ಉಚಿತ ಪಾಸ್ ಇದೆ, ಬಸ್ಸೇ ಇಲ್ಲ!

KannadaprabhaNewsNetwork |  
Published : Jul 03, 2026, 02:30 AM IST
ಶಾಲೆಗೆ ತೆರಳಲು ಲಾರಿಗಳಿಗೆ ಕೈ ಮಾಡುತ್ತಿರುವ ವಿದ್ಯಾರ್ಥಿಗಳು | Kannada Prabha

ಸಾರಾಂಶ

ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿದೆ. ಆದರೆ ಪ್ರಯಾಣಿಸಲು ಬಸ್‌ಗಳೇ ಇಲ್ಲದಿದ್ದರೆ ಆ ಪಾಸ್‌ನಿಂದ ಏನು ಪ್ರಯೋಜನ? ಇದೇ ಪ್ರಶ್ನೆ ಇಂದು ಅಂಕೋಲಾ–ಯಲ್ಲಾಪುರ ಮಾರ್ಗದ ಗ್ರಾಮೀಣ ವಿದ್ಯಾರ್ಥಿಗಳನ್ನು ಕಾಡುತ್ತಿದೆ.

ಅಂಕೋಲಾ–ಯಲ್ಲಾಪುರ ಮಾರ್ಗದ ವಿದ್ಯಾರ್ಥಿಗಳ ಸಂಕಷ್ಟ

ಶಿಕ್ಷಣಕ್ಕಾಗಿ ಅಪಾಯಕಾರಿ ಪ್ರಯಾಣ

ಹೆದ್ದಾರಿಯಲ್ಲಿ ವಾಹನಗಳಿಗೆ ಕೈ ಬೀಸುವ ವಿದ್ಯಾರ್ಥಿಗಳು

ಪಾಸ್ ಕೊಟ್ಟ ಸರ್ಕಾರ, ಬಸ್ ವ್ಯವಸ್ಥೆ ಮಾಡಿಲ್ಲ

ರಾಘು ಕಾಕರಮಠ

ಕನ್ನಡಪ್ರಭ ವಾರ್ತೆ ಅಂಕೋಲಾ

ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿದೆ. ಆದರೆ ಪ್ರಯಾಣಿಸಲು ಬಸ್‌ಗಳೇ ಇಲ್ಲದಿದ್ದರೆ ಆ ಪಾಸ್‌ನಿಂದ ಏನು ಪ್ರಯೋಜನ? ಇದೇ ಪ್ರಶ್ನೆ ಇಂದು ಅಂಕೋಲಾ–ಯಲ್ಲಾಪುರ ಮಾರ್ಗದ ಗ್ರಾಮೀಣ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಒಂದೇ ಒಂದು ಲೋಕಲ್ ಬಸ್ ಇರದೆ ಇರುವುದರಿಂದ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗಟ್ಟಲೆ ಕಾದು, ಸಿಕ್ಕ ವಾಹನಗಳಿಗೆ ಕೈ ಮಾಡಿ ಶಾಲೆ–ಕಾಲೇಜುಗಳಿಗೆ ತೆರಳುವ ದುಸ್ಥಿತಿ ಎದುರಿಸುತ್ತಿದ್ದಾರೆ.

ತಾಲೂಕಿನ ಮಾಸ್ತಿಕಟ್ಟಾ, ಹಬ್ಬುಳ, ಮೂಲೆಮನೆ, ಸಬಗುಳಿ, ಆಲದಕೋಣ ಹಾಗೂ ವಜ್ರಳ್ಳಿ ಸೇರಿದಂತೆ ಹಲವು ಗ್ರಾಮಗಳ ವಿದ್ಯಾರ್ಥಿಗಳು ಪ್ರತಿನಿತ್ಯ ಇದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಂಕೋಲಾ ಮತ್ತು ಯಲ್ಲಾಪುರದ ಶಾಲಾ-ಕಾಲೇಜುಗಳು ಹಾಗೂ ವಿವಿಧ ತರಬೇತಿ ಕೇಂದ್ರಗಳಿಗೆ ತೆರಳಲು ಲೋಕಲ್ ಬಸ್ ಸೌಲಭ್ಯ ಇಲ್ಲದ ಕಾರಣ, ಸಮಯಕ್ಕೆ ಶಿಕ್ಷಣ ಸಂಸ್ಥೆಗಳಿಗೆ ತಲುಪುವುದು ಕಷ್ಟಕರವಾಗಿದೆ.

ಒಂದೇ ಒಂದು ಲೋಕಲ್ ಬಸ್ ಇಲ್ಲದೆ ಇರುವುದರಿಂದ ಅನೇಕ ವಿದ್ಯಾರ್ಥಿಗಳು ಲಾರಿಗಳು, ಖಾಸಗಿ ವಾಹನಗಳು ಹಾಗೂ ಇತರ ಅಪರಿಚಿತ ವಾಹನಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ಸಮಯಕ್ಕೆ ತರಗತಿಗೆ ಹಾಜರಾಗಲು ಸಾಧ್ಯವಾಗದೆ ಪಾಠಗಳಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೂ ಪರಿಣಾಮ ಉಂಟಾಗುತ್ತಿದೆ.

ಅಂಕೋಲಾ–ಯಲ್ಲಾಪುರ ಮಾರ್ಗದಲ್ಲಿ ವಿದ್ಯಾರ್ಥಿಗಳಷ್ಟೇ ಅಲ್ಲದೆ ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಹಾಗೂ ಸಾರ್ವಜನಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಆದರೂ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಅಂಕೋಲಾ ದಿಂದ ಯಲ್ಲಾಪುರ ಮಾರ್ಗದಲ್ಲಿ ಒಂದೇ ಒಂದು ಲೋಕಲ್ ಬಸ್‌ಗಳನ್ನು ನೀಡದೆ ಇರುವದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರತಿಯೊಂದು ಹಳ್ಳಿಗಳಲ್ಲಿಯೂ ಲೋಕಲ್ ಬಸ್ ವ್ಯವಸ್ಥೆ ಇದೆ ಆದರೆ ಸಾವಿರಾರು ವಾಹನಗಳು ಓದಾಡುವ ಅಂಕೋಲಾ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೇ ಒಂದು ಲೋಕಲ್ ಬಸ್ ಯಾಕೆ ಇಲ್ಲ ಎನ್ನುವುದು ಇಲ್ಲಿಯ ವಿದ್ಯಾರ್ಥಿಗಳ ಆಕ್ರೋಶದ ಕೂಗಾಗಿದೆ.

-----

ಬಾಕ್ಸ್

ಗ್ರಾಮಸ್ಥರ ಒತ್ತಾಯದಂತೆ ಅಂಕೋಲಾದಿಂದ ಯಲ್ಲಾಪುರಕ್ಕೆ ಬೆಳಗ್ಗೆ 8 ಗಂಟೆಗೆ ಹಾಗೂ ಯಲ್ಲಾಪುರದಿಂದ ಅಂಕೋಲಾಕ್ಕೆ 7.45ಕ್ಕೆ ಲೋಕಲ್ ಬಸ್ ವ್ಯವಸ್ಥೆ ಕಲ್ಪಿಸಬೇಕು. ಇದೇ ರೀತಿ ಸಂಜೆ 4 ಗಂಟೆಗೆ ಯಲ್ಲಾಪುರದಿಂದ ಅಂಕೋಲಾಕ್ಕೆ ಮತ್ತು ಅಂಕೋಲಾದಿಂದ ಯಲ್ಲಾಪುರ 4-15 ಕ್ಕೆ ಲೋಕಲ್ ಬಸ್‌ ಓಡಿಸಿದರೆ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಕಾರ್ಮಿಕರ ಬಹುಕಾಲದ ಸಮಸ್ಯೆಗೆ ಪರಿಹಾರ ಸಿಗಲಿದೆ ಎನ್ನುವುದು ಆಗ್ರಹವಾಗಿದೆ.

--------

ಕೋಟ್

ಲೋಕಲ್ ಬಸ್ ಇಲ್ಲದ ಕಾರಣ ವಿದ್ಯಾರ್ಥಿಗಳು ಅಪರಿಚಿತ ಹಾಗೂ ಹೊರರಾಜ್ಯದ ವಾಹನಗಳಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಸುರಕ್ಷತೆಯ ದೃಷ್ಟಿಯಿಂದ ಆತಂಕಕಾರಿಯಾಗಿದೆ. ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಶಾಲೆ–ಕಾಲೇಜುಗಳಿಗೆ ತೆರಳುತ್ತಿರುವುದರಿಂದ ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಸಾರಿಗೆ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ.

ಸಂದೀಪ ಅಶೋಕ ನಾಯ್ಕ,

ಗ್ರಾಮಸ್ಥ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಚನ ಸಂಸ್ಕೃತಿ ಉಳಿಸಿದ ಫ.ಗು.ಹಳಕಟ್ಟಿ
ಹಿರೇಮಾದಿನಾಳ ಮೊರೇರ ಗುಡ್ಡ ಸಂಶೋಧನೆಗೆ ಹೊಸ ತಿರುವು!