ಹುಬ್ಬಳ್ಳಿ:
ಪಿಎಸ್ಐ ಪರಶುರಾಮ ಚಲವಾದಿ ಸಾವಿಗೆ ಶಾಸಕ ಚಿನ್ನಾರೆಡ್ಡಿ ಪಾಟೀಲ ಹಾಗೂ ಅವರ ಪುತ್ರ ಸನ್ನಿಗೌಡ ಅವರೇ ಕಾರಣವೆಂದು ಆರೋಪಿಸಿರುವ ಕರ್ನಾಟಕ ದಲಿತ ವಿಮೋಚನಾ ಸಮಿತಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಮಂಗಳವಾರ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅವರಿಬ್ಬರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿತು.ಯಾದಗಿರಿ ಠಾಣೆಯಲ್ಲಿ 7 ತಿಂಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಐ ಪರಶುರಾಮ ಚಲವಾದಿ ಅವರನ್ನು ಶಾಸಕ ಚಿನ್ನಾರೆಡ್ಡಿ ಮತ್ತು ಅವರ ಪುತ್ರ ಸನ್ನಿಗೌಡ ಉದ್ದೇಶಪೂರ್ವಕವಾಗಿ ಬೇರೆಡೆ ವರ್ಗಾವಣೆ ಮಾಡಿಸಿದ್ದಾರೆ. ಇದೇ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸಬೇಕಾದರೆ ₹ 30 ಲಕ್ಷ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಆಗ ಪಿಎಸ್ಐ ಶಾಸಕರ ಕಚೇರಿಗೆ ತೆರಳಿ ಹಣ ನೀಡಲು ಆಗುವುದಿಲ್ಲ ಎಂದು ಕೇಳಿಕೊಂಡರೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿದ್ದಾರೆ. ಇದನ್ನು ತಮ್ಮ ಬಳಿ ಹೇಳಿಕೊಂಡಿದ್ದರು ಎಂದು ಪಿಎಸ್ಐ ಪತ್ನಿ ಶ್ವೇತಾ ಎಸ್ಪಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆದಕಾರಣ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎಸ್ಸಿ-ಎಸ್ಟಿ ಜನರ ಮೇಲೆ ದಬ್ಬಾಳಿಕೆ ಹೆಚ್ಚಿದೆ. ಮೃತ ಪಿಎಸ್ಐ ಕುಟುಂಬಕ್ಕೆ ಸರ್ಕಾರದಿಂದ ₹ 50 ಲಕ್ಷ ಪರಿಹಾರ, ಮೃತರ ಪತ್ನಿಗೆ ಸರ್ಕಾರಿ ಕೆಲಸ, ಮಕ್ಕಳಿಗೆ ಸರ್ಕಾರದಿಂದಲೇ ಶಿಕ್ಷಣದ ಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬೇಕು. ಈ ಸಾವಿನ ಸೂಕ್ತ ನ್ಯಾಯಕ್ಕಾಗಿ ಮುಖ್ಯಮಂತ್ರಿಗಳು ಉನ್ನತ ಮಟ್ಟದ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿದರುಈ ವೇಳೆ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಸುರೇಶ ಖಾನಾಪುರ, ಹುಬ್ಬಳ್ಳಿ ಶಹರ ಅಧ್ಯಕ್ಷ ಅನಿಲ ಗೋನಾಳ, ಪ್ರಧಾನ ಕಾರ್ಯದರ್ಶಿ ಶ್ರೀಧರ ಕಂದಗಲ್, ಕೆಂಚಪ್ಪ ಮಲ್ಲಮ್ಮನವರ, ಸಿದ್ಧಾರ್ಥ ಮಲ್ಲಮ್ಮನವರ. ಗುರು ಕ್ವಾಟಿ, ವಿರೂಪಾಕ್ಷ ಚಲವಾದಿ, ಮಂಜು ಬಾಲಪ್ಪನವರ, ವೆಂಕಟೇಶ ದಾಸರ, ಕೋಟೇಶ ಬುಳ್ಳಾಪುರ ಸೇರಿದಂತೆ ಹಲವರಿದ್ದರು.