ಧಾರವಾಡ: ಖುರಾನ್ ಪಠಣದಿಂದ ಅಶುದ್ಧಗೊಂಡ ಜಾಗವನ್ನು ಶುದ್ಧೀಕರಿಸಲು ಹಾಗೂ ರಾಜ್ಯ ಸರ್ಕಾರದ ಅತಿಯಾದ ಮುಸ್ಲಿಂ ಓಲೈಕೆ ನೀತಿ ಖಂಡಿಸಿ ಬಿಜೆಪಿ ಮಹಾನಗರ ಜಿಲ್ಲಾ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಮುಲ್ಲಾ ಮೋಕ್ಷ ಹೆಸರಿನಲ್ಲಿ ಹೋಮ ಮಾಡಿ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
ಹುಬ್ಬಳ್ಳಿಯಲ್ಲಿ ಸರ್ಕಾರದ ವತಿಯಿಂದ ನಡೆದ ಸರ್ಕಾರಿ ಸಮಾರಂಭದಲ್ಲಿ ಖುರಾನ ಪಠಣ ಮಾಡಿ ಮುಸ್ಲಿಂ ಸಮುದಾಯದ ಓಲೈಕೆಗಾಗಿ ಸರ್ಕಾರಿ ಅಧಿಕಾರಿಗಳನ್ನು ಬಳಸಿ ಸರ್ಕಾರಿ ಯಂತ್ರದ ದುರುಪಯೋಗ ಮಾಡಿದ್ದನ್ನು ಖಂಡಿಸುತ್ತೇವೆ. ಆ ಜಾಗದ ಶುದ್ಧೀಕರಣ ಹಾಗೂ ಸರ್ಕಾರಿ ಕಚೇರಿಗಳ ಶುದ್ಧೀಕರಣಕ್ಕಾಗಿ ಪುರೋಹಿತರೊಂದಿಗೆ ಹೋಮ ನೆರವೇರಿಸಲಾಗಿದೆ ಎಂದು ಅರವಿಂದ ಬೆಲ್ಲದ ಹೇಳಿದರು.
ಈ ಖುರಾನ ಪಠಣಕ್ಕೆ ರಾಜ್ಯ ಸರ್ಕಾರದ ಕುಮ್ಮಕ್ಕು ಕಾರಣ. ಕಾಗ್ರೆಸ್ ನೇತೃತ್ವದ ಸರ್ಕಾರ ಇಂತಹ ಬೇಜವಾಬ್ದಾರಿತನ ತೋರುತ್ತಿರುವುದು ರಾಜ್ಯದ ಜನರು ಸಹಿಸಲಾರರು. ಕೇವಲ ಒಂದು ಸಮುದಾಯದ ಓಲೈಕೆ ಹಾಗೂ ಮತ ಬ್ಯಾಂಕ್ ರಾಜಕಾರಣ ಮುಂದೆ ನಡೆಯದಂತೆ ರಾಜ್ಯಪಾಲರು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದೇವೆ. ಘಟನೆಗೆ ಕಾರಣರಾದ ರಾಜ್ಯ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಮೇಲೆ ಕ್ರಮ ಜರುಗಿಸುವ ಮೂಲಕ ರಾಜ್ಯದ ಜನರ ಮನಸ್ಸಿಗೆ ಆದ ನೋವಿಗೆ ನ್ಯಾಯ ಒದಗಿಸಬೇಕು ಎಂದು ಬೆಲ್ಲದ ಎಚ್ಚರಿಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕಿ ಸೀಮಾ ಮಸೂತಿ, ಜಿಲ್ಲಾಧ್ಯಕ್ಷ ತಿಪ್ಪಣ ಮಜ್ಜಗಿ, ಮಾಜಿ ಮೇಯರ್ ಶಿವು ಹೀರೆಮಠ, ವಿಜಯಾನಂದ ಶಟ್ಟಿ, ಸಂಜಯ ಕಪಟಕರ, ಶಿವು ಮೆಣಶಿನಕಾಯಿ, ಮಂಜುನಾಥ ಮಲ್ಲಿಗವಾಡ, ರಾಜು ಕಾಳೆ, ಶಂಕರ ಶೇಳಕೆ, ಮಂಜುನಾಥ ಕಾಟಕರ, ಶಂಕರ ಶೇಳಕೆ, ಶಿವಣ್ಣ ಬಡವಣ್ಣನವರ, ಮೋಹನ ರಾಮದುರ್ಗ, ಬಸವರಾಜ ಗರಗ, ಆನಂದ ಯಾವಗಲ್, ವಿಷ್ಣು ಕೊರಳ್ಳಿ, ಸುರೇಶ ಬೆದರೆ, ಬಸವರಾಜ ಮುತ್ತಳಿ, ಸುನೀಲ ಮೋರೆ, ಶ್ರೀನಿವಾಸ ಕೋಟ್ಯಾನ, ಮಂಜು ಬಟ್ಟನ್ನನರ, ಚಂದ್ರಕಲಾ ಕೊಟಬಾಗಿ ಮತ್ತಿತರರು ಇದ್ದರು.
ಸಿದ್ಧಾರೂಢರ ಸನ್ನಿಧಿಯಲ್ಲಿ ಖುರಾನ್: ಸಿದ್ಧಾರೂಢರ ಸನ್ನಿಧಿಯಲ್ಲಿ ಖುರಾನ್ ಪಠಣ ಮಾಡಿಸುತ್ತಾರೆ. ಅವರ ಮನಸ್ಸು ಶುದ್ಧವಾಗಲಿ ಎಂದು ಹೋಮ-ಹವನ ಮಾಡಿದ್ದೇವೆ. ಸಿದ್ದರಾಮಯ್ಯ ಸರ್ಕಾರಕ್ಕೆ ಕೇವಲ ಮುಸ್ಲಿಮರಷ್ಟೇ ಮತ ಹಾಕಿಲ್ಲ. ಎಲ್ಲ ಸಮುದಾಯದವರು ಮತ ನೀಡಿದ್ದಾರೆ. ಮುಸ್ಲಿಂ ಸಮುದಾಯದ ನಿಗಮಗಳಿಗೆ ಹೆಚ್ಚಿನ ಅನುದಾನ ನೀಡ್ತಾರೆ. ಸರ್ಕಾರದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಬ್ಯಾನರ್ ಹಾಕಿದ್ದು ತಪ್ಪು. ನನ್ನ ಕ್ಷೇತ್ರದಲ್ಲಿ ಶಾಸಕನಾದ ನನಗೆ ಅಹ್ವಾನ ನೀಡಿಲ್ಲ. ಅಧಿಕಾರಿಗಳ ಮೇಲೆ ಕ್ರಮ ಆಗದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ನಿಶ್ಚಿತ ಎಂದು ಹು-ಧಾ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಹೇಳಿದರು.