ಜಗತ್ತು ಸೌಂದರ್ಯವಾಗಿರಲು ಪರಿಸರ ಸಂರಕ್ಷಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ

KannadaprabhaNewsNetwork | Published : Jun 6, 2024 12:31 AM
Follow Us

ಸಾರಾಂಶ

ಮೊದಲು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಜಗತ್ತಿನ ಸೌಂದರ್ಯ ಅಡಗಿರುವುದು ಪರಿಶುದ್ಧವಾದ ಪರಿಸರದಲ್ಲಿ, ನಾವು ಸುಂದರವಾಗಿ ಇದ್ದರೆ ಸಾಲದು ನಮಗೆ ಗಾಳಿ, ಬೆಳಕು ನೀಡುವ ಪರಿಸರವನ್ನು ನಾಶವಾಗದಂತೆ ನೋಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಗತ್ತು ಸೌಂದರ್ಯವಾಗಿರಲು ಸುತ್ತಮುತ್ತಲಿನ ಪರಿಸರ ಸಂರಕ್ಷಣೆ ಜೊತೆಗೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಮಿಮ್ಸ್ ಇಎನ್ ಟಿ ವಿಭಾಗದ ಉಪನ್ಯಾಸ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಡ್ಯ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಅರಣ್ಯ ಇಲಾಖೆ, ಪರಿಸರ ರೂರಲ್ ಡೆವಲೆಪ್‌ ಮೆಂಟ್ ಸೊಸೈಟಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೊದಲು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಜಗತ್ತಿನ ಸೌಂದರ್ಯ ಅಡಗಿರುವುದು ಪರಿಶುದ್ಧವಾದ ಪರಿಸರದಲ್ಲಿ, ನಾವು ಸುಂದರವಾಗಿ ಇದ್ದರೆ ಸಾಲದು ನಮಗೆ ಗಾಳಿ, ಬೆಳಕು ನೀಡುವ ಪರಿಸರವನ್ನು ನಾಶವಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರತಿಯೊಬ್ಬರೂ ಪ್ರಜ್ಞಾವಂತರಾಗಿ ಪರಿಸರವನ್ನು ಉಳಿಸಬೇಕು. ಪ್ರತಿ ಮನೆಗಳಲ್ಲು ಕೂಡ ಚಿಕ್ಕ ಮಕ್ಕಳಿಗೆ ಪರಿಸರವನ್ನು ಉಳಿಸುವುದರ ಬಗ್ಗೆ ಅರಿವು ಮೂಡಿಸಬೇಕು. ಉತ್ತಮ ಪರಿಸರ ಉಳಿದರೆ ಮುಂದಿನ ಪೀಳಿಗೆಯ ಜೀವನದ ಕೂಡ ಸುಖಕರವಾಗಿರುತ್ತದೆ ಎಂದು ಕಿವಿಮಾತ ಹೇಳಿದರು.

ನಮ್ಮ ಮುಂದಿನ ಭವಿಷ್ಯ ಚೆನ್ನಾಗಿರಲು, ಪರಿಸರ ಹಾಗೂ ನಮ್ಮ ಸಂಸ್ಕೃತಿಯನ್ನು ನಶಿಸಿ ಹೋಗದಂತೆ ಕಾಪಾಡಿಕೊಳ್ಳಬೇಕು. ಹುಟ್ಟುಹಬ್ಬಗಳಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಾಚರಣೆ ಮಾಡುವ ಜೊತೆಗೆ ಒಂದು ಗಿಡ ನೆಟ್ಟಿ ಸಂಭ್ರಮಿಸಿದರೆ ಪರಿಸರವನ್ನು ಉಳಿಸಿಕೊಳ್ಳಬಹುದು ಎಂದು ಹೇಳಿದರು.

ಮನುಷ್ಯ ಎಷ್ಟು ಸ್ವಾರ್ಥಿ ಎಂದರೆ ಆತನ ದುರ್ಬುದ್ಧಿಯಿಂದ ಪರಿಸರ ನಾಶವಾಗುತ್ತಿದೆ. ಇದು ಹೀಗೆ ಮುಂದುವರೆಯುತ್ತ ಹೋದರೆ ಭವಿಷ್ಯದಲ್ಲಿ ಮುಂದಿನ ಪೀಳಿಗೆಗೆ ಟಿವಿಗಳಲ್ಲಿ ಇಂತಹ ಮರಗಳು, ಪ್ರಾಣಿಗಳು ಇದ್ದವು ಎಂದು ಟೀವಿಯಲ್ಲಿ ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್ ಮಾತನಾಡಿ, ಮಾನವ ತನ್ನ ಅಹಂನಿಂದ ಮರ ಗಿಡಗಳನ್ನು ನಾಶ ಮಾಡಿ ಮೂರ್ಖನಾಗದೇ ನಾನು ನಾನು ಎನ್ನುವ ಗರ್ವ ಬಿಟ್ಟು ಪರಿಸರ ರಕ್ಷಿಸುವಲ್ಲಿ ಮುಂದಾಗಬೇಕು ಎಂದರು.

ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ. ನಾವು ಪ್ರಕೃತಿಯ ಒಂದು ಭಾಗವಾಗುವುದರಿಂದ ಪ್ರಕೃತಿ ಒಂದಂಶವಾದ ನಾವುಗಳು ಪ್ರಕೃತಿ ಉಳಿವಿಗೆ ಕಾರಣವಾಗಬೇಕೆ ವಿನಃ ಪ್ರಕೃತಿಯ ಅಳಿವಿಗೆ ಕಾರಣವಾಗಬಾರದು. ಪ್ರತಿಯೊಬ್ಬರು ತಮ್ಮ ಮನೆಯ ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸಿ ಪರಿಸರ ರಕ್ಷಣೆ ಮಾಡಬೇಕು ಎಂದರು.

ಇದೇ ವೇಳೆ ವಿಶ್ವ ಪರಿಸರ ದಿನದ ಅಂಗವಾಗಿ ಏರ್ಪಡಿಸಿದ್ದ ಚಿತ್ರ ಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜ್, ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹ ಮೂರ್ತಿ, ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್, ವಿಜ್ಞಾನ ಸಂವಹನಕಾರ ಎಸ್.ಲೋಕೇಶ್, ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್, ಉಪ ಪರಿಸರ ಅಧಿಕಾರಿಗಳಾದ ಭವ್ಯ, ಅಶ್ವಿನಿ, ಗಾಯಕ ಬಸವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.