ಕನ್ನಡಪ್ರಭ ವಾರ್ತೆ ಕುಮಟಾ
ಗುರುವಾರ ಶಾಲೆಯ ಬಳಿ ಜಮಾಯಿಸಿದ ಊರವರು ಪ್ರತಿಭಟನೆ ನಡೆಸಿದ್ದು ತಮ್ಮ ಸಮಸ್ಯೆ ಆಲಿಸುವಂತೆ ಶಿಕ್ಷಣ ಇಲಾಖೆಗೆ ತಿಳಿಸಿದರು. ಸ್ಥಳಕ್ಕೆ ಆಗಮಿಸಿದ ಬಿಇಒ ಉದಯ ನಾಯ್ಕ, ಬಿಆರ್ಪಿ ಸಂಧ್ಯಾ ರಾಯ್ಕರ, ಸಿಆರ್ಪಿ ಲೋಕೇಶ ಭಟ್ ತುರ್ತು ಸಭೆ ನಡೆಸಿದರು. ಶಿಕ್ಷಕರು ಕುರಿತು ಶಾಲಾಡಳಿತ ಹಾಗೂ ಪಾಲಕರ ದೂರಿನ ಕುರಿತು ಇಲಾಖೆ ಈವರೆಗೆ ಕೈಗೊಂಡ ಕ್ರಮಗಳ ಕುರಿತು ಬಿಇಒ ಉದಯ ನಾಯ್ಕ ವಿವರಿಸಿದರು.
ಈ ವೇಳೆ ಅಹವಾಲು ಹೇಳಿಕೊಂಡ ಗ್ರಾಮಸ್ಥರು, ದಟ್ಟ ಕಾಡಿನ ನಡುವಿನ ಕುಗ್ರಾಮ ಮಳವಳ್ಳಿ ಭಾಗದಲ್ಲಿ ಚಿಕ್ಕ ಮಕ್ಕಳಿಗೆ ಬೇರೆಡೆ ಹೋಗಿ ಶಿಕ್ಷಣ ಅತ್ಯಂತ ಕಷ್ಟದ ಮಾತು. ಹೀಗಾಗಿ ಎಲ್ಲರೂ ಊರಿನ ಶಾಲೆಯಲ್ಲೇ ಕಲಿಯುತ್ತಿದ್ದು ೧ರಿಂದ ೫ ನೇ ತರಗತಿಯವರೆಗೆ ಕಲಿಕೆ ಮಳವಳ್ಳಿ ಸ.ಕಿ.ಪ್ರಾ ಶಾಲೆಯಲ್ಲಿದೆ. ಶಾಲೆಯಲ್ಲಿ ಕಳೆದ ೨೨ ವರ್ಷಗಳಿಂದ ಶಿಕ್ಷಕರಾಗಿರುವ ಅನಂತ ವಾಸುದೇವ ದೇಶಭಂಡಾರಿ ಶಾಲೆಯ ಶಿಕ್ಷಣ ಗುಣಮಟ್ಟ ಕೆಡಲು ಮೂಲ ಕಾರಣ. ಸರಿಯಾದ ಸಮಯಕ್ಕೆ ಶಾಲೆಗೆ ಬರುವುದಿಲ್ಲ, ತರಗತಿಯನ್ನೂ ಸರಿಯಾಗಿ ನಡೆಸುವುದಿಲ್ಲ. ಪಾಲಕರು ಪ್ರಶ್ನಿಸಿದರೆ ಉದ್ಧಟತನದ ಉತ್ತರ ಸಿದ್ಧವಿರುತ್ತದೆ. ಶಿಕ್ಷಕ ಅನಂತ ಅವರ ಮಾನಸಿಕ ಸಮಸ್ಯೆ ಉಳ್ಳವರಂತೆ ಘಳಿಗೆಗೊಮ್ಮೆ ವರ್ತನೆ ಬದಲಾಗುತ್ತಿರುತ್ತದೆ. ಹಿಂದೆ ಈ ವಿಷಯವನ್ನು ಖುದ್ದು ಪರಿಶೀಲಿಸಿದ ಬಳಿಕ ಶಿಕ್ಷಣಾಧಿಕಾರಿಗಳು ಮಾನವೀಯತೆಯಿಂದ ಶಾಲೆಗೆ ಅನಂತ ದೇಶಭಂಡಾರಿ ಸಹೋದರ ನಾಗರಾಜ ದೇಶಭಂಡಾರಿ ಅವರನ್ನು ಅತಿಥಿ ಶಿಕ್ಷಕರಾಗಿ ನಿಯೋಜಿಸಿದ್ದು ಇದಕ್ಕೆಲ್ಲಾ ಸಾಕ್ಷಿಯಾಗಿದೆ.ಹಾಗೆಯೇ ಶಿಕ್ಷಕ ಪ್ರಕಾಶ ನಾಯ್ಕ ಅವರ ವರ್ತನೆ ವಿಪರೀತವಾಗಿದ್ದು ಶಾಲೆಯಲ್ಲಿ ಪಾನ, ಗುಟಕಾ, ಮದ್ಯ ಸೇವನೆ ಮಾಡುವುದು, ಅತಿಥಿ ಶಿಕ್ಷಕರೊಂದಿಗೆ, ಮಕ್ಕಳೊಂದಿಗೆ ದುರ್ವರ್ತನೆ, ನಿಂದನೆ ಮಾಡುತ್ತಾರೆ. ಶಾಲೆಯ ಶಿಕ್ಷಕರೇ ಹೀಗಾದರೆ ಮಕ್ಕಳ ಪಾಠ ಮತ್ತು ಸಂಸ್ಕಾರದ ಗತಿಯೇನು? ಶಾಲೆಯಲ್ಲಿ ಮಕ್ಕಳಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಶಾಲೆಗೆ ಮಕ್ಕಳನ್ನು ಕಳಿಸಲು ಧೈರ್ಯ ಸಾಲದೇ ಬೇರೆ ಶಾಲೆಗೆ ಕಳಿಸುತ್ತಿದ್ದಾರೆ. ಇದೇ ರೀತಿಯಾದರೆ ಊರಿನ ಶಾಲೆ ಮುಚ್ಚಬೇಕಾಗಬಹುದು. ಡಿಡಿಪಿಐಯವರೆಗೆ ಯಾವ ಅಧಿಕಾರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದರು
ದಿವಗಿ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣ ಗೌಡ ಮಾತನಾಡಿದರು.
ಎಸ್ಡಿಎಂಸಿ ಅಧ್ಯಕ್ಷ ಗಣಪತಿ ಗೌಡ, ಉಪಾಧ್ಯಕ್ಷೆ ತಾರಾ ಗೌಡ, ಹಾಲಕ್ಕಿ ಸಮುದಾಯದ ಅಧ್ಯಕ್ಷ ಗೋವಿಂದ ಗೌಡ, ಗಣಪತಿ ಗೌಡ ಗೋಕರ್ಣ, ಗಣೇಶ ಗೌಡ, ಕುಸುಮಾಕರ ಗೌಡ, ಮಂಜುನಾಥ ಗೌಡ, ನಾಗವೇಣಿ ವಿ. ಗೌಡ, ಮಂಗಲಾ ಎಂ.ಗೌಡ, ಶಂಕರ ಗೌಡ, ನವೀನ ಗೌಡ, ದತ್ತಾತ್ರೇಯ ಹರಿಕಾಂತ, ರಾಜೇಶ, ಮಾದೇವಿ, ನಿರ್ಮಲಾ, ಭವಾನಿ, ಸರಿತಾ, ಬೀರ, ಸುದೀಪ ಗೌಡ ಇತರರು ಇದ್ದರು.