ದಾಬಸ್‍ಪೇಟೆ: ವಿಕಸಿತ ಭಾರತ್ ದೃಷ್ಟಿಕೋನದಲ್ಲಿ ಬ್ಯಾಂಕ್‍ಗಳಿಗೆ ಅನೇಕ ಅವಕಾಶಗಳನ್ನು ಸೃಷ್ಟಿಸಲಿದೆ. ಈ ಬೆಳವಣಿಗೆಯಲ್ಲಿ ಕರ್ಣಾಟಕ ಬ್ಯಾಂಕ್ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ದಾಬಸ್‍ಪೇಟೆ ಶಾಖಾ ವ್ಯವಸ್ಥಾಪಕ ಚಂದನ್ ಯು.ಎಸ್. ಭಟ್ ತಿಳಿಸಿದರು. ಪಟ್ಟಣದ ಕರ್ಣಾಟಕ ಬ್ಯಾಂಕಿನಲ್ಲಿ 102ನೇ ಸಂಸ್ಥಾಪಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಬ್ಯಾಂಕಿನ ಆರ್ಥಿಕ ಸ್ಥಿರತೆ ಮತ್ತು ಅಭಿವೃದ್ಧಿಯಲ್ಲಿ ಉನ್ನತ ಸ್ಥಾನಕ್ಕೇರಲು ಸಂಸ್ಥಾಪಕರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆ ಕಾರಣ ಎಂದರು. ಕರ್ಣಾಟಕ ಬ್ಯಾಂಕ್ ತನ್ನ ಸ್ಥಾಪನೆಯಿಂದಲೇ ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಂಡು ಬಂದಿದ್ದು, ಮುಂದೆಯೂ ಉತ್ತಮ ಬ್ಯಾಂಕಿಂಗ್ ಸೇವೆಗಳ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸುತ್ತದೆ. ಬ್ಯಾಂಕಿನ 102 ವರ್ಷಗಳ ನಂಬಿಕೆ, ಸೇವಾ ಮನೋಭಾವ ಹಾಗೂ ಆರ್ಥಿಕ ಪ್ರಗತಿಗೆ ನೀಡಿದ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ ಎಂದರು. ಕಾರ್ಯಕ್ರಮದಲ್ಲಿ ಸಿದ್ದಲಿಂಗ ವಿ. ಹೂಗಾರ, ಬ್ಯಾಂಕಿನ ಸಿಬ್ಬಂದಿಗಳಾದ ನಾಗಸಿಂಹ, ಅಶ್ವಿನ್ ಹಾಗೂ ಆನಂದ್ ಕುಮಾರ್ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.