ಕನ್ನಡಪ್ರಭ ವಾರ್ತೆ ರಾಮದುರ್ಗ:ಮಹಿಳೆಯರನ್ನು ಬಳಸಿಕೊಂಡ ಸಂಸದ ಪ್ರಜ್ವಲ್ ರೇವಣ್ಣನನ್ನು ಬಂಧಿಸುವಂತೆ ಒತ್ತಾಯಿಸಿ ವಿವಿಧ ಜನಪರ ಸಂಘಟನೆಗಳ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಅಂಜುಮನ್ ಕಮಿಟಿಯ ಮಹಮ್ಮದ ಶಫಿ ಬೆಣ್ಣಿ ಮಾತನಾಡಿ, ಲೈಂಗಿಕ ವಿಡಿಯೋ ಮಾಡಿದ ಆರೋಪಿ ಯಾರು ಎಂಬುವುದನ್ನು ಮೊದಲು ಪತ್ತೆ ಮಾಡಬೇಕು. ಈ ಹಗರಣದ ಪ್ರಮುಖ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಅದೇ ರೀತಿ ಹೊಳೆನರಸಿಪುರದಲ್ಲಿ ಒಂದು ಪ್ರಕರಣ ದಾಖಲಾಗಿದೆ. ಎಚ್.ಡಿ.ರೇವಣ್ಣ ಇವರಿಬ್ಬರನ್ನೂ ಕೂಡಲೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಯಾವುದೇ ಒತ್ತಡಗಳಿಗೆ ಮಣಿಯದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ರಕ್ಷಣೆ ನೀಡಬೇಕು ಮತ್ತು ನ್ಯಾಯವನ್ನು ಒದಗಿಸಬೇಕು ಎಂದು ಜನಪರ ಟ್ರಸ್ಟ್ನ ಸುಭಾಷ ಘೋಡಕೆ, ಕರವೇ ಪ್ರವೀಣ ಶೆಟ್ಟಿ ಬಣ ಸಂಘಟನೆಯ ಶ್ರೇಯಸ್ ವಾಲಿ, ಕಾರ್ಮಿಕ ಸಂಘಟನೆಯ ನಾಗಪ್ಪ ಸಂಗೊಳ್ಳಿ, ಮಹಿಳಾ ಸಂಘಟನೆಯ ತುಳಸಮ್ಮ ಮಾಳದಕರ ಮನವಿ ಮಾಡಿದರು.ಪ್ರತಿಭಟನೆ ವೇಳೆ ವಿವಿಧ ಸಂಘಟನೆಗಳ ಪೈರೋಜ್ ಪಠಾಣ, ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಂಘಟನೆಯ ಅಧ್ಯಕ್ಷ ಆಶೀಪ್ ಖಲಿಫ್, ಡಬ್ಬಿ ಅಂಗಡಿಕಾರರ ಸಂಘದ ಫಾರೂಖ್ ಶೇಖ್, ರಮೀಜಾ ಖಲೀಫ್, ಗೀತಾ ಮಾಳದಕರ ಮತ್ತು ಶಬಾನಾ ಶೇಖ್ ಮುಂತಾದವರು ಭಾಗವಹಿಸಿದ್ದರು.