ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದ ಪ್ರಮುಖ ಬೀದಿಗಳಲ್ಲಿ ಮಹಿಳೆಯರಿಂದ ಪ್ರತಿಭಟಿಸಿ, ಮಹಿಳೆಯರು ಪಡೆದಿರುವ ಸಾಲವನ್ನು ಒತ್ತಾಯಪೂರ್ವಕವಾಗಿ ವಸೂಲಿ ಮಾಡುತ್ತಿರುವ ಕ್ರಮ ಖಂಡಿಸಲಾಯಿತು. ಜಮಖಂಡಿ ಹಾಗೂ ರಬಕವಿ ಬನಹಟ್ಟಿ ಅವಳಿ ತಾಲೂಕಿನಲ್ಲಿ ಸುಮಾರು 50ರಿಂದ 60 ಮೈಕ್ರೋ ಫೈನಾನ್ಸ್ ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲಾ ಬ್ಯಾಂಕ್ ಪ್ರತಿನಿಧಿಗಳು (ರಿಕವರಿ ಏಜೆಂಟರು) ಮಹಿಳೆಯರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದು ಅವಾಚ್ಯವಾಗಿ ಶಬ್ಧಗಳಿಂದ ನಿಂದಿಸುತ್ತಿರುವುದನ್ನು ಖಂಡಿಸಲಾಯಿತು.
ರಾತ್ರಿ ಸಮಯದಲ್ಲಿ 11ರಿಂದ 12ರವರೆಗೆ ಮನೆ ಮುಂದೆ ಕುಳಿತುಕೊಳ್ಳುವುದು. ರಾತ್ರಿ ವೇಳೆ ಅಧಿಕಾರಿಗಳಿಗೆ ಭೇಟಿ ಮಾಡಿಸುತ್ತೇನೆ ಎಂದು ಮಾನಸಿಕ ಕಿರುಕುಳ ನೀಡುತ್ತಾರೆ. ಸಾಲ ಮರುಪಾವತಿ ಮಾಡುವುದು ತಡವಾದರೆ ಮದ್ಯಪಾನ ಮಾಡಿ ಬಂದು ರಾತ್ರಿ ಸಮಯದಲ್ಲಿ ಮನೆಯಲ್ಲಿರುವ ಸಾಮಾನುಗಳು, ಮೊಬೈಲ್ಗಳನ್ನು ಕಿತ್ತುಕೊಂಡು ಹೋಗುತ್ತಾರೆ ಎಂದು ಮಹಿಳೆಯರು ದೂರಿದರು.ದೌರ್ಜನ್ಯ ಎಸಗುತ್ತಿರುವ ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ದೇಸಾಯಿ ಸರ್ಕಲ್ನಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು. ನಗರ ಡಿವೈಎಸ್ಪಿ ಶಾಂತವೀರಗೆ ಮನವಿ ಸಲ್ಲಿಸಿದರು. ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಫೀಕ್ ಬಾರಿಗಡ್ಡಿ, ಶಬಾನಾ ರಫೀಕ್ ಖಲೀಫಾ, ನೂರಜಹಾನ ಪಠಾನ, ರುಕ್ಸಾನಾ ಮೈಬೂಬ್ ಪಟೇಲ್, ರಾಜು ಮಸಳಿ, ವಕೀಲರಾದ ಶಶಿಕಾಂತ ದೊಡ್ಡಮನಿ ಇದ್ದರು.