ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸೊಸೈಟಿಗಳಲ್ಲಿ ಕಳೆದು ಹೋದ ಠೇವಣಿ ಮೊತ್ತದ ಮರು ಪಾವತಿಗೆ ಆಗ್ರಹಿಸಿ ವಂಚನೆಗೊಳಗಾದ ಸಂತ್ರಸ್ತ ಠೇವಣಿದಾರರ ಕುಟುಂಬದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
2019ರಲ್ಲಿ ಸಂಸತ್ತು ಅನಿಯಂತ್ರಿತ ಠೇವಣಿ ಅನ್ವಯ ಜಾರಿಗೆ ತಂದಿದೆ. ಮೋಸದ ಕಂಪನಿಗಳು ಮತ್ತು ಸೊಸೈಟಿಗಳಲ್ಲಿ ಕಳೆದು ಹೋದ ಠೇವಣಿ ಮೊತ್ತವನ್ನು ಮರುಪಾವತಿಸಲಾಗುತ್ತದೆ. ಅರ್ಜಿದಾರರು 180 ದಿನಗಳಲ್ಲಿ ಎರಡು ಮೂರು ಪಟ್ಟು ಮರುಪಾವತಿ ಪಡೆಯಲು ಕಾನುನುಬದ್ದ ಈ ಹಕ್ಕನ್ನು ನೀಡಲಾಗಿದೆ. ಅನಿಯಮಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ- 2019ರ ಅಡಿಯಲ್ಲಿ ಅನಿಯಮಿತ ಠೇವಣಿ ಮತ್ತು ನಿಯಮಿತ ಠೇವಣಿ ಯೋಜನೆಗಳಲ್ಲಿ ಪಾರ್ವಜನಿಕ ಠೇವಣಿಗಳ ಮರುಪಾವತಿಗಾಗಿ ದೇಶದ ಪ್ರತಿ ಜಿಲ್ಲೆಗಳಲ್ಲಿ ಅರ್ಜಿಗಳನ್ನು ಸ್ವೀಕರಿಸಲು ಮತ್ತು ಯೋಜನೆಗಳ 2019 ರ ಪಾವತಿಗಳನ್ನು ಮಾಡಲು ಪಾವತಿ ಕೌಂಟರ್ಗಳನ್ನು ಸ್ಥಾಪಿಸಲಾಗಿದೆ. ಅಲ್ಲದೇ ಸರ್ಕಾರವು ದೇಶಾದ್ಯಂತ ವಿಶೇಷ ನ್ಯಾಯಾಲಯಗಳನ್ನು ಸಕ್ರಿಯಗೊಳಿಸಿದೆ ಎಂದರು.ಪಾವತಿ ಖಾತರಿ ಹಕ್ಕುಗಳ ಕಾನೂನು ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ- 2019 ರ ಅನ್ವಯ ಪ್ರತಿಯೊಬ್ಬ ವಂಚನೆಗೊಳಗಾದ ಹೂಡಿಕೆದಾರರ ಠೇವಣಿಯ ಎರಡರಿಂದ ಮೂರು ಪಟ್ಟು ತಕ್ಷಣವೇ ಪಾವತಿಸಬೇಕು. ನಿರುದ್ಯೋಗಿ ಮುಗ್ಧ ಏಜೆಂಟರಿಗೆ ಭದ್ರತೆ, ಗೌರವ, ಉದ್ಯೋಗ ಮತ್ತು ಪುನರ್ವಸತಿ ಹಕ್ಕನ್ನು ನೀಡಬೇಕು. ಭಾರತೀಯ ನ್ಯಾಯ ಸಂಹಿತೆ- 2023ರ ಸೆಕ್ಷನ್ 111ರ ಅಡಿಯಲ್ಲಿ ಪ್ರತಿಯೊಬ್ಬ ಅಪ್ರಾಮಾಣಿಕ ವ್ಯಕ್ತಿಗೆ ಮರಣ ದಂಡನೆಯನ್ನು ನೀಡುವ ಮೂಲಕ ಪವಿತ್ರ ಭಾರತವನ್ನು ವಂಚನೆ ಮುಕ್ತ ಮತ್ತು ಪ್ರಾಮಾಣಿಕ ರಾಷ್ಟ್ರವನ್ನಾಗಿ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿ. ಸೋಮಣ್ಣ, ಮೃತ್ಯಂಜಯ, ವೆಂಕಟೇಶಮೂರ್ತಿ, ನಂಜುಂಡಸ್ವಾಮಿ, ಬಿ.ವಿ.ಮಹೇಶ್, ಮಹೇಶ್ವರಿ, ಲತಾ, ಇತರರು ಭಾಗವಹಿಸಿದ್ದರು.