ಮುಂಡಗೋಡ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆ ಪರೀಕ್ಷೆ ರದ್ದುಪಡಿಸಿರುವುದು ಹಾಗೂ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶುಕ್ರವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ ಮಾತನಾಡಿ, ವಿದ್ಯಾರ್ಥಿಗಳು ವರ್ಷಾನುಗಟ್ಟಲೇ ಹಗಲು-ರಾತ್ರಿ ವಿದ್ಯಾಭ್ಯಾಸ ಮಾಡಿ ಪರೀಕ್ಷೆಗೆ ಸಿದ್ಧರಾಗಿರುತ್ತಾರೆ. ಪರೀಕ್ಷೆ ಬರೆದ ಮೇಲೆ ಅಕ್ರಮ ನಡೆದಿರುವುದು ಬೆಳಕಿಗೆ ಬಂದು, ಪರೀಕ್ಷೆ ರದ್ದುಪಡಿಸಿದ ಕೇಂದ್ರ ಸರ್ಕಾರ, ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ. ಅಲ್ಲದೇ ಇದರ ಜವಾಬ್ದಾರಿ ಹೊರುವ ಬದಲು ತಪ್ಪನ್ನು ಅಧಿಕಾರಿಗಳ ಮೇಲೆ ಹಾಕಿ ಕೈ ತೊಳೆದುಕೊಂಡು ತಮಗೆ ಯಾವುದೇ ರೀತಿ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರದ ೧೩ ವರ್ಷದ ಅವಧಿಯಲ್ಲಿ ತೈಲ ಹಾಗೂ ಬಂಗಾರದ ಬೆಲೆ ಬಡವರಿಗೆ ನಿಲುಕದಷ್ಟು ಏರಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಜಿಲ್ಲಾ ಕಾಂಗ್ರೆಸ್ ಮಹಿಳಾಧ್ಯಕ್ಷೆ ಶಾರದಾ ರಾಠೋಡ, ಧರ್ಮರಾಜ ನಡಗೇರ, ರವಿಗೌಡ ಪಾಟೀಲ, ಎಂ.ಎನ್. ದುಂಡಸಿ, ರಾಜು ಕುಟ್ರಿ, ಗೌಸ್ ಮಖಾಂದಾರ, ಗುಡ್ಡಪ್ಪ ಕಾತೂರ, ವೈ.ಪಿ. ಬುಜಂಗಿ, ಆಲೆಹಸನ್ ಬೆಂಡಿಗೇರಿ, ಕೆಂಜೋಡಿ ಗಲಬಿ, ರಫೀಕ್ ಇನಾಮದಾರ, ರಾಮಕೃಷ್ಣ ಮೂಲಿಮನಿ, ಸಿದ್ದು ಹಡಪದ, ಕಿರಣ ಶೇರಖಾನೆ, ಸಲ್ಮಾ ಶೇರಖಾನೆ, ಮಂಜುನಾಥ ಕಟಗಿ, ರಜಾ ಪಠಾಣ ಉಪಸ್ಥಿತರಿದ್ದರು.