ಕುರುಗೋಡು: ಪಟ್ಟಣವನ್ನು ಸುಂದರ, ಸ್ವಚ್ಛತೆಯೊಂದಿಗೆ ಕುರುಗೋಡಿನ ಎಲ್ಲ ವಾರ್ಡ್ಗಳಿಗೂ ಮೂಲ ಸೌಕರ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಜೆ.ಎನ್. ಗಣೇಶ ಭರವಸೆ ನೀಡಿದರು.
ಕುರುಗೋಡು ತಾಲೂಕು ಜನತೆಗೆ ಆರೋಗ್ಯದ ದೃಷ್ಟಿಯಿಂದ ವದ್ದಟ್ಟಿ ರಸ್ತೆಯಲ್ಲಿ ೧೦೦ ಹಾಸಿಗೆ ಆಸ್ಪತ್ರೆ ನಿರ್ಮಾಣ ಹಾಗೂ ಸರ್ಕಾರಿ ಸೌಲಭ್ಯಗಳು ಒಂದೇ ಸೂರಿನಡಿ ದೊರಕಿಸುವ ಉದ್ದೇಶದಿಂದ ಮಿನಿವಿಧಾನಸೌಧ ಕಟ್ಟಡ ನಿರ್ಮಾಣ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳು ಮುಗಿಯುವ ಹಂತದಲ್ಲಿದೆ. ಶೀಘ್ರದಲ್ಲೇ ಅವುಗಳನ್ನು ಉದ್ಘಾಟಿಸಿ ಜನತೆಗೆ ಅರ್ಪಿಸಲಾಗುವುದು ಎಂದು ಹೇಳಿದರು.
ಹೆಚ್ಚುತ್ತಿರುವ ಕುರುಗೋಡು ನಿವಾಸಿಗಳಿಗೆ ಕುಡಿವ ನೀರು ಸಮಸ್ಯೆ ಆಗದಂತೆ ಜನ ಸಂಖ್ಯೆಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಕುಡಿವ ನೀರಿನ ಕೆರೆಗೆ ಇನ್ನಷ್ಟು ಅನುದಾನ ತಂದು ಕೆರೆ ಅಭಿವೃದ್ಧಿ ಪಡಿಸಲಾಗುವುದು ಎಂದರು.ಇದಕ್ಕೂ ಮೊದಲು ಪಟ್ಟಣದ ೨೩ನೇ ವಾರ್ಡಿನ ಬಳ್ಳಾರಿ ರಸ್ತೆಯಲ್ಲಿ ೨೦೧೮-೧೯ನೇ ಸಾಲಿನ ಎಸ್ಎಫ್ಸಿ ವಿಶೇಷ ಅನುದಾನ ₹೨.೫೦ ಕೋಟಿ ವೆಚ್ಚದಿಂದ ನಿರ್ಮಾಣವಾಗುವ ಎಪಿಎಂಸಿಯಿಂದ ಮಿನಿ ವಿಧಾನಸೌಧವರೆಗೆ ಬರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಕುರುಗೋಡು ಪಟ್ಟಣದ ೨೦ನೇ ವಾರ್ಡಿನಲ್ಲಿ ಎಸ್ಎಫ್ಸಿ ವಿಶೇಷ ಅನುದಾನದ ₹೬೦ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುವ ಸಿಸಿರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಗಣೇಶ ಭೂಮಿಪೂಜೆ ನೆರವೇರಿಸಿದರು.