ದೊಡ್ಡಬಳ್ಳಾಪುರ: ಕನ್ನಡ ನೆಲ, ಜಲ ಹಾಗೂ ಭಾಷೆಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗನಿಗೂ ಅಭಿಮಾನವಿರಬೇಕು. ಸ್ಥಳೀಯ ಜನರ ಹಿತಾಸಕ್ತಿಗೆ ಒತ್ತು ನೀಡುವುದು ಮೊದಲ ಆದ್ಯತೆಯಾಗಿದೆ ಎಂದು ಶಾಸಕ ಧೀರಜ್ ಮುನಿರಾಜ್ ಹೇಳಿದರು.
ಇಲ್ಲಿನ ಜಯಚಾಮರಾಜೇಂದ್ರ ವೃತ್ತದಲ್ಲಿರುವ ಡಾ.ರಾಜ್ಕುಮಾರ್ ಪುತ್ಥಳಿ ಮುಂಭಾಗ ತಾಲೂಕು ಆಡಳಿತದಿಂದ ಹಮ್ಮಿಕೊಳ್ಳಲಾಗಿದ್ದ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಲಸಿಗರ ಸಮಸ್ಯೆಯಿಂದ ಎದುರಾಗಿರುವ ಆತಂಕ ನಿವಾರಣೆಗೆ ಎಲ್ಲರೂ ಒಟ್ಟುಗೂಡಿ ಯೋಚಿಸಬೇಕಿದೆ ಎಂದ ಅವರು, ಕನ್ನಡದ ವಿಚಾರದಲ್ಲಿ ರಾಜಿ ಇಲ್ಲ. ಕೈಗಾರಿಕಾ ಪ್ರದೇಶದಲ್ಲಿ ಕನ್ನಡಿಗರಿಗೆ ಉದ್ಯೋಗಗಳು ದೊರೆಯಬೇಕು. ಪರಿಸರ, ಉದ್ಯೋಗ, ಕೃಷಿ, ಕೈಗಾರಿಕೆ, ಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲಿ ಗಣನೀಯ ಸುಧಾರಣೆಗಳು ಅಗತ್ಯವಿದೆ. ದೊಡ್ಡಬಳ್ಳಾಪುರದ ಕನ್ನಡ ಚಳವಳಿ ಮತ್ತು ಹೋರಾಟದ ಪರಂಪರೆ ನಾಡಿಗೆ ಮಾದರಿ ಎಂದು ಅಭಿಪ್ರಾಯಪಟ್ಟರು.ನಾಡಗೀತೆ ಶತಮಾನೋತ್ಸವ:
ಇದೇ ವೇಳೆ ಕುವೆಂಪು ರಚಿತ ಜಯ ಭಾರತ ಜನನಿಯ ತನುಜಾತೆ ನಾಡಗೀತೆ ರಚನೆಯಾಗಿ 101 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಹಸ್ರ ಕಂಠ ಸ್ವರದಲ್ಲಿ ನಾಡಗೀತೆ ಗಾಯನ ನಡೆಯಿತು. ನಾಡಗೀತೆಯ ಅನನ್ಯತೆಯ ಕುರಿತು ತಾ.ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ಕನ್ನಡ ಚಳವಳಿಯ ಕುರಿತು ಕನ್ನಡ ಪಕ್ಷದ ಮುಖಂಡ ಸಂಜೀವನಾಯಕ್ ಮಾತನಾಡಿದರು.13 ಜನರಿಗೆ ಪುರಸ್ಕಾರ:
ಇದೇ ವೇಳೆ ಪತ್ರಕರ್ತ ಎನ್.ಎಂ.ನಟರಾಜ್ಗೆ ಡಾ.ವೆಂಕಟರೆಡ್ಡಿ ಕನ್ನಡ ಕಟ್ಟಾಳು ಪ್ರಶಸ್ತಿ, ಬಿ.ಪಿ.ಹರಿಕುಮಾರ್, ಎಂ.ಜಿ.ಬೋರೇಗೌಡ, ಎಚ್.ಪ್ರಕಾಶ್ರಾವ್, ಆರ್.ನಾಗರಾಜ್, ಎಂ.ಆರ್.ಮಹದೇವ್, ಎಂ.ನಾಗರಾಜ್ಗೆ ಕನ್ನಡ ಕಟ್ಟಾಳು ಪ್ರಶಸ್ತಿ, ಎಸ್.ವೆಂಕಟರಾಜು, ಹೇಮಂತ್, ಕೃಷ್ಣಪ್ಪ, ವಿ.ವೆಂಕಟೇಶ್, ಎಸ್.ಎನ್.ದೇವರಾಜು, ಖಾದರ್ಬೇಗ್ ಅವರಿಗೆ ವಿವಿಧ ಕ್ಷೇತ್ರಗಳ ಸಾಧನೆಗಾಗಿ ಪುರಸ್ಕಾರ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್, ನಗರಸಭೆ ಉಪಾಧ್ಯಕ್ಷ ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ್, ಪೌರಾಯುಕ್ತ ಕಾರ್ತಿಕೇಶ್ವರ್, ಹಲವು ನಗರಸಭಾ ಸದಸ್ಯರು, ಅಧಿಕಾರಿಗಳು, ಕನ್ನಡ ಸಂಘಟನೆಗಳ ಪ್ರಮುಖರು ಹಾಜರಿದ್ದರು.
ತಾಲೂಕು ಕಚೇರಿ ಆವರಣದಲ್ಲಿ ಧ್ವಜಾರೋಹಣ:ಇದಕ್ಕೂ ಮುನ್ನ ತಾಲೂಕು ಕಚೇರಿ ಆವರಣದಲ್ಲಿಉಪವಿಭಾಗಾಧಿಕಾರಿ ದುರ್ಗಾಶ್ರೀ ಧ್ವಜಾರೋಹಣ ನೆರೆವೇರಿಸಿದರು. ಬಳಿಕ, ತಾಲೂಕು ಕಚೇರಿ ಮುಂಭಾಗದಿಂದ ಪ್ರಮುಖ ಬೀದಿಗಳಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಬೆಳ್ಳಿ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ನಡೆಯಿತು. ವಿವಿಧ ಜಾನಪದ ಕಲಾ ತಂಡಗಳು ಭಾಗಿಯಾಗಿದ್ದವು.
1ಕೆಡಿಬಿಪಿ3-ದೊಡ್ಡಬಳ್ಳಾಪುರದ ಜಯಚಾಮರಾಜೇಂದ್ರ ವೃತ್ತದಲ್ಲಿರುವ ಡಾ.ರಾಜ್ಕುಮಾರ್ ಪುತ್ಥಳಿ ಮುಂದೆ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಚಳವಳಿಗಾರರಿಗೆ ಕನ್ನಡ ಕಟ್ಟಾಳು ಪ್ರಶಸ್ತಿ ನೀಡಿ ಗೌರವಿಸಲಾಯಿತು.