ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಮಂಡಿಪೇಟೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆವರಣದಲ್ಲಿ ಯುಎಫ್ಬಿಯು ನೇತೃತ್ವದಲ್ಲಿ ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ಘೋಷಣೆಗಳನ್ನು ಕೂಗುವ ಮೂಲಕ ಬ್ಯಾಂಕ್ ಅಧಿಕಾರಿ, ನೌಕರರು ಪ್ರತಿಭಟನಾ ಮತ ಪ್ರದರ್ಶನದಲ್ಲಿ ಭಾಗಿಯಾದರು.
ಇದೇ ವೇಳೆ ಮಾತನಾಡಿದ ಯುಎಫ್ಬಿಯು ಜಿಲ್ಲಾ ಸಂಚಾಲಕ, ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ರಾಷ್ಟ್ರೀಯ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ, ಬ್ಯಾಂಕ್ ಉದ್ಯೋಗಿಗಳ ದೀರ್ಘ ಕಾಲದ ಬೇಡಿಕೆಯಾದ ಐದು ದಿನದ ಬ್ಯಾಂಕಿಂಗ್ ಪದ್ಧತಿ ಜಾರಿಗೊಳ್ಳಬೇಕು. ಸರ್ಕಾರ ಏಕಪಕ್ಷೀಯವಾಗಿ ಜಾರಿಗೆ ತಂದ ತಾರತಮ್ಯ ಪೂರಿತ ಪ್ರೋತ್ಸಾಹ ಧನ ಯೋಜನೆ ಹಿಂಪಡೆಯಬೇಕು. ಬಾಕಿ ಉಳಿದ ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸಬೇಕು ಎಂದು ಒತ್ತಾಯಿಸಿದರು.ಐದು ದಿನಗಳ ಬ್ಯಾಂಕಿಂಗ್ ಪದ್ಧತಿ ಬೇಡಿಕೆ ಬಗ್ಗೆ ಕಳೆದೊಂದು ದಶಕಗಳಿಂದ ಹೋರಾಟ ನಡೆಸುತ್ತಿದ್ದೇವೆ. ಈಗಾಗಲೇ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್, ಬ್ಯಾಂಕ್ ಕಾರ್ಮಿಕ ಸಂಘಗಳ ನಡುವೆ 8.03.2024ರಂದೇ ಒಪ್ಪಂದವಾಗಿದೆ. ಆದರೆ, ಎರಡೂವರೆ ವರ್ಷ ಕಳೆದರೂ ಬೇಡಿಕೆ ಈಡೇರಿಸಿಲ್ಲ. ಬ್ಯಾಂಕ್ ಉದ್ಯೋಗಿಗಳ ಸಹನೆ ಕಟ್ಟೆಯೊಡೆದು ಮುಷ್ಕರದ ಹಾದಿ ಅನಿವಾರ್ಯವಾಗಿದೆ. ಪ್ರಸ್ತುತ ಬ್ಯಾಂಕ್ ಉದ್ಯೋಗಿಗಳು ಅತೀ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚುತ್ತಿರುವ ವ್ಯವಹಾರಕ್ಕೆ ತಕ್ಕನಾಗಿ ಉದ್ಯೋಗಿಗಳ ನೇಮಕಾತಿಯೂ ಆಗುತ್ತಿಲ್ಲ ಎಂದು ದೂರಿದರು.
ಕೇಂದ್ರ ಹಣಕಾಸು ಇಲಾಖೆ ಅನಗತ್ಯ ಕಾಲಹರಣ ಮಾಡಿ ಬ್ಯಾಂಕ್ ಉದ್ಯೋಗಿಗಳ ನ್ಯಾಯಯುತ ಬೇಡಿಕೆ ಈಡೇರಿಸುವಲ್ಲಿ ಸೋತಿದೆ. ಈ ಮುಷ್ಕರದಲ್ಲಿ ಸುಮಾರು 8 ಲಕ್ಷ ಬ್ಯಾಂಕ್ ನೌಕರರು, ಅಧಿಕಾರಿಗಳು ಪಾಲ್ಗೊಂಡು, ಬೀದಿಗಿಳಿದು ಸರಕಾರದ ವಿಳಂಬ ಧೋರಣೆಯ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ನಮ್ಮ ಹೋರಾಟಕ್ಕೆ ನ್ಯಾಯ ಒದಗಿಸದೇ ಹೋದಲ್ಲಿ ಸೆಪ್ಟೆಂಬರ್ ಕೊನೆಯ ವಾರ ಮತ್ತೆ 3 ದಿನ ಮತ್ತು ಅಕ್ಟೋಬರ್ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಸಿದರು.
ಸಂಘಟನೆ ಮುಖಂಡರಾದ ಪ್ರದೀಪ ಪಾಟೀಲ, ಕೆ.ವಿಶ್ವನಾಥ ಬಿಲ್ಲವ, ಮಹೇಶ ಟಿ.ದೊಡ್ಡಮನಿ, ಎಂ.ಪಿ.ಕಿರಣಕುಮಾರ, ಕೆ.ವಿಜಯಕುಮಾರ, ಎಂ.ಶಮಂತ್, ಸಾಗರ್ ಜೋಶಿ, ನಾಗರಾಜ ನಾಶಿ, ಆರ್.ಆಂಜನೇಯ, ಎಚ್.ಎಸ್.ತಿಪ್ಪೇಸ್ವಾಮಿ, ಶಿವರಾಮ ಕೃಷ್ಣನ್, ಜಿ.ಎಸ್.ಸಂಧ್ಯಾ, ಎಂ.ಎಚ್.ಗಿರೀಶ, ಸಿದ್ಧಾರ್ಥ ಸಿಂಗ್, ಶೋಭಾ ದಿವಾಕರ, ಸಿ.ದುರ್ಗಪ್ಪ, ವಿಶ್ವಚೇತನ್, ಅನುರಾಧಾ ಮುತಾಲಿಕ್, ದೀಪಾ ಗುಡಿ, ಅನಿಲಕುಮಾರ, ಜಿ.ಟಿ.ಬಸವರಾಜ, ಎಸ್.ರಶ್ಮಿ, ಮಧುಸ್ವಿನಿ ದೇಸಾಯಿ, ಅನಿಲಕುಮಾರ, ಮಹಮದ್ ರಫಿ, ಎಂ.ಎಂ.ಸಿದ್ದಲಿಂಗಯ್ಯ, ಪರಶುರಾಮ, ಶಂಭು ಹಿರೇಮಠ, ಎಂ.ಡಿ.ವಿದ್ಯಾಸಾಗರ, ಅಣ್ಣಪ್ಪ ನಂದಾ, ಮಾಕನೂರು ತಿಪ್ಪೇಸ್ವಾಮಿ, ಸೈಯದ್ ಚಾಂದಬಾಷಾ, ಎಚ್.ಜೆ.ಆಶಾ, ಶೃತಿ ಪತ್ತಾರ್, ಸುಮನಾ, ಅನ್ನಪೂರ್ಣ, ಎಚ್.ಶೈಲ ಜಾ, ಮಂಜಮ್ಮ, ಶ್ರೀಧರ ಪೆರೂರು, ಜ್ಞಾನೇಶ್ವರ ಮಾಲವಾಡೆ, ಉಷಾ, ಎನ್.ಜಿ.ನಾಗರತ್ನಮ್ಮ ಇತರರಿದ್ದರು.