಪ್ರೇರಣೆ ಪಡೆಯಬೇಕು ಯುವಜನತೆ ಯಾವುದೇ ಕಾರಣಕ್ಕೂ ದಿಕ್ಕು ತಪ್ಪಬಾರದು. ಗಾಂಧಿ, ಬಸವಣ್ಣ, ಬುದ್ಧ, ಅಂಬೇಡ್ಕರ್‌, ಕುವೆಂಪು, ಶಂಕರಾಚಾರ್ಯ ಮೊದಲಾದ ಮಹಾಪುರಷರ ಆದರ್ಶ ಪಾಲಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರತಿಯೊಬ್ಬರೂ ಪರಿಸರ ಕಾಪಾಡಬೇಕು ಹಾಗೂ ಸೇವೆ ಮಾಡಬೇಕು ಎಂದು ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಕರೆ ನೀಡಿದರು.

ನಗರದ ಖಿಲ್ಲೆ ಮೊಹಲ್ಲಾದ ಶ್ರೀ ನಟರಾಜ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ, ಎನ್ಎಸ್ಎಸ್‌ ದೈನಂದಿನ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕಾಡಿದ್ದರೆ ನಾಡು. ಕಾಡು ನಾಶ ಮಾಡಿದರೆ ವನ್ಯಪ್ರಾಣಿಗಳು ನಾಡಿಗೆ ದಾಳಿ ಮಾಡುತ್ತವೆ ಎಂಬ ಎಚ್ಚರ ಇರಬೇಕು ಎಂದರು.

ಎನ್ಎಸ್ಎಸ್‌ನಲ್ಲಿ ಜಾತಿ, ವರ್ಗ, ವರ್ಣ, ಸ್ತ್ರೀ, ಪುರುಷ ಎಂಬ ತಾರತಮ್ಯ ಇಲ್ಲ. ಯುವಜನತೆ ತಿಳಿದುಕೊಂಡು ಬೆಳೆಯಬೇಕು. ಸಾಧಕರಿಂದ ಪ್ರೇರಣೆ ಪಡೆಯಬೇಕು ಯುವಜನತೆ ಯಾವುದೇ ಕಾರಣಕ್ಕೂ ದಿಕ್ಕು ತಪ್ಪಬಾರದು. ಗಾಂಧಿ, ಬಸವಣ್ಣ, ಬುದ್ಧ, ಅಂಬೇಡ್ಕರ್‌, ಕುವೆಂಪು, ಶಂಕರಾಚಾರ್ಯ ಮೊದಲಾದ ಮಹಾಪುರಷರ ಆದರ್ಶ ಪಾಲಿಸಬೇಕು ಎಂದರು.

ಮಹಾತ್ಮಗಾಂಧಿ ಎಂದರೇ ಸೇವೆಯ ಮತ್ತೊಂದು ರೂಪ. ಗಾಂಧಿ ಶಾಂತಿಪ್ರಿಯರು. ಅಹಿಂಸಾವಾದಿಗಳು. ಅವರು ಇಲ್ಲದಿದ್ದರೆ ದೇಶಕ್ಕೆ ಇಷ್ಟೊಂದು ಗೌರವ ಸಿಗುತ್ತಿರಲಿಲ್ಲ. ಸೌಹಾರ್ದತೆ, ಸ್ತ್ರೀ ಸಬಲೀಕರಣ, ಗ್ರಾಮೀಣಾಭಿವೃದ್ಧಿ, ಗ್ರಾಮಗಳ ಸ್ವಚ್ಥತೆ ಹೀಗೆ ಪ್ರತಿಯೊಂದರಲ್ಲೂ ಅವರ ಕೊಡುಗೆ ಇದೆ. ಆದರೆ ಗಾಂಧಿ ಅವರನ್ನು ಪ್ರಸ್ತುತ ಅಪಹಾಸ್ಯದ ವಸ್ತುವಾಗಿ ಮಾಡಲಾಗಿದೆ ಎಂದು ವಿಷಾದಿಸಿದರು.

ಮುಖ್ಯ ಅತಿಥಿಯಾಗಿದ್ದ ಪದವಿಪೂರ್ವ ಶಿಕ್ಷಣ ಇಲಾಖೆ ಎನ್ಎಸ್ಎಸ್‌ ಕೋಶದ ವಿಭಾಗೀಯ ಅಧಿಕಾರಿ ಡಾ.ಟಿ.ಕೆ. ರವಿ ಮಾತನಾಡಿ, ಎನ್ಎಸ್ಎಸ್‌ ಶಿಬಿರಕ್ಕೆ ಹೋದಾಗ ಜನರಿಗೆ ಪರಿಸರದ ಬಗ್ಗೆ ಅರಿವು ಮೂಡಿಸಬೇಕು. ಪ್ಲಾಸ್ಟಿಕ್‌ನಿಂದ ಆಗುವ ಅನಾಹುತದ ಬಗ್ಗೆ ತಿಳಿಸಿಕೊಡಬೇಕು. ಅರಣ್ಯ ಇಲಾಖೆಯ ಸಹಕಾರ ಪಡೆದು ಸಸಿಗಳನ್ನು ನೆಡಬೇಕು ಎಂದು ಸಲಹೆ ಮಾಡಿದರು.

ವಾಹನಳಿಂದಾಗಿ ವಾಯು ಮಾಲಿನ್ಯ ಹೆಚ್ಚುತ್ತಿದೆ. ಎಲೆಕ್ಟ್ರಿಕ್‌ ವಾಹನಗಳ ಬಗ್ಗೆ ತಿಳಿಸಿ. ಆಮ್ಲಜನಕ ಇಲ್ಲದಿದ್ದಲ್ಲಿ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಕೂಡ ತಿಳಿಸಿ ಎಂದರು.

ಮತ್ತೊರ್ವ ಮುಖ್ಯ ಅತಿಥಿ ಜಿಲ್ಲಾ ಎನ್ಎಸ್ಎಸ್‌ ನೋಡಲ್‌ ಅಧಿಕಾರಿ ಎಂ. ಮಹೇಶ್‌ ಮಾತನಾಡಿ,. ಎನ್ಎಸ್ಎಸ್‌ ಸಮುದಾಯ ಜೀವನ ಕಲಿಸುತ್ತದೆ. ಮಾನವೀಯತೆಯನ್ನು ಕಲಿಸುತ್ತದೆ. ಶ್ರಮದಾನ ಮಾಡಿದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ,. ಪ್ರಕೃತಿಯ ಮುಂದೆ ಯಾರ ಆಟವೂ ನಡೆಯದು. ಆದ್ದರಿಂದ ಪರಿಸರ ಸಮತೋಲನ ಕಾಪಾಡುವ ಕಡೆಗೆ ನಮ್ಮ ಗಮನ ಇರಬೇಕು. ಸ್ವಚ್ಥತೆ ನಮ್ಮ ಮನೆಯಿಂದಲೇ ಆರಂಭವಾಗಬೇಕು ಎಂದರು.

ಸಾಲುಮರದ ತಿಮ್ಮಕ್ಕ ಅವರಲ್ಲದೇ ಮೈಸೂರಿನ ಕೆ.ಆರ್. ಗುರುಕಾರ್‌, ಚಾಮರಾಜನಗರದ ವೆಂಕಟೇಶ್‌ , ಮಂಡ್ಯ ಕರಿಘಟ್ಟದ ರಮೇಶ್‌ ಮೊದಲಾದವರು ನಮಗೆ ಪರಿಸರ ಕಾಪಾಡುವ ವಿಚಾರದಲ್ಲಿ ಮಾದರಿಯಾಗಬೇಕು ಎಂದರು.

ಶ್ರೀನಟರಾಜ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ವಿ.ಡಿ. ಸುನೀತಾ ರಾಣಿ ಇದ್ದರು. ಎನ್ಎಸ್ಎಸ್‌ ಕಾರ್ಯಕ್ರಮಾಧಿಕಾರಿ ಆರ್. ರಾಧಾ ಸ್ವಾಗತಿಸಿದರು. ಉಪನ್ಯಾಸಕಿ ಎಚ್‌.ಬಿ. ವಿಮಲಜ್ಯೋತಿ ನಿರೂಪಿಸಿದರು. ಉಪನ್ಯಾಸಕಿ ಎಸ್‌ ದೀಪ್ತಿ ವಂದಿಸಿದರು. ವಿದ್ಯಾರ್ಥಿನಿಯರು ಎನ್ಎಸ್ಎಸ್‌ ಗೀತೆ ಹಾಡಿದರು.