ಬಂಗಾರಪೇಟೆ: ಪಟ್ಟಣದಲ್ಲಿ ಅಪರಾಧ ಪ್ರಕರಣಗಳಿಗ ಸಂಪೂರ್ಣವಾಗಿ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕಂಕಣ ತೊಟ್ಟಿದ್ದು, ಅಪರಾಧಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಪ್ರತಿ ಮನೆ ಮನೆಗೂ ತೆರಳಿ ಜಾಗೃತಿ ಮೂಡಿಸುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ದಯನಂದ್ ಹೇಳಿದರು.
ಈ ಹಿನ್ನೆಲೆ ಹಲವು ಸಲಹೆಗಳನ್ನು ನೀಡಿದರು. ಮನೆ ಮಾಲೀಕರು ಮನೆ ಬಿಟ್ಟು ಹೊರ ಊರಿಗೆ ಹೋದಾಗ ಮನೆಯಲ್ಲಿ ನಂಬಿಕಸ್ಥರನ್ನು ಮಲಗಿಸಬೇಕು, ಬೆಲೆ ಬಾಳುವ ಚಿನ್ನಾಭರಣಗಳನ್ನು ಮನೆಯಲ್ಲಿಡದೆ ಬ್ಯಾಂಕ್ ಲಾಕರ್ನಲ್ಲಿಡಬೇಕು, ಮನೆಯ ಬಳಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು, ಅಪರಿಚಿತರು ನೀವು ಇಲ್ಲದಿರುವಾಗ ಬಾಗಿಲನ್ನು ಮುಟ್ಟಿದರೆ ಸೈರನ್ ಬರುವಂತೆ ಯಂತ್ರಗಳನ್ನು ಅಳವಡಿಸಿಕೊಳ್ಳಿ, ಅಪರಿಚಿತ ವ್ಯಕ್ತಿಗಳಿಗೆ ಯಾವುದೇ ತರಹದ ಸಹಾಯವನ್ನು ಅಥವಾ ಮಾಹಿತಿಯನ್ನು ನೀಡಬಾರದು, ಪೊಲೀಸರ ಹೆಸರಿನಲ್ಲಿ ಕರೆ ಮಾಡಿ ಡಿಜಿಟಲ್ ಅರೆಸ್ಟ್ ಮಾಡಲಾಗಿದೆ ಎಂದು ವಂಚಿಸುವರು, ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ ಮತ್ತೆ ಚಾಲನೆ ಮಾಡಲು ಒಟಿಪಿ ಹೇಳಿ ಎಂದು ಕೇಳುವರು, ಇಂತಹ ಬೇರೆ ಬೇರೆ ಕರೆ ಬಂದರೆ ೧೯೩೦ ಅಥವಾ ೧೧೨ಗೆ ಇಲ್ಲವೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಹೇಳಿದರು.
ಇದಲ್ಲದೆ ಪೊಲೀಸರು ಪ್ರತಿ ವಾರ್ಡಿನಲ್ಲೂ ಸಂಚರಿಸಿ ಮನೆ ಮನೆಗೂ ಭೇಟಿ ನೀಡಿ ಪೊಲೀಸರ ಸಲಹೆಗಳ ಕರ ಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.ಆರಕ್ಷಕ ಉಪ ನಿರೀಕ್ಷಕ ರಾಜಣ್ಣ ಇದ್ದರು.