ವಕ್ಫ್ ಕಾಯ್ದೆ ತಿದ್ದುಪಡಿ, ಕೇಂದ್ರದ ವಿರುದ್ಧ ಪ್ರತಿಭಟನೆ

KannadaprabhaNewsNetwork | Published : Apr 13, 2025 2:04 AM

ಸಾರಾಂಶ

Protest against the amendment of the Waqf Act, the center

-ಕಪ್ಪು ಬಾವುಟ ಪ್ರದರ್ಶಿಸಿ, ಕೈಗೆ ಕಪ್ಪು ಪಟ್ಟಿ ಧರಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ

-ವಕ್ಫ್ ತಿದ್ದುಪಡಿ ಮಸೂದೆ ಹಿಂಪಡೆಯಬೇಕೆಂದು ಒತ್ತಾಯಿಸಿ ಶಹಾಪುರದಲ್ಲಿ ಮುಸ್ಲಿಂ ಒಕ್ಕೂಟದ ಪ್ರತಿಭಟನೆ

----

ಕನ್ನಡಪ್ರಭ ವಾರ್ತೆ ಶಹಾಪುರ

ವಕ್ಫ್ ಮಸೂದೆಗೆ ಅಂಗೀಕಾರ ಮುಸ್ಲಿಮರ ವಿರೋಧಿ ಕಾಯ್ದೆಯಾಗಿದ್ದು, ಈ ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿ ಮುಸ್ಲಿಂ ಒಕ್ಕೂಟ ಶಹಾಪುರದಲ್ಲಿ ಶನಿವಾರ ಭಾರಿ ಪ್ರತಿಭಟನೆ ನಡೆಸಿದರು. ನಗರದ ಹೊಸ ಬಸ್ ನಿಲ್ದಾಣದಿಂದ ಬಸವೇಶ್ವರ ವೃತ್ತದವರೆಗೆ ಕಪ್ಪು ಬಾವುಟ ಪ್ರದರ್ಶಿಸಿ, ಕೈಗೆ ಕಪ್ಪು ಪಟ್ಟಿ ಧರಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿದರು.

ಬಿಜೆಪಿ ಮತ್ತು ಮೋದಿ ಸರ್ಕಾರ ಭಾರತದ ಜನರ ನಡುವಿನ ಒಗ್ಗಟ್ಟನ್ನು ಮುರಿಯಲು ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾಯ್ದೆ ವಾಪಸ್‌ ಪಡೆಯದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಎಸ್ಡಿಪಿಐನ ಜಿಲ್ಲಾಧ್ಯಕ್ಷ ಸೈಯದ್ ಹುಸೇನ್ ಇಸಾಕ್ ಖಾಲಿದ್ ಮಾತನಾಡಿ, ವಕ್ಫ್‌ ಮೊದಲಿನ ಕಾಯ್ದೆಯನ್ನು ರದ್ದುಪಡಿಸಲು ಹೊರಟಿರುವ ಬಿಜೆಪಿಗೆ ಮುಸ್ಲಿಮರ ಬಗ್ಗೆ ಇರುವ ದ್ವೇಷ ಭಾವನೆ ಗೊತ್ತಾಗುತ್ತದೆ ಎಂದರು.

ಮುಸ್ಲಿಂ ಹಿರಿಯ ಮುಖಂಡ ಸೈಯದ್ ಖಾದ್ರಿ ಮಾತನಾಡಿ, ವಕ್ಫ್ ತಿದ್ದುಪಡಿ ಮಸೂದೆಯು ವಕ್ಫ್ ಬೋರ್ಡ್ ವ್ಯವಸ್ಥೆಯನ್ನು ನಾಶ ಮಾಡುವ ಮೂಲಕ ತಮ್ಮ ಧಾರ್ಮಿಕ ವ್ಯವಹಾರಗಳ ಮೇಲೆ ಮುಸ್ಲಿಮರು ನಿಯಂತ್ರಣ ಕಳೆದುಕೊಳ್ಳುವಂತೆ ಮಾಡುತ್ತದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ಹಿರಿಯ ನ್ಯಾಯವಾದಿ ಆರ್. ಚನ್ನಬಸು ಮಾತನಾಡಿ, ಲೋಕಸಭೆಯಲ್ಲಿ ಅಂಗೀಕರಿಸಿದ ಅಸಂವಿಧಾನಿಕವಾದ ವಕ್ಫ್ ತಿದ್ದುಪಡಿ ಕಾಯ್ದೆ ರದ್ದುಪಡಿಸಿ ಈ ಹಿಂದೆ ಇದ್ದ ವಕ್ಫ್ ಕಾಯ್ದೆಯನ್ನು ಮರು ಸ್ಥಾಪಿಸುವಂತೆ ಸೂಕ್ತ ಆದೇಶ ಮಾಡಬೇಕೆಂದು ಅವರು ಒತ್ತಾಯಿಸಿದರು. ಕುರುಬ ಸಮಾಜದ ಹಿರಿಯ ಮುಖಂಡ ಡಾ. ಭೀಮಣ್ಣ ಮೇಟಿ ಮಾತನಾಡಿ, ವಕ್ಫ್ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಮುಸ್ಲಿಮರನ್ನು ಮುಗಿಸುವ ತಂತ್ರಗಾರಿಕೆಯಾಗಿದೆ ಎಂದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಎಸ್ಪಿ ಪೃಥ್ವಿಕ್‌ ಶಂಕರ್ ಅವರ ನೇತೃತ್ವದಲ್ಲಿ ಇಬ್ಬರು ಡಿವೈಎಸ್ಪಿ, ಆರು ಜನ ಸಿಪಿಐ, 20 ಜನ ಪಿಎಸ್ಐ, 80 ಜನ ಪೋಲಿಸ್ ಹಾಗೂ ಮೂರು ಕೆಎಸ್ಆರ್ಪಿ ತುಕುಡಿ, ಮೂರು ಡಿಎಆರ್ ತುಕುಡಿ ಸೇರಿ ವ್ಯಾಪಕ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು. ತಹಸೀಲ್ದಾರ್ ಉಮಕಾಂತ ಹಳ್ಳೆ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಮಹಮ್ಮದ್ ರಫೀಕ್ ಚೌದ್ರಿ, ಸೈಯದ್ ಪಾಷಾ ಪಟೇಲ್, ಕೋಲಿ ಸಮಾಜದ ಹಿರಿಯ ಮುಖಂಡ ಸಣ್ಣ ನಿಂಗಪ್ಪ ನಾಯ್ಕೋಡಿ, ಹಿರಿಯ ವಕೀಲ ಚಂದ್ರಶೇಖರ್ ಜಾದವ್, ಶೇಕ್ ಖಲೀಮ್ ತವಕಲಿ ಮುಂತಾದ ಮುಖಂಡರು ಇದ್ದರು.

----

12ವೈಡಿಆರ್‌7 : ವಕ್ಫ್ ತಿದ್ದುಪಡಿ ಮಸೂದೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ಮುಸ್ಲಿಂ ಒಕ್ಕೂಟದ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.

Share this article