ಕನ್ನಡಪ್ರಭ ವಾರ್ತೆ ಯಳಂದೂರು
ಕಳೆದ ಮೂರು ದಿನಗಳಿಂದ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣ ಪಂಚಾಯಿತಿ ಮುಂಭಾಗ ಪೌರ ನೌಕರರು ನಡೆಸುತ್ತಿರುವ ಪ್ರತಿಭಟನೆ ಗುರುವಾರವೂ ಮುಂದುವರೆದಿದೆ.ಪ್ರತಿಭಟನಾನಿರತರು ತಮ್ಮ ಬೇಡಿಕೆಗಳನ್ನು ಈಡೇರುವಂತೆ ಸರ್ಕಾರಕ್ಕೆ ಒತ್ತಾಯಿಸಿ ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು ಅವರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಪಪಂ ನೌಕರರಾದ ಜಯಲಕ್ಷ್ಮಿ ಮಾತನಾಡಿ, ರಾಜ್ಯದ ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳ ಪೌರ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಬೇಕು, ನಗದು ರಹಿತ ಆರೋಗ್ಯ ಚಿಕಿತ್ಸಾ ಸೌಲಭ್ಯ ಯೋಜನೆಯಾದ ಜ್ಯೋತಿ ಸಂಜೀವಿನಿಯನ್ನು ಪೌರ ನೌಕರರಿಗೂ ವಿಸ್ತರಿಸಬೇಕು, ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಈಡೇರಿಸಬೇಕು, ಹೊರಗುತ್ತಿಗೆಯಡಿ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜುದಾರರು, ವಾಹನ ಚಾಲಕರು, ಲೋಡರ್ಗಳು, ಕ್ಲೀನರ್ಗಳು, ಸ್ವಚ್ಛತಾ ಮೇಲ್ವಿಚಾರಕರು, ಉದ್ಯಾನ ನಿರ್ವಹಣೆಗಾರರು ಸೇರಿದಂತೆ ವಿವಿಧ ವೃದ್ದ ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು, ದಿನಗೂಲಿ ಕ್ಷೇಮಾಭಿವದ್ಧಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಟೈಮ್ ಸ್ಕೆಲ್ ನೌಕರರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು, ವಾಹನ ಚಾಲಕರು, ನೀರು ಪೂರೈಕೆ ನೌಕರರು, ನೇರ ಪಾವತಿ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು, ನೌಕರರಿಗೆ ಎಸ್ಎಫ್ಸಿ ಮುಕ್ತ ನಿಧಿಯಿಂದ ವೇತನ ನೀಡಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಸರ್ಕಾರ ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು ಇಲ್ಲವಾದಲ್ಲಿ ನಮ್ಮ ಪ್ರತಿಭಟನೆ ನಿರಂತರವಾಗಿ ಮುಂದುವರೆಯಲಿದೆ ಎಂದು ಮಾಹಿತಿ ನೀಡಿದರು. ಪಟ್ಟಣದ ಸ್ವಚ್ಛತೆ ಮರೀಚಿಕೆ:ಸಾರ್ವಜನಿಕ ಸೇವೆಗಳು, ಹಾಗೂ ಪೌರ ಕಾರ್ಮಿಕರಿಂದ ಪಟ್ಟಣದ ಸ್ವಚ್ಛತೆಯೂ ಇಲ್ಲವಾಗಿರುವ ಕಾರಣ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ. ಈಗ ಮಳೆ ಆಗಿರುವ ಕಾರಣ ಪಟ್ಟಣದ ಆಗ್ರಹಾರ ಬೀದಿಯಲ್ಲಿ ಚರಂಡಿ ಕಟ್ಟಿಕೊಂಡಿದ್ದು ಇದರ ಕಲುಷಿತ ನೀರೆಲ್ಲಾ ರಸ್ತೆಯಲ್ಲೇ ಹರಿಯುತ್ತಿದೆ. ಪಟ್ಟಣದ ಬಸ್ ನಿಲ್ದಾಣವೂ ಸೇರಿದಂತೆ ಎಲ್ಲೆಡೆ ಕಸದ ರಾಶಿ ಬಿದ್ದಿದೆ. ಅಲ್ಲದೆ ಕಚೇರಿಯ ನೌಕರರೂ ಭಾಗಿಯಾಗಿರುವುದರಿಂದ ಕಚೇರಿಯ ಕೆಲಸಗಳು ನಿಂತಿವೆ.ಈ ಸಂದರ್ಭದಲ್ಲಿ ನೌಕರರಾದ ಆರ್. ಸುರೇಶ್, ಮನೋಜ್, ಪರಶಿವಮೂರ್ತಿ, ಎಲ್. ರೇಖಾ, ಆರ್. ವಿಜಯ ಮಲ್ಲಿಕಾರ್ಜುನಸ್ವಾಮಿ, ಲಕ್ಷ್ಮಿ, ರಘುಪತಿ, ಜಗದೀಶ್, ಸಂತೋಷ್, ಮಾದೇಶ್, ಆಮಾಸೆ, ನಾಗರಾಜು, ಆರ್ಯಮ್ಮ, ಬಿ.ಸಿ. ಮಂಜುನಾಥ್, ಗಣೇಶ್, ಸುರೇಶ್, ರಾಮು, ಬಿಳಿಗಿರಿ, ರಂಗಸ್ವಾಮಿ ಕುಮಾರ. ಮಂಜುನಾಥ, ಶೋಭಾ, ಶಾಂತಿ, ನಾಗಮ್ಮ, ಬಣ್ಣಮ್ಮ ಸೇರಿದಂತೆ ಅನೇಕರು ಇದ್ದರು.