ಕನ್ನಡಪ್ರಭ ವಾರ್ತೆ ಮಂಡ್ಯ
ಶಿವರಾಮೇಗೌಡ ಅವರದ್ದು ಬಚ್ಚಲು ಬಾಯಿ. ಅವರಿಗೆ ಅಂಬರೀಶ್ ಮತ್ತು ಮಾದೇಗೌಡರ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ. ಅವರ ಬಗ್ಗೆ ಲಘುವಾಗಿ ಮಾತನಾಡಿರುವುದು ಹಿರಿಯ ನಾಯಕರಿಗೆ ಮಾಡಿದ ಅವಮಾನವಷ್ಟೇ ಅಲ್ಲ, ಮಂಡ್ಯಕ್ಕೆ ಮಾಡಿದ ಅವಮಾನ ಕೂಡ. ಅದಕ್ಕಾಗಿ ಕೂಡಲೇ ಶಿವರಾಮೇಗೌಡ ಅವರು ಜಿಲ್ಲೆಯ ಜನರ ಕ್ಷಮೆಯಾಚಿಸುವಂತೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಎಲ್.ಆರ್.ಶಿವರಾಮೇಗೌಡರಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ಕೊಡಿಸಿದ್ದು ಅಂಬರೀಶ್. ಅದನ್ನೂ ಉಳಿಸಿಕೊಳ್ಳಲಿಲ್ಲ. ದುಡ್ಡಿನ ಅಹಂಕಾರದಿಂದ ಪದೇ ಪದೇ ನಾಲಿಗೆಯನ್ನು ಹರಿಯಬಿಡುತ್ತಿದ್ದಾರೆ. ಅವರ ಮಾತುಗಳೇ ಅವರ ರಾಜಕೀಯ ಏಳ್ಗೆಗೆ ಮುಳುವಾಗಿವೆ. ಬಹುಶಃ ಅದಿನ್ನೂ ಅವರಿಗೆ ಅರ್ಥವಾಗಿಲ್ಲ ಎಂದು ಮೂದಲಿಸಿದರು.ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಅಂಬರೀಶ್ ಕಾಲು ಹಿಡಿದು ಮೈತ್ರಿ ಪಕ್ಷದ ಅಭ್ಯರ್ಥಿಯಾದರು. ಅಂಬರೀಶ್ ಅವರು ಜಿಲ್ಲಾದ್ಯಂತ ಸುತ್ತಿ ಶಿವರಾಮೇಗೌಡರ ಪರ ಪ್ರಚಾರ ಮಾಡಿದರು. ದಾಖಲೆಯ ಅಂತರದಿಂದ ಗೆಲುವನ್ನೂ ಸಾಧಿಸಿದರು. ಆದರೂ ಕೃತಜ್ಞತೆ ಇಲ್ಲದೆ ಅಂಬರೀಶ್ ವಿರುದ್ಧ ಮಾತನಾಡಿದ್ದಾರೆ. ಅಷ್ಟೊಂದು ಜನಪ್ರಿಯತೆ ಇರುವವರು ನಾಗಮಂಗಲದಲ್ಲಿ ಪತ್ನಿಯನ್ನು ಅಖಾಡಕ್ಕಿಳಿಸಿ ೭ ಸಾವಿರ ಮತಗಳನ್ನು ಪಡೆದು ಸೋತಿದ್ದೇಕೆ ಎಂದು ಪ್ರಶ್ನಿಸಿದರು.
ಪಕ್ಷೇತರರಾಗಿ ಎರಡು ಬಾರಿ ನಾಗಮಂಗಲ ಕ್ಷೇತ್ರದಿಂದ ಆಯ್ಕೆಯಾಗಿದ್ದ ಶಿವರಾಮೇಗೌಡರು ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಂಡಿದ್ದರೆ ಒಳ್ಳೆಯ ರಾಜಕಾರಣಿಯಾಗಬಹುದಿತ್ತು. ಕಾಂಗ್ರೆಸ್ನಿಂದ ಜೆಡಿಎಸ್ಗೆ ಹೋಗಿ ಅಲ್ಲಿಂದ ಮತ್ತೆ ಕಾಂಗ್ರೆಸ್ ಸೇರಿ ಸಂಸದರಾಗಿ, ಆನಂತರ ಬಿಜೆಪಿ ಸೇರಿ ಇದೀಗ ಮತ್ತೆ ಕಾಂಗ್ರೆಸ್ ಸೇರಿ ತಮ್ಮ ಹರಕಲು ಬಾಯಿಯನ್ನು ಮನಸೋಇಚ್ಛೆ ಬಿಟ್ಟಿದ್ದಾರೆ. ಇವರ ಅಶ್ಲೀಲ ಹೇಳಿಕೆಗಳು ಪ್ರಚೋಧನಾಕಾರಿಯಾಗಿದ್ದು ಶಿವರಾಮೇಗೌಡರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಅವರನ್ನು ಬಂಧಿಸಬೇಕು. ಶಿವರಾಮೇಗೌಡ ಕೂಡ ಅಂಬರೀಶ್ ಅಭಿಮಾನಿಗಳಲ್ಲಿ ಕ್ಷಮೆ ಕೋರುವಂತೆ ಆಗ್ರಹಿಸಿದರು.
ಗೋಷ್ಠಿಯಲ್ಲಿ ಪುಟ್ಟೇಗೌಡ, ನಾಗಣ್ಣ, ಶಶಿಕುಮಾರ್ ಇತರರಿದ್ದರು.